ದಾವಣಗೆರೆ: ಎಸ್​ಬಿಐನಲ್ಲಿನ 13 ಕೋಟಿ ಮೌಲ್ಯದ ಚಿನ್ನ ಕಳುವು, ಬ್ಯಾಂಕ್​ ತುಂಬ ಖಾರದ ಪುಡಿ

ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ ಕಳ್ಳತನವಾಗಿದೆ. ಕಳ್ಳರು ಬ್ಯಾಂಕ್​ನಲ್ಲಿದ್ದ 13 ಕೋಟಿ ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ದಾವಣಗೆರೆ: ಎಸ್​ಬಿಐನಲ್ಲಿನ 13 ಕೋಟಿ ಮೌಲ್ಯದ ಚಿನ್ನ ಕಳುವು, ಬ್ಯಾಂಕ್​ ತುಂಬ ಖಾರದ ಪುಡಿ
ಬ್ಯಾಂಕ್​ ತುಂಬ ಖಾರದ ಪುಡಿ
Edited By:

Updated on: Oct 29, 2024 | 1:17 PM

ದಾವಣಗೆರೆ, ಅಕ್ಟೋಬರ್​ 29: ನ್ಯಾಮತಿ (Nyamati) ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್​ನಲ್ಲಿ ಸೋಮವಾರ (ಅ.28) ಕಳ್ಳತನವಾಗಿದೆ.‌ ಬ್ಯಾಂಕ್​ ಲಾಕರ್​​ನ 509 ಬ್ಯಾಗ್​ಗಳಲ್ಲಿ ಇದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ಯ್ವಾಡ್ ತಂಡ ತಪಾಸಣೆ ನಡೆಸಿತು. ಆದರೆ ಇದುವರೆಗೂ ಒಂದು ಸುಳಿವು ಸಿಕ್ಕಿಲ್ಲ. ಬ್ಯಾಂಕ್ ಹೊರಗೆ, ಒಳಗೆ ಎಲ್ಲ ಕಡೆ ತಡಕಾಡಿದರೂ ಕಳ್ಳರ ಹೆಜ್ಜೆ ಗುರುತು ಮಾತ್ರ ಪತ್ತೆಯಾಗಿಲ್ಲ.

ಬ್ಯಾಂಕ್ ಜನ ವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. ಎಸ್​ಬಿಐ ಬ್ಯಾಂಕ್​ ಸುತ್ತ ಗಿಡಗಂಟಿಗಳು ಬೆಳೆದಿವೆ. ಕಳ್ಳರು, ಸೋಮವಾರ ರಾತ್ರಿ ಬ್ಯಾಂಕ್​ನ ಕಿಟಕಿಯನ್ನು ಗ್ಯಾಸ್​ ಕಟರ್​​ನಿಂದ ಕಟ್​ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್​ ಅನ್ನು ಕೂಡ ಗ್ಯಾಸ್ ಕಟರ್​ನಿಂದ ಕಟ್ ಮಾಡಿ ಕಳ್ಳತನ ಮಾಡಿದ್ದಾರೆ. ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಕಳ್ಳತನ ಮಾಡಿದ್ದಾರೆ. ಶ್ವಾನಕ್ಕೆ ವಾಸನೆ ಗ್ರಹಿಕೆಯಾಗಬಾರದೆಂದು ಬ್ಯಾಂಕ್ ತುಂಬೆಲ್ಲ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕ್​ನ ಸಿಸಿ ಟಿವಿಯ ಡಿವಿಆರ್ ಅನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆ ಹಣ ಡ್ರಾ ಮಾಡಿಕೊಂಡು ಬರಲು ಹೋಗಿದ್ದ ಮಹಿಳೆ ಹೆಣವಾದಳು!

ಈ ಹಿಂದೆ ಹೊನ್ನಾಳಿಯ ಅರಕೆರೆ ಗ್ರಾಮದ ಕರ್ನಾಟಕ ಬ್ಯಾಂಕ್​ನಲ್ಲಿ ಕಳ್ಳತನ ನಡೆದಿತ್ತು. 10 ‌ಕೋಟಿ ಮೌಲ್ಯದ ಚಿನ್ನ ಕಳುವು ಆಗಿತ್ತು. ಈಗ ನ್ಯಾಮತಿಯ ಎಸ್​ಬಿಐ ಬ್ಯಾಂಕ್​ನಲ್ಲಿ 13 ಕೋಟಿ ಮೌಲ್ಯದ ಚಿನ್ನ ಕಳುವು ಆಗಿದೆ.

ಒಟ್ಟಾರೆ ಎಸ್​ಬಿಐ ಬ್ಯಾಂಕ್ ಕಳ್ಳತನ ಪ್ರಕರಣ ನಿಜಕ್ಕೂ ಅಲ್ಲಿನ ಗ್ರಾಹಕರ ನಿದ್ದೆಗೆಡಿಸಿದೆ. ನಮ್ಮ ಆಭರಣ ಮತ್ತು ದುಡ್ಡಿಗೆ ಭದ್ರತೆ ಯಾರು ಎಂಬ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದಷ್ಟೂ ಬೇಗ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಲಿ ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ