ಶಿರಾಳಕೊಪ್ಪ: ಸುಂದರಿಯ ಬೆನ್ನುಬಿದ್ದು ಮದುವೆಯಾಗಿದ್ದ ಆತ, ಆದರೆ ಕೆಲವೇ ತಿಂಗಳಿಗೆ ಪ್ರೀತಿ ಕಮ್ಮಿಯಾಯ್ತು, ಮುಂದೆ ನಡೆಯಿತು ದುರಂತ

ಹರೀಶ್ ಎರಡು ಲಾರಿ ಬಸ್ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದನು. ಸಂಗೀತಾ ಬಿಎಸ್ಸಿ ಪದವೀಧರೆ. ಒಂದು ವರ್ಷದ ಹಿಂದೆ ಇದೇ ಯುವತಿ ನನಗೆ ಬೇಕು ಅಂತಾ ಬೆನ್ನುಬಿದ್ದು ಹರೀಶ್ ಆಕೆಯನ್ನೇ ಮದುವೆ ಆಗಿದ್ದನು.

ಶಿರಾಳಕೊಪ್ಪ: ಸುಂದರಿಯ ಬೆನ್ನುಬಿದ್ದು ಮದುವೆಯಾಗಿದ್ದ ಆತ, ಆದರೆ ಕೆಲವೇ ತಿಂಗಳಿಗೆ ಪ್ರೀತಿ ಕಮ್ಮಿಯಾಯ್ತು, ಮುಂದೆ ನಡೆಯಿತು ದುರಂತ
ಸುಂದರಿಯ ಬೆನ್ನುಬಿದ್ದು ಮದುವೆಯಾಗಿದ್ದ ಆತ, ಮುಂದೆ ನಡೆಯಿತು ದುರಂತ
Edited By: ಸಾಧು ಶ್ರೀನಾಥ್​

Updated on: Dec 13, 2022 | 10:55 AM

ಸುಂದರಿಯ ಹಿಂದೆ ಬೆನ್ನುಬಿದ್ದ ಆತ ಮದುವೆಯಾಗಿದ್ದನು. ಮದುವೆಯಾಗಿ ಕೆಲವೇ ತಿಂಗಳಿಗೆ ಸುಂದರಿಯ (woman) ಮೇಲಿನ ಪ್ರೀತಿ ಕಮ್ಮಿಯಾಯ್ತು. ಈ ಹಂತದಲ್ಲಿ, ಪತಿ ಮತ್ತು ಅತ್ತೆ ಮಾವ ಕೊಟ್ಟ ಟಾರ್ಚರ್ ನವವಿವಾಹಿತೆಯ ಬಲಿ ಪಡೆದಿದೆ. ಅಷ್ಟಕ್ಕೂ ಇಷ್ಟಪಟ್ಟು ಮದುವೆ ಆದ ಪತಿ ಮತ್ತು ಆತನ ಕುಟುಂಬ ಮಾಡಿದ್ದು ಏನು..? ಮದುವೆಯಾಗಿ ಒಂದೂವರೆ ವರ್ಷಕ್ಕೆ ಪತ್ನಿ ಸಾವು ಆಗಿದ್ದು ಯಾಕೆ..? ಸುಂದರಿ ಸಾವಿನ ರಹಸ್ಯ ಇಲ್ಲಿದೆ (shivamogga crime).

ಒಂದೂವರೆ ವರ್ಷದ ಹಿಂದೆ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದ ಸಂಗೀತಾ ಮತ್ತು ಇದೇ ತಾಲೂಕಿನ ಶಿರಾಳಕೊಪ್ಪ (shiralakoppa) ಗ್ರಾಮದ ಹರೀಶ್ ಜೊತೆ ಅರೇಂಜ್ ಮ್ಯಾರೇಜ್ ಆಗಿತ್ತು. ಹರೀಶ್ ಎರಡು ಲಾರಿ ಬಸ್ ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದನು. ಸಂಗೀತಾ ಬಿಎಸ್ಸಿ ಪದವೀಧರೆ. ಕುರುಬ ಸಮಾಜದ ಎರಡು ಕುಟುಂಬಗಳು ಅವು. ಒಂದು ವರ್ಷದ ಹಿಂದೆ ಇದೇ ಯುವತಿ ನನಗೆ ಬೇಕು ಅಂತಾ ಬೆನ್ನುಬಿದ್ದು ಹರೀಶ್ ಆಕೆಯನ್ನೇ ಮದುವೆ ಆಗಿದ್ದನು. 20-5-21 ರಂದು ಶಿರಾಳಕೊಪ್ಪದ ಪಟ್ಟಣದ ವೀರಭದ್ರಪ್ಪ ಕಲ್ಯಾಣ ಮಂದಿರದಲ್ಲಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು (Marriage).

40 ಗ್ರಾಂ ಚಿನ್ನಾಭರಣ, 1.80 ಲಕ್ಷ ಮೌಲ್ಯದ ಪಾತ್ರೆ ಪಗಡೆ ಸೇರಿದಂತೆ ಗೃಹ ಬಳಿಕೆ ವಸ್ತುಗಳನ್ನು ನೀಡಿದ್ದರು. ವಧು ಸುಂದರಿಯಾಗಿದ್ದರಿಂದ ಮದುವೆ ನಾವೇ ಮಾಡಿಕೊಳ್ಳುತ್ತೇವೆ ಎಂದಿದ್ದರು. ಹೀಗೆ ಪತಿ ಹರೀಶ್ ಮತ್ತು ಗಂಡನ ಮನೆಯವರು ತುಂಬಾ ಸಭ್ಯ ಸುಸುಂಸ್ಕೃತ ಕುಟುಂಬ ಅಂತಾ ಹೈಡ್ರಾಮಾ ಮಾಡಿದ್ದರು.

ಶ್ರೀಮಂತ ಕುಟುಂಬವಾಗಿದ್ದ ಹಿನ್ನೆಲೆಯಲ್ಲಿ ಹುಡುಗ ಕೇವಲ ಪಿಯುಸಿ ವಿಧ್ಯಾಬ್ಯಾಸ ಮಾಡಿದ್ದರೂ ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡಿದ್ದರು. ಮಗಳು ಸುಖ ಸಂತೋಷವಾಗಿ ಇರಬೇಕೆಂದು ಪೋಷಕರು ಆ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು.

ಇದನ್ನೂ ಓದಿ: ಶಿರಾಳಕೊಪ್ಪ: 2ನೇ ವಿವಾಹವಾದ ನಿವೃತ್ತ ಪೊಲೀಸ್​​ ತಂದೆಯನ್ನು ಮಕ್ಕಳೇ ಸುಪಾರಿ ಕೊಟ್ಟು ಸಾಯಿಸಿದರು! ಅಂಥಾ ಕಾರಣವೇನಿತ್ತು?

ಲಕ್ಷಾಂತರ ರೂಪಾಯಿ ವರದಕ್ಷಿಣೆ ವರೋಪಚಾರ ಕೊಟ್ಟು ಮದುವೆ ಮಾಡಿದ ಹತ್ತವರಿಗೆ ಈಗ ದೊಡ್ಡ ಆಘಾತ. ನ. 30 ರಂದು ಸಂಗೀತಾ ಸಾವು ಆಗಿದೆ. ಡಿ.1 ರಂದು ಬೆಳಗ್ಗೆ ಪತಿ ಹರೀಶ್ ಪತ್ನಿ ಮೃತಪಟ್ಟಿರುವ ಮಾಹಿತಿಯನ್ನು ಹೆತ್ತವರಿಗೆ ಕೊಟ್ಟಿದ್ದನು. ಇದರ ಬಳಿಕ ಹೆತ್ತವರು ಗಂಡನ ಮನೆಗೆ ಹೋಗಿ ನೋಡಿದ್ರೆ ಸಂಗೀತಾ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಕಾಲು ನೆಲಕ್ಕೆ ತಾಗಿತ್ತು. ಸೀರೆಯಿಂದ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಶವವಿತ್ತು. ಘಟನಾ ಸ್ಥಳದ ಎಲ್ಲ ಸನ್ನಿವೇಶ ನೋಡಿದಾಗ ಇದೊಂದು ಪೂರ್ವ ನಿಯೋಜಿತ ಕೊಲೆ ಕೃತ್ಯವೆಂದು ಹೆತ್ತವರಿಗೆ ಮನವರಿಕೆ ಆಗಿತ್ತು.

ತಂದೆ ತಾಯಿ ಮುದ್ದಾಗಿ ಅರಗಿಣಿಯಂತೆ ಸಾಕಿದ್ದ ಮಗಳ ಸಾವು ಕಂಡು ಎದೆ ಬಡಿದುಕೊಂಡು ಕಣ್ಣೀರು ಹಾಕಿದರು. ಪತ್ನಿ ಸಾವಿನ ಬಳಿಕ, ಇನ್ನೂ ದೂರು ಕೊಡುವ ಮೊದಲೇ ಪತಿ ಹರೀಶ್ ಶಿರಾಳಕೊಪ್ಪ ಪೊಲೀಸ್ ಠಾಣೆಗೆ ಶರಣಾಗಿದ್ದನು. ಗಂಡ ಮತ್ತು ಗಂಡನ ಕುಟುಂಬಸ್ಥರ ಎಲ್ಲ ನಡುವಳಿಕೆಗಳು ಗಮನಿಸಿದಾಗ ಇದೊಂದು ಕೊಲೆ ಎನ್ನುವುದು ಸಂಗೀತಾ ಹೆತ್ತವರಿಗೆ ಮೇಲ್ನೋಟಕ್ಕೆ ಕಂಡು ಬಂದಿತ್ತು. ಹೀಗಾಗಿ ಪತಿ ಮತ್ತು ಅತ್ತೆ ಮಾವನ ಮನೆಯವರ ವಿರುದ್ದ ದೂರು ನೀಡಿದ್ದರು.

ಸಂಗೀತಾ ಕುಟುಂಬಸ್ಥರು ರೈತಾಪಿ ಕುಟುಂಬ. ಮನೆಯಲ್ಲಿ ಆರ್ಥಿಕವಾಗಿ ಚೆನ್ನಾಗಿ ಇದ್ದಾರೆ. ಮಗಳಿಗೆ ಶಿಕಾರಪುರದಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಕೊಡಿಸಿದ್ದರು. ಸಂಗೀತಾಗೆ ಸರಕಾರಿ ನೌಕರರ ಇರುವ ವ್ಯಕ್ತಿಗೆ ಕೊಟ್ಟು ಮದುವೆ ಮಾಡಬೇಕೆನ್ನುವ ಕನಸು ಕಂಡಿದ್ದರು. ಆದ್ರೆ ಪಕ್ಕದ ನಾಲ್ಕು ಕಿ.ಮೀ. ದೂರದಲ್ಲಿರುವ ಶಿರಾಳಕೊಪ್ಪ ಪಟ್ಟಣದ ಹರೀಶ್ ಗೆ ಸಂಗೀತಾ ಮೇಲೆ ಕಣ್ಣು ಬಿದ್ದಿತ್ತು. ಹರೀಶ್ ಓದಿದ್ದು ಕೇವಲ ಪಿಯುಸಿ ಮಾತ್ರ. ಬಿಎಸ್ಸಿ ವಿದ್ಯಾವಂತೆಗೆ ಒತ್ತಾಯ ಮಾಡಿ ಮದುವೆಯಾಗಿದ್ದನು.

ಮದುವೆಯಾಗಿ ಇನ್ನೂ ಒಂದೂವರೆ ವರ್ಷ ಆಗಿತ್ತು. ಅಷ್ಟರಲ್ಲೇ ಮಗನಿಗೆ ಇನ್ನೂ ಮಗುವಾಗಿಲ್ಲ ಅಂತಾ ಅತ್ತೆ ಮಾನಸಿಕ ಕಿರುಕುಳ ಶುರುಮಾಡಿದ್ದಳು. ಸಂಗೀತಾ ತವರು ಮನೆಯಲ್ಲಿ ಚೆನ್ನಾಗಿ ಇದ್ದು ಬಂದವಳು. ಗಂಡ ಮನೆಯಲ್ಲಿ ಕೆಲವು ತಿಂಗಳಿನಿಂದ ತಿಂಡಿ.. ಊಟ ಎಲ್ಲದಕ್ಕೂ ಕಿರಿಕಿರಿ ಶುರುವಾಗಿತ್ತು. ಸಂಗೀತಾ ಕದ್ದು ಮುಚ್ಚಿ ಬಾತ್ ರೂಂ ನಲ್ಲಿ ಹೋಗಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಳು. ಇವರ ಮುಂದೆ ತಿಂಡಿ ಊಟ ಮಾಡಿದ್ರೆ ಅವಳ ಕಥೆ ಮುಗಿದಂತೆ. ಒಂದು ತುತ್ತು ಹೆಚ್ಚು ತಿನ್ನುವ ಹಾಗಿಲ್ಲ. ಅವರು ಹೇಳಿದ್ದಷ್ಟೇ ಸ್ವಲ್ಪ ಸ್ವಲ್ಪ ತಿಂಡಿ.. ಊಟ ಮಾಡಬೇಕಿತ್ತು.

ಹೆಚ್ಚು ಊಟ ಮಾಡಿದ್ರೆ ಸೊಸೆಯು ದಪ್ಪ ಆಗುತ್ತಾಳೆ. ದಪ್ಪ ಇದ್ದರೆ ಮಕ್ಕಳು ಆಗುವುದಿಲ್ಲ. ಇದಕ್ಕೆ ಅತ್ತೆ.. ಮಾವ ಸೇರಿದಂತೆ ಗಂಡನ ಮನೆಯವರದ್ದು ನಿತ್ಯ ಕಿರಿಕಿರಿ. ಇವರ ಚುಚ್ಚು ಮಾತುಗಳಿಂದ ಸಂಗೀತಾ ಅಕ್ಷರಶಃ ಮಾನಸಿಕವಾಗಿ ಕುಸಿದು ಹೋಗಿದ್ದಳು. ಆಸ್ತಿ ಅಂತಸ್ತು, ಶ್ರೀಮಂತಿಕೆ ಗಂಡನ ಮನೆಯಲ್ಲಿ ಎಲ್ಲವೂ ಇದ್ದರೂ ಯಾವುದೇ ಪ್ರಯೋಜವಾಗಿರಲಿಲ್ಲ. ಇದೆಲ್ಲ ಕೇವಲ ಸಮಾಜದಲ್ಲಿ ತೋರಿಕೆಗೆ ಮಾತ್ರ ಎನ್ನುವುದು ಸಂಗೀತಾಳಿಗೆ ಮನವರಿಕೆಯಾಗಿತ್ತು.

ಸಾವಿನ ಮೊದಲು ಕೆಲವು ದಿನಗಳ ಹಿಂದೆ ತವರು ಮನೆಗೆ ಬಂದಿದ್ದ ಸಂಗೀತಾ, ತನ್ನ ಕಣ್ಣೀರಿನ ಕಥೆಯನ್ನು ತವರು ಮನೆಯಲ್ಲಿ ಎಳೆ ಎಳೆಯಾಗಿ ಬಿಚ್ಚಿಯಿಟ್ಟಿದ್ದಳು. ಹೆತ್ತವರು ಮಗಳಿಗೆ ಸಮಾಧಾನ ಮಾಡಿ ಧೈರ್ಯ ತುಂಬಿ ಎಲ್ಲವೂ ಸರಿ ಹೋಗುತ್ತದೆ. ನಾವೆಲ್ಲರೂ ಸೇರಿ ಸರಿ ಮಾಡುತ್ತೇವೆಂದು ಹೇಳಿದ್ದರು. ಆದ್ರೆ ನ. 30 ರಾತ್ರಿ ಸಂಗೀತಾ ಕೊನೆ ಕಾಲ್. ತಾಯಿಗೆ ಕರೆ ಮಾಡಿ ಮಗಳ ಜೊತೆ ಮಾತನಾಡಿದ್ದಳು. ಸಂಗೀತಾ ಭಯದಲ್ಲೇ ತನ್ನ ಆರೋಗ್ಯ ಸರಿಯಲ್ಲ ಅಂತಾ ಹೇಳಿದ್ದಳಂತೆ. ಬೆಳಗ್ಗೆ ತಾಯಿ ಬಂದು ನೋಡುವುದಾಗಿ ಮಗಳಿಗೆ ಸಮಾಧಾನ ಮಾಡಿದ್ದರು. ಆದರೆ ಮರುದಿನ ಬೆಳಗ್ಗೆಯೇ ಸಂಗೀತಾಳ ಸಾವಿನ ಸುದ್ದಿಯ ದೊಡ್ಡ ಆಘಾತವು ಅಪ್ಪಳಿತ್ತು.

ಇದರಿಂದ ಹೆತ್ತವರು, ಸಂಬಂಧಿಕರು ಮತ್ತು ಗ್ರಾಮಸ್ಥರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅತ್ತೆ ದ್ಯಾಮವ್ವ, ಮಾವ ಶಿವಲಿಂಗಪ್ಪ, ಪತಿ ಹರೀಶ್ ಸೋದರ ಅತ್ತೆ ಸರೋಜಮ್ಮ, ಹರೀಶ್ ಸಹೋದರ ಮಾಲತೇಶ್ ಇವರೆಲ್ಲರೂ ಸೇರಿ ಸಂಗೀತಾಳ ಉಸಿರೇ ನಿಲ್ಲಿಸಿದ್ದಾರೆಂದು ಸಂಗೀತಾಳ ಹೆತ್ತವರು ಆರೋಪ ಮಾಡುತ್ತಿದ್ದಾರೆ. 24 ವರ್ಷದ ಸಂಗೀತಾಳನ್ನು ಗಂಡ ಮತ್ತು ಗಂಡನ ಕುಟುಂಬಸ್ಥರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬಲಿ ಪಡೆದಿದ್ದಾರೆ ಎನ್ನುತ್ತಾರೆ ಗ್ರಾಮದ ಮುಖಂಡರು. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:43 am, Tue, 13 December 22

Web contact

TV9 Kannada

Read More
Follow Us