ಅನೈತಿಕ ಸಂಬಂಧಕ್ಕೆ ಅಡ್ಡಿ; ಗಂಡನಿಗೆ ಮದ್ಯಪಾನ ಮಾಡಿಸಿ ಉಸಿರು ಗಟ್ಟಿಸಿ ಕೊಂದ ಪತ್ನಿ!

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 21, 2024 | 10:20 PM

ರಾಯಚೂರು ತಾಲ್ಲೂಕಿನ ಸಿಂಗನೋಡಿ ತಾಂಡಾ ನಿವಾಸಿ, ಸಮಾಜ ಸೇವೆ ಮಾಡುತ್ತಾ ತಾಲ್ಲೂಕು ಪಂಚಾಯಿತಿ ಸದಸ್ಯನಾಗಿದ್ದ. ಬಡ ಬಗ್ಗರಿಗೆ ಹೆಗಲು ಕೊಟ್ಟು ನಿಲ್ಲುತ್ತಿದ್ದ ಆತ, ರಾತ್ರೋ ರಾತ್ರಿ ಹೆಣವಾಗಿ ಹೋಗಿದ್ದ. ಅಷ್ಟಕ್ಕೂ ಆತನ ಉಸಿರು ನಿಲ್ಲಿಸಿದ್ದು ಬೇರೆ ಯಾರೂ ಅಲ್ಲ, ಆತನ ಜೊತೆ ಸಪ್ತಪದಿ ತುಳಿದು ಸಂಸಾರ ನಡೆಸುತ್ತಿದ್ದ ಮುದ್ದಿನ ಮಡದಿ.

ಅನೈತಿಕ ಸಂಬಂಧಕ್ಕೆ ಅಡ್ಡಿ; ಗಂಡನಿಗೆ ಮದ್ಯಪಾನ ಮಾಡಿಸಿ ಉಸಿರು ಗಟ್ಟಿಸಿ ಕೊಂದ ಪತ್ನಿ!
ಗಂಡನಿಗೆ ಮದ್ಯಪಾನ ಮಾಡಿಸಿ ಉಸಿರು ಗಟ್ಟಿಸಿ ಕೊಂದ ಪತ್ನಿ
Follow us on

ರಾಯಚೂರು, ಮಾ.21: ತಾಲ್ಲೂಕಿನ ಸಿಂಗನೋಡಿ  ತಾಂಡಾದಲ್ಲಿ ಜನಸೇವೆ ಮಾಡಿಕೊಂಡಿದ್ದ ಟಿ.ಎ.ರಾಜು ನಾಯ್ಕ್​​ ಎನ್ನುವ ವ್ಯಕ್ತಿ ಮಾರ್ಚ್​ 19 ರಂದು ರಾತ್ರಿ ಮಲಗಿದ್ದಲ್ಲೇ ಮೃತಪಟ್ಟಿದ್ದ. ನಿನ್ನೆ(ಮಾ.20) ಬೆಳಿಗ್ಗೆ ಆತನ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ರಾಯಚೂರು(Raichur) ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸಿಂಗನೋಡಿ ಪಂಚಾಯಿತಿ ಹಾಲಿ ಸದಸ್ಯನಾಗಿದ್ದ ಟಿ.ಎ ರಾಜು ನಾಯ್ಕ್​​​ ಒಳ್ಳೆಯ ವ್ಯಕ್ತಿ. ಕಷ್ಟ ಅಂದರೆ ಕರಗಿ ಹೋಗುತ್ತಿದ್ದವ ರಾತ್ರೋ ರಾತ್ರಿ ಹೆಣವಾಗಿದ್ದಾನೆ ಎಂಬ ವಿಷಯ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ಈ ಹಿನ್ನಲೆ ನಿನ್ನೆ ಬೆಳಿಗ್ಗೆ ಆತನ ಪತ್ನಿ ಸ್ನೇಹಾರನ್ನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರಶ್ನಿಸಿದ್ದರು. ಆದ್ರೆ, ಆಕೆ ಏನನ್ನು ಬಾಯಿ ಬಿಟ್ಟಿರಲಿಲ್ಲ. ನಂತರ ಮೃತನ ಕುಟುಂಬಸ್ಥರು ನೀಡಿದ ದೂರಿನ ಮೆರೆಗೆ ಯಾಪಲದಿನ್ನಿ ಪೊಲೀಸರು ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿತ್ತು.

ಮೃತ ಟಿ.ಎ ರಾಜು ನಾಯ್ಕ್​ ಪತ್ನಿ ಸ್ನೇಹಾ ಗ್ರಾಮಸ್ಥರ ಪ್ರಶ್ನೆಗಳಿಗೆ ತಬ್ಬಿಬ್ಬಾಗಿದ್ದಳು. ಇದರಿಂದ ಗ್ರಾಮಸ್ಥರಲ್ಲಿ ಅನುಮಾನ ಮೂಡಿತ್ತು. ನಂತರ ಯಾಪಲದಿನ್ನಿ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಟಾಬಯಲಾಗಿದೆ. ಮೃತನ ಪತ್ನಿ ಸ್ನೇಹಾ ಅನೈತಿಕ ಸಂಬಂಧ ಹೊಂದಿದಳು. ಇದೇ ಅಕ್ರಮ ಸಂಬಂಧದ ಭಾಗವಾಗಿ ಪತಿಯನ್ನ ಹತ್ಯೆಗೈದಿದ್ದಾಳೆ ಎನ್ನುವುದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಸಿಂಗನೋಡಿ ತಾಂಡಾದಲ್ಲಿ ದೇವಸ್ಥಾನವೊಂದರ ಕಾಮಗಾರಿ ನಡೆಯುತ್ತಿತ್ತು. ಆಗ ಆ ಕೆಲಸಕ್ಕೆ ಮಹಾರಾಷ್ಟ್ರ ಮೂಲದ ರಾಜು ಎನ್ನುವ ವ್ಯಕ್ತಿ ಸೇರಿ ನಾಲ್ಕೈದು ಜನ ಕೆಲಸಕ್ಕೆ ಬಂದಿದ್ರು. ಹೀಗೆ ಕೆಲಸಕ್ಕೆ ಬಂದಿದ್ದ ರಾಜು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜು ನಾಯ್ಕ್​ ಪತ್ನಿ ಸ್ನೇಹಾ ಮೇಲೆ ಕಣ್ಣು ಹಾಕಿದ್ದ. ಆ ಬಳಿಕ ಪರಿಚಯ, ಸ್ನೇಹವಾಗಿ ರಾಜು ನಾಯ್ಕ್​ ಪತ್ನಿ ಸ್ನೇಹಾ ಹಾಗೂ ಕೆಲಸಕ್ಕೆ ಬಂದಿದ್ದ ರಾಜು ನಡುವೆ ಅನೈತಿಕ ಸಂಬಂಧ ಶುರುವಾಗಿತ್ತು.

ಇದನ್ನೂ ಓದಿ:ವಿಜಯಪುರ: ಅನೈತಿಕ ಸಂಬಂಧದ ಶಂಕೆ; ಮಾರಕಾಸ್ತ್ರಗಳಿಂದ ಕೊಚ್ಚಿ ಜೋಡಿ ಕೊಲೆ

ಇದಾದ ಕೆಲವು ತಿಂಗಳುಗಳ ಬಳಿಕ ಪತಿ ಟಿ.ಎ.ರಾಜು ನಾಯ್ಕ್​​ಗೆ ಗೊತ್ತಾಗಿತ್ತು. ಆತ ಪತ್ನಿಗೆ ಬೈದು ಬುದ್ದಿ ಹೇಳಿದ್ದ. ಇತ್ತ ಗ್ರಾಮಸ್ಥರು ಕೆಲಸಕ್ಕೆ ಬಂದಿದ್ದ ರಾಜುನನ್ನ ತರಾಟೆಗೆ ತೆಗೆದುಕೊಂಡು ಊರು ಬಿಡಿಸಿದ್ದರು. ಆದ್ರೆ, ಅವರಿಬ್ಬರ ನಡುವೆ ಫೋನ್ ಸಂಪರ್ಕ ಆಕ್ಟಿವ್ ಆಗಿಯೇ ಇತ್ತು. ಆಗಾಗ ಪಟ್ಟಣಕ್ಕೆ ಹೋಗಿ ಭೇಟಿಯಾಗುತ್ತಿದ್ದರಂತೆ. ಇದರ ಭಾಗವಾಗಿ ಪತಿಯನ್ನ ಕೊಂದು ಒಂದಾಗೋಕೆ ಪತ್ನಿ ಸ್ನೇಹಾ ಮುಂದಾಗಿದ್ದಳಂತೆ. ಅದರಂತೆ ಮೊನ್ನೆ ಪತಿ ರಾಜು ನಾಯ್ಕ್​​ ಎಂದಿನಂತೆ ಮನೆಯಲ್ಲಿ ಮದ್ಯಪಾನ ಮಾಡೋವಾಗ ಆತನಿಗೆ ಪತ್ನಿ ಸ್ನೇಹಾ ಹೆಚ್ಚು ಕುಡಿಸಿದ್ದಾಳೆ. ನಂತರ ರಾತ್ರಿ ಮಲಗಿದ್ದಾಗ ಆತನ ಕತ್ತು ಹಿಸುಕಿ ಕೊಂದಿದ್ದಾಳೆ. ಬೆಳಿಗ್ಗೆ ಆತನ ಸಹಜವಾಗಿ ಮೃತಪಟ್ಟಿರುವ ರೀತಿ ಡ್ರಾಮಾ ಮಾಡಿದ್ದು, ಇದೀಗ ಸತ್ಯ ಬೆಳಕಿಗೆ ಬಂದಿದೆ.

ಈ ಬಗ್ಗೆ ಯಾಪಲದಿನ್ನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ರಾಜು ನಾಯ್ಕ್​ ಪತ್ನಿ ಸ್ನೇಹಾಳನ್ನ ವಶಕ್ಕೆ ಪಡೆದಿದ್ದಾರೆ. ಇದು ಕೊಲೆ ಪ್ರಕರಣ ಎಂದು ದೃಢವಾದ ಬಳಿಕ ಇಂದು ಮರಣೋತ್ತರ ಪರೀಕ್ಷೆ ಮಾಡಿ ಅಂತ್ಯಕ್ರಿಯೆ ನಡೆಸಲಾಗಿದೆ. ಆಕೆಗೆ ಕುಮ್ಮಕ್ಕು ನೀಡಿದ್ದ ಪ್ರಿಯಕರ ರಾಜುಗಾಗಿ ಶೋಧ ಕಾರ್ಯ ನಡೀತಿದೆ. ಆದ್ರೆ, ಇತ್ತ ಹೆತ್ತ ತಂದೆ ಹೆಣವಾಗಿದ್ರೆ, ತಾಯಿ ಜೈಲು ಸೇರಿದ್ದು, ಮಕ್ಕಳು ಅನಾಥವಾಗಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ