Udaipur Tailor Murder ಜೈಪುರ ನ್ಯಾಯಾಲಯದ ಹೊರಗಡೆ ಸೇರಿದ್ದ ಜನರಿಂದ ಉದಯಪುರ ಟೈಲರ್ ಹಂತಕರ ಮೇಲೆ ಹಲ್ಲೆ

ನ್ಯಾಯಾಲಯ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಜುಲೈ 12ರವರೆಗೆ ಹಂತಕರ ಕಸ್ಟಡಿಯನ್ನು ನೀಡಿದೆ. 

Udaipur Tailor Murder ಜೈಪುರ ನ್ಯಾಯಾಲಯದ ಹೊರಗಡೆ ಸೇರಿದ್ದ ಜನರಿಂದ ಉದಯಪುರ ಟೈಲರ್ ಹಂತಕರ ಮೇಲೆ ಹಲ್ಲೆ
ಹಂತಕರ ಮೇಲೆ ಹಲ್ಲೆ
Updated By: ರಶ್ಮಿ ಕಲ್ಲಕಟ್ಟ

Updated on: Jul 02, 2022 | 6:04 PM

ದೆಹಲಿ: ಟೈಲರ್ ಕನ್ಹಯ್ಯಾ ಲಾಲ್ (Kanhaiya Lal) ಅವರ ಹಂತಕರ ಮೇಲೆ ಜೈಪುರ ನ್ಯಾಯಾಲಯದ (Jaipur court) ಹೊರಗೆ ಸೇರಿದ್ದ ಜನರ ಗುಂಪೊಂದು ಶನಿವಾರ ಹಲ್ಲೆ ನಡೆಸಿದೆ.  ಜನರ ಗುಂಪು ಆರೋಪಿಗಳ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿತು. ಪೊಲೀಸರು ಕೂಡಲೇ ಅವರನ್ನು ವ್ಯಾನ್​​​ನೊಳಗೆ ಹಾಕಿದ್ದು, ಹೆಚ್ಚಿನ ಹಲ್ಲೆಯಾಗದಂತೆ ಕಾಪಾಡಿದರು. ನ್ಯಾಯಾಲಯ ಇಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಜುಲೈ 12ರವರೆಗೆ ಹಂತಕರ ಕಸ್ಟಡಿಯನ್ನು ನೀಡಿದೆ. ಕನ್ಹಯ್ಯಾ ಲಾಲ್ (48) ಅವರನ್ನು ಮಂಗಳವಾರ ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಕತ್ತು ಸೀಳಿ ಕೊಲೆಗೈದಿದ್ದು ಕೊಲೆ ಕೃತ್ಯದ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದರು. ಕನ್ಹಯ್ಯಾ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಅಖ್ತರಿ ಮತ್ತು ಮೊಹಮ್ಮದ್ ಅವರನ್ನು ಬಂಧಿಸಲಾಯಿತು. ಕನ್ಹಯ್ಯಾ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ ಮತ್ತಿಬ್ಬರನ್ನೂ ಬಂಧಿಸಲಾಗಿತ್ತು. ನಾಲ್ವರು ಆರೋಪಿಗಳನ್ನು ಇಂದು ಜೈಪುರದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಈ ವೇಳೆ ಹಲವಾರು ವಕೀಲರು “ಪಾಕಿಸ್ತಾನ್ ಮುರ್ದಾಬಾದ್” ಮತ್ತು “ಕನ್ಹಯ್ಯಾ ಕೆ ಹತ್ಯಾರೋನ್ ಕೋ ಫಾಸಿ ದೋ” (ಕನ್ಹಯ್ಯಾ ಹಂತಕರಿಗೆ ಮರಣದಂಡನೆ ವಿಧಿಸಿ) ಎಂಬ ಘೋಷಣೆಗಳನ್ನು ಕೂಗಿದರು.

ನ್ಯಾಯಾಲಯವು ಜುಲೈ 12 ರವರೆಗೆ ಹಂತಕರ ಕಸ್ಟಡಿಯನ್ನು ಎನ್‌ಐಎಗೆ ನೀಡಿದೆ.

ಹತ್ಯೆಗಿಂತ ಮೊದಲು ಕನ್ಹಯ್ಯಾ ಲಾಲ್ ಅವರು ತಮ್ಮ ಖಾತೆಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್‌ನಿಂದ ಬೆದರಿಕೆಗಳು ಬಂದಿವೆ ಎಂದು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದರು.ಆದರೆ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

Published On - 5:17 pm, Sat, 2 July 22