ಬೆಂಗಳೂರು: ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣ; ನಾಲ್ವರು ಅರೆಸ್ಟ್

ರೌಡಿ ಶೀಟರ್ ಮಿಲ್ಟ್ರಿ ಸತೀಶ್​ನನ್ನು ಜನವರಿ 24 ರಂದು ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ಆತನ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ವೈಯಕ್ತಿಕ ದ್ವೇಷದಿಂದ ಸತೀಶ್​ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು: ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣ; ನಾಲ್ವರು ಅರೆಸ್ಟ್
ಮಿಲ್ಟ್ರಿ ಸತೀಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು

Updated on: Jan 27, 2024 | 5:07 PM

ಬೆಂಗಳೂರು, ಜ.27: ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ (Murder) ಪ್ರಕರಣ ಸಂಬಂಧ ನಗರದ (Bengaluru) ವಿವೇಕನಗರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವೇಕನಗರ ನಿವಾಸಿಗಳಾದ ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 18 ರಿಂದ 20 ವರ್ಷ ವಯಸ್ಸಿನವರಾಗಿದ್ದು, ವೈಯಕ್ತಿಕ ದ್ವೇಷದಿಂದ ಸತೀಶ್​ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಟಿವಿ9 ಕನ್ನಡದ ಪ್ರಕಾರ, ಸತೀಶ್ ಕೊಲೆಯಾಗುವ ಒಂದು ದಿನದ ಮೊದಲು ಬಾರ್​ನಲ್ಲಿ ರೌಡಿಶೀಟರ್​ ಆರೋಪಿಯನ್ನು ನಿಂದಿಸಿದ್ದನು. ಇದರಿಂದ ಕೋಪಗೊಂಡಿದ್ದ ಆರೋಪಿಗಳು ಸತೀಶ್‌ ಕೊಲೆ ಮಾಡಲು ಪ್ಲಾನ್ ಮಾಡಿದ್ದರು. ಅದರಂತೆ ಬೆಂಗಳೂರಿನ ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ತಮ್ಮ ಮನೆಯ ಹೊರಗೆ ಮಲಗಿದ್ದ ಸತೀಶ್​ನನ್ನು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.

ಇದನ್ನೂ ಓದಿ: ಬಾಗಲಕೋಟೆ: ಆಸ್ತಿಗಾಗಿ ಅಪ್ಪನನ್ನೇ ಕೊಲೆ ಮಾಡಿಸಿದ್ದ ಮಗ, ಸೊಸೆ ಅರೆಸ್ಟ್

ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳುವ ಪ್ರಕಾರ, ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್‌ನನ್ನು ಕೊಲೆ ಮಾಡಿದ ಆರೋಪಿಗಳು ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದರು.

ಹತ್ಯೆ ಬಗ್ಗೆ ದೂರು ನೀಡಿದ ಸತೀಶ್ ಪತ್ನಿ

ಸತೀಶ್ ತನ್ನ ಮನೆಯಲ್ಲಿ ಕೊಲೆಯಾದ ನಂತರ ಪತ್ನಿ, ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ