AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್​ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ

ಡೆಹ್ರಾಡೂನ್‌ನಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಇದೀಗ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಅಮ್ಮ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಅವರ ಶವಗಳನ್ನು ಕಸದ ರಾಶಿಯಲ್ಲಿ ಬಿಸಾಡಲಾಗಿತ್ತು. ಈ ಕೊಲೆ ಪ್ರಕರಣ ಪೊಲೀಸರ ನಿದ್ರೆಗೆಡಿಸಿತ್ತು. ಆದರೆ, ಇಂದು ಪೊಲೀಸರು ಈ ಬರ್ಬರ ಹತ್ಯೆಯ ಹಿಂದಿನ ಕಾರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Triple Murder: ಕಸದ ರಾಶಿಯಲ್ಲಿದ್ದ ಟಿಕೆಟ್​ನಿಂದ ತ್ರಿವಳಿ ಕೊಲೆಯ ಸುಳಿವು; ಭೀಕರ ಹತ್ಯೆ ಹಿಂದೆ ಲವ್ ಸ್ಟೋರಿ
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jun 28, 2024 | 9:22 PM

Share

ಡೆಹ್ರಾಡೂನ್: ಡೆಹ್ರಾಡೂನ್‌ನಲ್ಲಿ ತ್ರಿವಳಿ ಮರ್ಡರ್ ಶಿಮ್ಲಾ ಬೈಪಾಸ್‌ನಲ್ಲಿರುವ ಬರೋವಾಲಾದಲ್ಲಿ ಕಸದ ರಾಶಿಯಲ್ಲಿ ಬಿದ್ದಿದ್ದ ಮಹಿಳೆ ಮತ್ತು ಇಬ್ಬರು ಹೆಣ್ಣುಮಕ್ಕಳ ಶವಗಳ ಪ್ರಕರಣವು ಪತ್ತೆಯಾಗಿತ್ತು. ಈ ಹತ್ಯೆಯ ಹಿಂದೆ ಪ್ರೇಮಿಯೊಬ್ಬನಿದ್ದಾನೆ ಎಂಬುದು ಪತ್ತೆಯಾಗಿದೆ. ಮದುವೆಯಾಗಿ, ಮಕ್ಕಳಿರುವ ಹೆಂಗಸನ್ನು ಪ್ರೀತಿ ಮಾಡುತ್ತಿದ್ದ ವ್ಯಕ್ತಿಗೆ ಆಕೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ಇದಕ್ಕೆ ಒಪ್ಪದ ಆತ ಆ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳನ್ನೂ ಕತ್ತು ಹಿಸುಕಿ ಕೊಲೆ ಮಾಡಿ ಶವಗಳನ್ನು ಕಸದ ರಾಶಿಗೆ ಎಸೆದಿದ್ದ.

ತ್ರಿವಳಿ ಕೊಲೆಯನ್ನು ಭೇದಿಸಲು ಹಲವು ದಿಕ್ಕುಗಳಲ್ಲಿ ತನಿಖೆ ನಡೆಸುತ್ತಿದ್ದಾಗ, ಮಹಿಳೆಯ ಶವದ ಬಳಿಯಿಂದ ಪತ್ತೆಯಾದ ಉತ್ತರ ಪ್ರದೇಶದ ರೋಡ್‌ವೇಸ್ ಟಿಕೆಟ್‌ನಿಂದ ಪೊಲೀಸರಿಗೆ ಕೊಲೆಯ ನಿಜವಾದ ಸುಳಿವು ಸಿಕ್ಕಿತು. ಈ ಟಿಕೆಟ್ ಜೂನ್ 23ರ ಪ್ರಯಾಣವಾಗಿತ್ತು. ಈ ಚೀಟಿಯೊಂದಿಗೆ ಮಹಿಳೆ ಡೆಹ್ರಾಡೂನ್‌ಗೆ ಬಂದಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ. ಆದರೆ ಟಿಕೆಟ್‌ನಲ್ಲಿರುವ ಪ್ರಯಾಣ ಮತ್ತು ಸಂಬಂಧಿತ ವಿವರಗಳು ಮಸುಕಾಗಿದ್ದವು.

ಈ ತ್ರಿವಳಿ ಹತ್ಯೆಯಲ್ಲಿ ಪೊಲೀಸರಿಗೆ ಮೊದಲ ಸವಾಲು ಎಂದರೆ ಮೂವರೂ ಒಂದೇ ಕುಟುಂಬದವರೋ ಇಲ್ಲವೋ ಎಂಬುದು. ಇದಕ್ಕಾಗಿ ಪೊಲೀಸರು ಹಲವು ಕಡೆ ತನಿಖೆ ನಡೆಸಿದ್ದರು. ತನಿಖೆಯ ಸಮಯದಲ್ಲಿ, ಶವದ ಬಳಿ ಕಂಡುಬಂದ ಯುಪಿ ರೋಡ್‌ವೇಸ್ ಟಿಕೆಟ್ ಪೊಲೀಸರಿಗೆ ಸಹಾಯಕವಾಗಿತ್ತು. ಆ ಟಿಕೆಟ್ ಇಡೀ ರಹಸ್ಯವನ್ನು ಪರಿಹರಿಸಿದೆ. ಮೃತದೇಹದಿಂದ ಸ್ವಲ್ಪ ದೂರದಲ್ಲಿ ಸಿಕ್ಕ ಟಿಕೆಟ್‌ಗಳು ಮೂವರು ಒಂದೇ ಕುಟುಂಬಕ್ಕೆ ಸೇರಿದವರು ಎಂದು ಊಹಿಸಲು ಪೊಲೀಸರಿಗೆ ಸಹಾಯ ಮಾಡಿತು. ಆದರೆ ಯಾವ ಬಸ್‌ಗೆ, ಎಲ್ಲಿಂದ ಟಿಕೆಟ್ ಖರೀದಿಸಲಾಗಿದೆ ಎಂದು ಕಂಡುಹಿಡಿಯುವುದು ಕಷ್ಟಕರವಾಗಿತ್ತು. ಮಳೆಯಿಂದಾಗಿ, ಟಿಕೆಟ್‌ಗಳಲ್ಲಿನ ಹೆಚ್ಚಿನ ಅಂಕೆಗಳು ಅಳಿಸಿಹೋಗಿತ್ತು. ಸರಣಿ ಸಂಖ್ಯೆಯ ಎಲ್ಲಾ ಅಂಕೆಗಳನ್ನು ಪತ್ತೆಹಚ್ಚಲು, ಪೊಲೀಸರು ಮೊರಾದಾಬಾದ್ ವಿಭಾಗದಿಂದ ಟಿಕೆಟ್ ಬಗ್ಗೆ ಮಾಹಿತಿ ಪಡೆದರು. ಜೂನ್ 23ರಂದು ಸಂಜೆ 4:11ಕ್ಕೆ ಬಿಜ್ನೋರ್‌ನ ನಹತೌರ್‌ನಿಂದ ಮಹಿಳೆಯೊಬ್ಬರು ತನ್ನ ಹೆಣ್ಣುಮಕ್ಕಳೊಂದಿಗೆ ಬಸ್‌ನಲ್ಲಿ ಡೆಹ್ರಾಡೂನ್‌ಗೆ ಬಂದಿದ್ದರು ಎಂದು ತಿಳಿದುಬಂದಿದೆ. ಇದರಿಂದ ಪೊಲೀಸರು ಕೊಲೆಯ ಬಗ್ಗೆ ಪತ್ತೆಹಚ್ಚಿದ್ದಾರೆ.

ಇದನ್ನೂ ಓದಿ: Crime News: ಕುಡಿದು ಚಿತ್ರಹಿಂಸೆ ನೀಡುತ್ತಿದ್ದ ಗಂಡನ ಬರ್ಬರ ಹತ್ಯೆ; ಪೊಲೀಸರೆದುರು ತಾನೇ ಶರಣಾದ ಮಹಿಳೆ

ಆರೋಪಿ ಡೆಹ್ರಾಡೂನ್‌ನ ಹಾಸಿಗೆ ಕಾರ್ಖಾನೆಯ ಉದ್ಯೋಗಿಯಾಗಿದ್ದ. ಗಂಡನಿಂದ ವಿಚ್ಛೇದನ ಪಡೆದಿದ್ದ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಮದುವೆಗೆ ಒತ್ತಡ ಹೇರಿದ್ದರಿಂದ ಮಹಿಳೆಯ ಪ್ರೇಮಿ ಮೂವರನ್ನೂ ಕತ್ತು ಹಿಸುಕಿ ಕೊಲೆ ಮಾಡಿ ಶವವನ್ನು ಕಸದ ರಾಶಿಗೆ ಎಸೆದಿದ್ದಾನೆ. ಫ್ಯಾಕ್ಟರಿ ಆವರಣದಲ್ಲಿ ಕೊಲೆ ಮಾಡಿ ಮೂರೂ ಶವಗಳನ್ನು ಕಸದ ರಾಶಿಗೆ ಎಸೆದಿದ್ದಾನೆ. ಪೊಲೀಸರು ಕೊನೆಗೂ ಆರೋಪಿ ಹಸೀನ್​ನನ್ನು ಬಂಧಿಸಿದ್ದಾರೆ.

ವಿಚ್ಛೇದನದ ನಂತರ ರೇಷ್ಮಾ ತನ್ನ 15 ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು. 8 ತಿಂಗಳ ಹಿಂದೆ ರೇಷ್ಮಾ ಮತ್ತೊಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹಸೀನ್ ಜೊತೆಗಿನ ಪ್ರೇಮದಿಂದ ಈ ಮಗಳು ಹುಟ್ಟಿದ್ದಾಳೆ ಎಂದು ರೇಷ್ಮಾ ಹೇಳಿಕೊಂಡಿದ್ದರು. ಹೀಗಾಗಿ, ತನ್ನನ್ನು ಮದುವೆಯಾಗುವಂತೆ ರೇಷ್ಮಾ ನಿರಂತರವಾಗಿ ಹಸೀನ್ ಮೇಲೆ ಒತ್ತಡ ಹೇರುತ್ತಿದ್ದಳು. ಇದರೊಂದಿಗೆ ಹಸೀನ್‌ ಬಳಿ ಮಕ್ಕಳನ್ನು ಬೆಳೆಸಲು ಹಣವನ್ನೂ ಕೇಳುತ್ತಿದ್ದಳು.

ಹಸೀನ್ ಕೂಡ ವಿಚ್ಛೇದಿತನಾಗಿದ್ದ. ಆತ ಸುಮಾರು ಮೂರು ವರ್ಷಗಳಿಂದ ಡೆಹ್ರಾಡೂನ್‌ನ ಶಿಮ್ಲಾ ಬೈಪಾಸ್‌ನಲ್ಲಿರುವ ಟಿಂಬರ್ ಲೀ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಹಸೀನ್ ಬ್ರಹ್ಮಪುರಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸವಾಗಿದ್ದ. ಆತ ರೇಷ್ಮಾಳನ್ನು ಭೇಟಿಯಾಗಲು ಬಿಜ್ನೋರ್‌ಗೆ ಹೋಗುತ್ತಿದ್ದ. ಆದರೆ ಇತ್ತೀಚೆಗೆ ಅವರಿಬ್ಬರ ನಡುವೆ ಜಗಳ ಉಂಟಾಗುತ್ತಿತ್ತು.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ನಡೆಸಿ 13 ವರ್ಷದ ಬಾಲಕಿಯ ಕೊಲೆ; ಹರಿದ್ವಾರ ಹೆದ್ದಾರಿಯಲ್ಲಿ ಶವ ಪತ್ತೆ

ರೇಷ್ಮಾ ಪದೇಪದೆ ಮದುವೆಗೆ ಒತ್ತಾಯಿಸುತ್ತಿದ್ದುದರಿಂದ ಬೇಸತ್ತ ಹಸೀನ್ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ. ಜೂನ್ 23ರ ಸಂಜೆ ರೇಷ್ಮಾ ತನ್ನ ಹೆಣ್ಣುಮಕ್ಕಳಾದ ಅಯತ್ (15 ವರ್ಷ) ಮತ್ತು ಆಯೇಷಾ (8 ತಿಂಗಳು) ಜೊತೆಗೆ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಬಿಜ್ನೋರ್‌ನಿಂದ ಡೆಹ್ರಾಡೂನ್ ತಲುಪಿದಳು. ಅವಳು ಹಸೀನ್‌ಗೆ ಕರೆ ಮಾಡಿ ಡೆಹ್ರಾಡೂನ್​ಗೆ ಬರುತ್ತಿರುವುದರ ಬಗ್ಗೆ ತಿಳಿಸಿದಳು. ಹಸೀನ್ ಬೈಕ್‌ನಲ್ಲಿ ರೇಷ್ಮಾ ಮತ್ತು ಇಬ್ಬರು ಪುತ್ರಿಯರನ್ನು ಕಾರ್ಖಾನೆಗೆ ಕರೆದೊಯ್ದಿದ್ದಾನೆ. ಸಂಜೆ ಎಲ್ಲ ಕೆಲಸಗಾರರು ಮನೆಗೆ ಹೊರಟು ಹೋಗಿದ್ದು, ಹಸೀನ್ ಒಬ್ಬನೇ ಫ್ಯಾಕ್ಟರಿಯಲ್ಲಿದ್ದ. ರಾತ್ರಿ ರೇಷ್ಮಾಳನ್ನು ಅಲ್ಲೇ ಇರುವಂತೆ ಹೇಳಿ ಎಲ್ಲರೂ ಮಲಗಿದಾಗ ರೇಷ್ಮಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಇಬ್ಬರು ಹೆಣ್ಣು ಮಕ್ಕಳನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ.

ಬಳಿಕ ಕಾರ್ಖಾನೆಯ ಹಿಂದಿನ ಚರಂಡಿಯಲ್ಲಿ ಮೂರೂ ದೇಹಗಳನ್ನು ಕಸದ ರಾಶಿಯಲ್ಲಿ ಬಚ್ಚಿಟ್ಟಿದ್ದ. ಆರೋಪಿ ಹಸೀನ್ ವಿರುದ್ಧ ಕೊಲೆ ಮತ್ತಿತರ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲಿಂದ ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ