
ಯಾವುದೇ ಸಿವಿಲ್ ಸರ್ವಿಸ್ ಹಿನ್ನೆಲೆಯಿಲ್ಲದ ಕುಟುಂಬದಿಂದ ಬಂದು, ತಮ್ಮ ನಿರಂತರ ಶ್ರಮ ಮತ್ತು ಶಿಸ್ತಿನಿಂದ ದೇಶದ ಅತ್ಯಂತ ಕಠಿಣ ಪರೀಕ್ಷೆಯಾದ ಯುಪಿಎಸ್ಸಿಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 3ನೇ ರ್ಯಾಂಕ್ ಪಡೆದು ಇತಿಹಾಸ ಸೃಷ್ಟಿಸಿದ ಸಾಧಕಿ ತೆಲಂಗಾಣದ ಅನನ್ಯಾ ರೆಡ್ಡಿ. ಮಹಾಬೂಬ್ನಗರ ಜಿಲ್ಲೆಯ ಅಡ್ಡಕುಲ ಮಂಡಲದ ಪೊನ್ನಕಲ ಗ್ರಾಮದ ಅನನ್ಯಾ, ತಮ್ಮ ಪ್ರಥಮ ಪ್ರಯತ್ನದಲ್ಲೇ ಈ ಅಪಾರ ಯಶಸ್ಸು ಗಳಿಸಿ ಕೋಟ್ಯಂತರ ಯುವಜನತೆಗೆ ಮಾದರಿಯಾಗಿದ್ದಾರೆ.
ಅನನ್ಯಾ ತಮ್ಮ 10 ನೇ ತರಗತಿಯವರೆಗೆ ಮಹಾಬೂಬ್ನಗರದ ಗೀತಂ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ ಹೈದರಾಬಾದ್ನಲ್ಲಿ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದರು. ಬಾಲ್ಯದಿಂದಲೂ ಸಮಾಜಸೇವೆ ಮಾಡುವ ಹಂಬಲ ಹೊಂದಿದ್ದ ಅನನ್ಯಾ, ನಾಗರಿಕ ಸೇವೆಯನ್ನೇ ತಮ್ಮ ಗುರಿಯನ್ನಾಗಿ ಮಾಡಿಕೊಂಡರು. ಪಿಯುಸಿ ಹಂತದಲ್ಲೇ ಯುಪಿಎಸ್ಸಿಗೆ ಸಿದ್ಧತೆ ನಡೆಸಲು ನಿರ್ಧರಿಸಿದ ಅವರು, ದೆಹಲಿಯ ಪ್ರಸಿದ್ಧ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಭೌಗೋಳಿಕತೆಯನ್ನು (Geography) ಮುಖ್ಯ ವಿಷಯವಾಗಿಟ್ಟುಕೊಂಡು ಪದವಿ ಪಡೆದರು. ದೆಹಲಿಯಲ್ಲಿ ಉತ್ತಮ ಮಾರ್ಗದರ್ಶನ ಹಾಗೂ ವಾತಾವರಣ ಸಿಗುತ್ತದೆ ಎಂಬ ಕಾರಣಕ್ಕೆ ಅವರು ಅಲ್ಲಿಯೇ ನೆಲೆಸಿ ಪದವಿಯ ಜೊತೆಗೆ ಯುಪಿಎಸ್ಸಿ ಸಿದ್ಧತೆಯನ್ನು ಮುಂದುವರಿಸಿದರು.
ಪದವಿ ಮುಗಿದ ತಕ್ಷಣ ಸಂಪೂರ್ಣವಾಗಿ ಸಿವಿಲ್ ಸರ್ವೀಸಸ್ ಪರೀಕ್ಷೆಯತ್ತ ಗಮನ ಹರಿಸಿದ ಅನನ್ಯಾ, ದಿನಕ್ಕೆ 12 ರಿಂದ 14 ಗಂಟೆಗಳ ಕಾಲ ಓದುತ್ತಿದ್ದರು. ಓದಿನ ಅವಧಿಗಿಂತಲೂ ಸ್ಪಷ್ಟ ಯೋಜನೆಗೆ ಇವರು ಆದ್ಯತೆ ನೀಡಿದರು. ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಸರಿಯಾಗಿ ಗುರುತಿಸಿ, ಪ್ರತಿಯೊಂದು ವಿಷಯವನ್ನು ವಿಂಗಡಿಸಿಕೊಂಡು ಅಧ್ಯಯನ ಮಾಡುತ್ತಿದ್ದರು. ದಿನಕ್ಕೊಂದು ವಿಷಯವನ್ನು ಆಯ್ಕೆ ಮಾಡಿಕೊಂಡು, ಅದನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡ ನಂತರವೇ ವಿಶ್ರಾಂತಿ ಪಡೆಯುವ ಅಭ್ಯಾಸ ಇವರದ್ದಾಗಿತ್ತು.
ಯುಪಿಎಸ್ಸಿಯಲ್ಲಿ ಮಾನವಶಾಸ್ತ್ರವನ್ನು (Anthropology) ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದ ಅನನ್ಯಾ, ಆರಂಭದಲ್ಲಿ ತರಬೇತಿ ಪಡೆದರೂ ನಂತರ ಸ್ವಯಂ ಅಧ್ಯಯನಕ್ಕೇ ಹೆಚ್ಚಿನ ಒತ್ತು ನೀಡಿದರು. ಪ್ರತಿದಿನ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಓದುತ್ತಾ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಬೆಳವಣಿಗೆಗಳ ಸ್ವಂತ ಟಿಪ್ಪಣಿಗಳನ್ನು (Self Notes) ಸಿದ್ಧಪಡಿಸಿಕೊಳ್ಳುತ್ತಿದ್ದರು. ಪ್ರಚಲಿತ ವಿದ್ಯಮಾನಗಳ ಮಹತ್ವವನ್ನು ಅರಿತು ಸಮಕಾಲೀನ ಸವಾಲುಗಳಿಗೆ ವಿಶೇಷ ಗಮನ ನೀಡಿದ್ದು ಇವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಇದನ್ನೂ ಓದಿ: ಕಾಲೇಜಿನಲ್ಲಿ ರಾತ್ರಿ ಕಾವಲುಗಾರನ ಕೆಲಸ ಮಾಡುತ್ತಲೇ ಓದಿ ಸತತ 3 ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡ ಸಾಧಕ!
ಅನನ್ಯಾ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಸ್ಫೂರ್ತಿಯಿದೆ. ಫಲಿತಾಂಶ ಏನೇ ಇರಲಿ, ಎಂದಿಗೂ ಪ್ರಯತ್ನಿಸುವುದನ್ನು ನಿಲ್ಲಿಸಬೇಡಿ ಮತ್ತು ಸೋಲಿನ ಭಯವಿಲ್ಲದೆ ಗುರಿಯತ್ತ ಗಮನಹರಿಸಿ ಎಂಬ ಕೊಹ್ಲಿಯ ಆಲೋಚನಾ ಶೈಲಿ ಇವರನ್ನು ಸಾಕಷ್ಟು ಪ್ರೇರೇಪಿಸಿತ್ತು. ಪರೀಕ್ಷೆಯ ತಯಾರಿಗಾಗಿ ಇತ್ತೀಚೆಗೆ ಕ್ರಿಕೆಟ್ ಮತ್ತು ಸಿನಿಮಾಗಳಿಂದ ದೂರವಿದ್ದ ಅನನ್ಯಾ, ಇನ್ಮುಂದೆ ಸಮಯ ಸಿಕ್ಕಾಗ ಅವುಗಳನ್ನು ಆನಂದಿಸುವುದಾಗಿ ಹೇಳುತ್ತಾರೆ.
ಅನನ್ಯಾ ಅವರ ತಂದೆ ಸುರೇಶ್ ರೆಡ್ಡಿ ಉದ್ಯಮಿಯಾಗಿದ್ದರೆ, ತಾಯಿ ಮಂಜುಲತಾ ಗೃಹಿಣಿ. ಕುಟುಂಬದಲ್ಲಿ ಯಾರೂ ಸಿವಿಲ್ ಸರ್ವಿಸ್ ಹಿನ್ನೆಲೆಯವರಲ್ಲದಿದ್ದರೂ, ಪೋಷಕರು ಅನನ್ಯಾಗೆ ಸಂಪೂರ್ಣ ಪ್ರೋತ್ಸಾಹ ನೀಡಿದ್ದರರು. ನಾಗರಿಕ ಸೇವೆಯ ಮೂಲಕ ಬಡವರಿಗೆ ಸಹಾಯ ಮಾಡುವುದು ಮತ್ತು ಅವರ ಜೀವನಮಟ್ಟ ಸುಧಾರಿಸುವುದು ಅನನ್ಯಾ ಅವರ ಮುಖ್ಯ ಧೈಯವಾಗಿದೆ.
ಸರಿಯಾದ ಯೋಜನೆ, ಶಿಸ್ತು ಮತ್ತು ನಿರಂತರ ಕಠಿಣ ಪರಿಶ್ರಮವಿದ್ದರೆ ಮೊದಲ ಪ್ರಯತ್ನದಲ್ಲೇ ಎಂತಹ ದೊಡ್ಡ ಗುರಿಯನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅನನ್ಯಾ ರೆಡ್ಡಿ ಅವರ ಯಶಸ್ಸೇ ಜೀವಂತ ನಿದರ್ಶನ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ