ಬೆಂಗಳೂರು: ಸೈಕಲ್​ನಲ್ಲಿ ಓಡಾಡುತ್ತ ಮನೆಗಳ್ಳತನ, ಬಂಧಿತನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಸೈಕಲ್​ನಲ್ಲಿ ಓಡಾಡುತ್ತ ಲೈಟ್ ಆಫ್​ ಆದ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮನೆಗಳ್ಳತನ ಮಾಡಿ ಅಸ್ಸಾಂಗೆ ಹೋಗಿದ್ದ ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಬಂಧಿತನಿಂದ 1 ಕೋಟಿ 29 ಲಕ್ಷದ 35 ಸಾವಿರ ಮೌಲ್ಯದ 2141 ಗ್ರಾಂ ಚಿನ್ನ, 1313 ಗ್ರಾಂ ಬೆಳ್ಳಿ 70 ಸಾವಿರ ನಗದು ಹಣ ಹಾಗೂ ಒಂದು ಸ್ವಿಫ್ಟ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು: ಸೈಕಲ್​ನಲ್ಲಿ ಓಡಾಡುತ್ತ ಮನೆಗಳ್ಳತನ, ಬಂಧಿತನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
ಸೈಕಲ್​ನಲ್ಲಿ ಓಡಾಡುತ್ತ ಮನೆಗಳ್ಳತನ ಮಾಡ್ತಿದ್ದ ಪ್ರದೀಪ್ ಮಂಡಲ್
Edited By: ಆಯೇಷಾ ಬಾನು

Updated on: Feb 28, 2024 | 2:47 PM

ಬೆಂಗಳೂರು, ಫೆ.28: ದಿಢೀರ್ ಶ್ರೀಮಂತನಾಗೊ ಕನಸು ಕಂಡಿದ್ದ ಪ್ರದೀಪ್ ಮಂಡಲ್ ಎಂಬ ವ್ಯಕ್ತಿ ಸೈಕಲ್​ನಲ್ಲಿ ರೌಂಡ್ಸ್ ಹಾಕುತ್ತಲೇ ಕಳ್ಳತನಕ್ಕೆ (Theft) ಪ್ಲಾನ್ ಮಾಡ್ತಿದ್ದ. ಸೈಕಲ್‌ ನಲ್ಲಿ ಬಂದು 2 ಕೆಜಿ ಚಿನ್ನಾಭರಣದ (Jewels) ಜೊತೆ ಎಸ್ಕೇಪ್ ಆಗಿದ್ದ. ಸದ್ಯ ಈಗ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ (Seshadripuram Police). ಮಧ್ಯರಾತ್ರಿ ಕೈಯಲ್ಲೊಂದು ಕೋಲು ಹಿಡಿದುಕೊಂಡು ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡ್ಕೊಂಡು ದೊಡ್ಡ ಕುಳ‌ ಇರೊ ಮನೆಯನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿನ ಚಿನ್ನಾಭರಣ ದೋಚಿ ಹೆಗಲಮೇಲೆ ಬ್ಯಾಗ್ ಏರಿಸಿಕೊಂಡು ಈತ ಕಳ್ಳತನ ಮಾಡಿದ್ದ.

ಶೇಷಾದ್ರಿಪುರಂ ನಲ್ಲಿ ವಾಸವಿರುವ ಮಂಜುಳಾ ದೇವಿ ಹಾಗೂ ಕುಟುಂಬಸ್ಥರು ಜನವರಿ 17 ರಂದು ಹುಟ್ಟೂರು ರಾಜಸ್ಥಾನಕ್ಕೆ ತೆರಳಿದ್ರು. ವಾಪಸ್ಸು ಫೆಬ್ರವರಿ 4 ರಂದು ಬಂದು ನೋಡಿದಾಗ ಶಾಕ್ ಆಗಿತ್ತು. ಯಾಕಂದ್ರೆ ಮನೆಯಲ್ಲಿ‌ ಇಟ್ಟಿದ್ದ ಎರಡು ಕೆಜಿ ಚಿನ್ನಾಭರಣ ಕಾಣೆಯಾಗಿತ್ತು. ತಕ್ಷಣ ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ರು. ಅಲರ್ಟ್ ಆದ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಅಲ್ಲಿಗೆ ಕಳ್ಳತನ ಆಗಿದೇ ಅನ್ನೋದು ಕನ್ಫರ್ಮ್ ಆಗಿತ್ತು. ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕಳ್ಳನ ಅಸಲಿ ಆಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರದೀಪ್ ಮಂಡಲ್ ಎಂಬ ಅಸ್ಸಾಂ ಮೂಲದ ವ್ಯಕ್ತಿ ಕಳ್ಳತನ ಮಾಡಿರೋದು ಬಯಲಾಗಿದೆ.

ಇದನ್ನೂ ಓದಿ: ಡ್ರೈ ಕ್ಲೀನಿಂಗ್​ಗೆ ನೀಡಿದ್ದ ಪ್ಯಾಂಟ್‌ ಹಿಂದಿರುಗಿಸದೇ ಸತಾಯಿಸಿದಕ್ಕೆ ದಂಡ ವಿಧಿಸಿದ ಹಾಸನ ಗ್ರಾಹಕರ ಕೋರ್ಟ್

23 ರ ಮಧ್ಯರಾತ್ರಿ ಸೈಕಲ್ ನಲ್ಲಿ ಬಂದ ಕಳ್ಳ ಸೈಕಲ್ ಬಿಟ್ಟು ನಡೆದುಕೊಂಡೇ ಬಂದಿದ್ದ. ಹೀಗೆ ಬಂದವನಿಗೆ ಮನೆ ಲೈಟ್ ಆಫ್ ಆಗಿರೋದು ಕಂಡಿದೆ. ಹಾಗಾಗಿ ಮನೆಗಳ್ಳತನಕ್ಕೆ ನಿರ್ಧಾರ ಮಾಡಿಬಿಟ್ಟಿದ್ದ. ಮನೆ ಮೇಲೆ ಹತ್ತಿದ್ದ ಆರೋಪಿ ಕಿಟಕಿ ಸರಳುಗಳನ್ನು ಮುರಿದು ರೂಮಿನೊಳಗೆ ಪ್ರವೇಶಿಸಿದ್ದ. ಲಾಕರ್ ಮುರಿದು ನೋಡಿದವ್ನಿಗೆ ಅಪಾರ ಪ್ರಮಾಣದ ಚಿನ್ನಾಭರಣ ಕಂಡಿದೆ. ಎಲ್ಲವನ್ನು ಬ್ಯಾಗ್ ನಲ್ಲಿ‌ ತುಂಬಿಕೊಂಡವನೇ ಹೆಗಲ‌ ಮೇಲೇರಿಸಿಕೊಂಡು ಹುಟ್ಟೂರು ಅಸ್ಸಾಂಗೆ ತೆರಳಿದ್ದ. ಅಲ್ಲದೇ ಸ್ವಲ್ಪ ಪ್ರಮಾಣದ ಚಿನ್ನ ಮಾರಿ ಒಂದು ಸ್ವಿಫ್ಟ್ ಡಿಜೈರ್ ಕಾರು ಕೂಡ ಖರೀದಿ ಮಾಡಿದ್ದ. ಆತನಿಗಾಗಿ ಬಲೆ ಬೀಸಿದ್ದ ಪೊಲೀಸರು ಅಸ್ಸಾಂ ನಿಂದ ಬಂಧಿಸಿ ಕರೆತಂದಿದ್ದಾರೆ. ಬಂಧಿತನಿಂದ 1 ಕೋಟಿ 29 ಲಕ್ಷದ 35 ಸಾವಿರ ಮೌಲ್ಯದ 2141 ಗ್ರಾಂ ಚಿನ್ನ, 1313 ಗ್ರಾಂ ಬೆಳ್ಳಿ 70 ಸಾವಿರ ನಗದು ಹಣ ಹಾಗೂ ಒಂದು ಸ್ವಿಫ್ಟ್ ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

ಸದ್ಯ ಪೊಲೀಸರ ಉತ್ತಮ‌ ಕೆಲಸದಿಂದ ಮಾಲೀಕ ನಿಟ್ಟುಸಿರು ಬಿಟ್ರೆ. ಬೇಗ ಶ್ರೀಮಂತನಾಗೊ ಆಸೆಗೆ ಕಳ್ಳತನ ಮಾಡಿದ್ದ ಖದೀಮ‌ ಜೈಲು ಪಾಲಾಗಿದ್ದಾನೆ. ಮನೆಯಿಂದ ಹೊರಗೆ ಹೋಗಬೇಕಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿಹೋದ್ರೆ ಒಳ್ಳೆಯದು. ಇಲ್ಲದಿದ್ರೆ ನಿಮ್ಮ ಮನೆಗೂ ಇಂತಹ ಕಳ್ಳರು ಕನ್ನ ಹಾಕಬಹುದು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Loading...
Unable to load recommendations.
Follow Us