ಕರ್ನಾಟಕ SSLC-PUC​ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ

| Updated By: ರಮೇಶ್ ಬಿ. ಜವಳಗೇರಾ

Updated on: Sep 05, 2023 | 2:17 PM

ಕರ್ನಾಟಕದ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಗುಡ್​ನ್ಯೂಸ್​ ನೀಡಿದೆ. 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇನ್ಮುಂದೆ ವರ್ಷಕ್ಕೆ ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

ಕರ್ನಾಟಕ SSLC-PUC​ ವಿದ್ಯಾರ್ಥಿಗಳಿಗೆ ಗುಡ್​ನ್ಯೂಸ್​,  ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, (ಸೆಪ್ಟೆಂಬರ್ 05): ಶಿಕ್ಷಕರ ದಿನಾಚರಣೆ ದಿನವೇ ಎಸ್​ಎಸ್​ಎಲ್​ಸಿ (SSLC) ಹಾಗೂ ಪಿಯುಸಿ(PUC)  ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು.. 2023-24ನೇ ಶೈಕ್ಷಣಿಕ ಸಾಲಿನಿಂದ SSLC, 2nd PUC ಪರೀಕ್ಷಾ (Exams) ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಇದುವರೆಗೆ ವರ್ಷಕ್ಕೆ 2 ಪರೀಕ್ಷೆ ಮಾತ್ರ ನಡೆಸುತ್ತಿದ್ದ ಶಿಕ್ಷಣ ಇಲಾಖೆ (Karnataka Education Department), ಇನ್ಮುಂದೆ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸಲು ತೀರ್ಮಾನಿಸಿದೆ. ಶೈಕ್ಷಣಿಕ ಪ್ರಗತಿ, ಅರ್ಥಪೂರ್ಣ ಕಲಿಕೆ, ಜ್ಞಾನಧಾರಣೆ ವೃದ್ಧಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವೇಳಾಪಟ್ಟಿ ಇಂತಿದೆ

  • ಪರೀಕ್ಷೆ-1 ಮಾರ್ಚ್​​ 1ರಿಂದ ಮಾರ್ಚ್​ 25ರವರೆಗೆ ನಡೆಸಲು ನಿರ್ಧಾರ
  • ಪರೀಕ್ಷೆ-2 ಮೇ 15ರಿಂದ ಜೂನ್​ 5ರವರೆಗೆ ನಡೆಸಲು ತೀರ್ಮಾನ
  • ಪರೀಕ್ಷೆ-3 ಜುಲೈ 12ರಿಂದ ಜುಲೈ 30ರವರೆಗೆ ನಡೆಸಲು ನಿರ್ಧಾರ

    10ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಿರುವ 3 ಪರೀಕ್ಷೆಗಳ ವೇಳಾಪಟ್ಟಿ

  • ಪರೀಕ್ಷೆ-1 ಮಾರ್ಚ್​ 30ರಿಂದ ಏಪ್ರಿಲ್​ 15ರವರೆಗೆ ನಡೆಸಲು ನಿರ್ಧಾರ
  • ಪರೀಕ್ಷೆ-2 ಜೂನ್​ 12ರಿಂದ ಜೂನ್​ 19ರವರೆಗೆ
  • ಪರೀಕ್ಷೆ-3 ಜುಲೈ 29ರಿಂದ ಆಗಸ್ಟ್​ 5ರವರೆಗೆ ನಡೆಸಲು ತೀರ್ಮಾನ

ಇದನ್ನು ಇಂದು (ಸೆಪ್ಟೆಂಬರ್ 05) ವಿಧಾನಸಸೌಧದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇದನ್ನು ಘೋಷಿಸಿದರು.  ಇನ್ನು ಈ ಬಗ್ಗೆ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, SSLC, PU ವಿದ್ಯಾರ್ಥಿಗಳು ವರ್ಷಕ್ಕೆ 3 ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಫೇಲ್​​​ ಅಥವಾ ಕಡಿಮೆ ಅಂಕ ಬಂದವರು 3 ಬಾರಿ ಪರೀಕ್ಷೆ ಬರೆಯಬಹುದು. 32.44 ಲಕ್ಷ ಮಕ್ಕಳಿಗೆ ಕಲಿಕಾ ಬಲವರ್ಧನೆ ಕಾರ್ಯಕ್ರಮ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ಇಷ್ಟು ದಿನ ವಾರಕ್ಕೆ ಒಂದು ದಿನ ಮಾತ್ರ ಮೊಟ್ಟೆ ನೀಡಲಾಗುತ್ತಿತ್ತು. ಈಗ ವಾರಕ್ಕೆ ಎರಡು ದಿನ ಮೊಟ್ಟೆ ಕೊಡಲು ತೀರ್ಮಾನ ಮಾಡಿದ್ದೇವೆ. ಸುಮಾರು 58 ಲಕ್ಷ ಮಕ್ಕಳಿಗೆ ಇದರಿಂದ ಅನುಕೂಲ ಆಗಲಿದೆ. ಈ ಯೋಜನೆಗೆ ಅಂದಾಜು 280 ಕೋಟಿ ರೂ. ವೆಚ್ಚ ಆಗಲಿದೆ. 10ನೇ ತರಗತಿಯ ಮಕ್ಕಳವರೆಗೆ ಈ ಯೋಜನೆ ವಿಸ್ತರಣೆ ಮಾಡುತ್ತೇವೆ ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ‌ ಶಿಕ್ಷಕರ ಕೊರತೆ ಇತ್ತು. ಇದನ್ನ ಅರಿತ ಸಿಎಂ ಸಿದ್ದರಾಮಯ್ಯನವರು ಕೂಡಲೇ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆದೇಶಿಸಿದ್ರು. 10 ಸಾವಿರ ಅತಿಥಿ ಉಪನ್ಯಾಸಕರನ್ನ 2 ದಿನಗಳಲ್ಲೇ ನೇಮಕಕ್ಕೆ ಸಿಎಂ ಅವಕಾಶ ಕೊಟ್ಟರು ಎಂದರು.

Published On - 12:39 pm, Tue, 5 September 23