ಶಾಲೆ ಆರಂಭ: ಕೊರೊನಾ ಬಗ್ಗೆಯೇ ಮಕ್ಕಳಿಗೆ ಮೊದಲ ಪಾಠ; ಜಾಗೃತಿ ಮೂಡಿಸುತ್ತಿರುವ ಶಿಕ್ಷಕರು

ಒಂದು ಡೆಸ್ಕ್ ನಲ್ಲಿ ಒಬ್ಬನೇ ವಿದ್ಯಾರ್ಥಿ, ಥರ್ಮಲ್ ಸ್ಕ್ರೀನಿಂಗ್, ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಹಾಕೋದರ ಬಗ್ಗೆ ಮೊದಲ ಪಾಠ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ, ಕೊರೊನಾ ಬಗ್ಗೆ ಆತಂಕ ಬೇಡ ಆದರೆ ನಿರ್ಲಕ್ಷ್ಯ ಸಲ್ಲದು ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ.

ಶಾಲೆ ಆರಂಭ: ಕೊರೊನಾ ಬಗ್ಗೆಯೇ ಮಕ್ಕಳಿಗೆ ಮೊದಲ ಪಾಠ; ಜಾಗೃತಿ ಮೂಡಿಸುತ್ತಿರುವ ಶಿಕ್ಷಕರು
ಚಿತ್ರ ಕೃಪೆ: ಹಿಂದೂಸ್ತಾನ್​ ಟೈಮ್ಸ್​
Follow us
| Updated By: Skanda

Updated on: Aug 23, 2021 | 10:30 AM

ಬೆಂಗಳೂರು: ಕೊರೊನಾ ಆತಂಕದ ನಡುವೆಯೇ ಇಂದಿನಿಂದ ರಾಜ್ಯದ 26 ಜಿಲ್ಲೆಗಳಲ್ಲಿ ಶಾಲಾ ಕಾಲೇಜು ಆರಂಭವಾಗಿದ್ದು, ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಕೊರೊನಾ ನಿಯಮಗಳ ಬಗ್ಗೆಯೇ ಶಿಕ್ಷಕರು ಮೊದಲು ಪಾಠ ಮಾಡುತ್ತಿದ್ದಾರೆ. ಒಂದು ಡೆಸ್ಕ್ ನಲ್ಲಿ ಒಬ್ಬನೇ ವಿದ್ಯಾರ್ಥಿ, ಥರ್ಮಲ್ ಸ್ಕ್ರೀನಿಂಗ್, ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಹಾಕೋದರ ಬಗ್ಗೆ ಮೊದಲ ಪಾಠ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ, ಕೊರೊನಾ ಬಗ್ಗೆ ಆತಂಕ ಬೇಡ ಆದರೆ ನಿರ್ಲಕ್ಷ್ಯ ಸಲ್ಲದು ಎಂದು ಮನವರಿಕೆ ಮಾಡಿಕೊಡಲಾಗುತ್ತಿದೆ.

ಇಂದಿನಿಂದ ರಾಜ್ಯದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಆರಂಭವಾಗುತ್ತಿದ್ದು, ವಲಸೆಹೋದ ಹಾಗೂ ಗ್ರಾಮೀಣ ಭಾಗದಲ್ಲಿ ನೆಲೆಸಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ನಾಗೇಶ್ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಕೊರೊನಾ ಕಾರಣದಿಂದ ವಿದ್ಯಾರ್ಥಿಗಳು ಇಷ್ಟು ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದ ಊರು ತೊರೆದು ಬೇರೆ ಕಡೆ ತೆರಳಿದ್ದರೆ ಅಥವಾ ಅನಿವಾರ್ಯವಾಗಿ ಬೇರೆ ಊರುಗಳಲ್ಲಿ ನೆಲೆಸಿದ್ದರೆ ಹತ್ತಿರದ ಯಾವುದೇ ಶಾಲೆಗೆ ಹೋಗಿ ಪಾಠ ಕೇಳಬಹುದು ಎಂದು ಸಲಹೆ ನೀಡಿದ್ದಾರೆ.

ಶಾಲೆಗೆ ದಾಖಲಾತಿ ಆಗಿಲ್ಲ ಎಂಬ ಕಾರಣಕ್ಕಾಗಲೀ, ವಿದ್ಯಾಭ್ಯಾಸ ನಡೆಸುತ್ತಿರುವ ಊರಿಗೆ ಮರಳಲು ಆಗಿಲ್ಲ ಎಂಬುದರಿಂದಾಗಲೀ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗಬಾರದು ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ವಿದ್ಯಾರ್ಥಿಗಳು ಎಲ್ಲಿ ನೆಲೆಸಿದ್ದಾರೋ ಅಲ್ಲೇ ಸಮೀಪದ ಶಾಲೆಗೆ ತೆರಳಿ ಪಾಠ ಕೇಳಬಹುದಾಗಿದ್ದು, ನಂತರ ದಾಖಲಾತಿಯನ್ನೂ ಅದೇ ಶಾಲೆಯಲ್ಲಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಪ್ರಿಯ ವಿದ್ಯಾರ್ಥಿಗಳೇ, ಚಾಚೂ ತಪ್ಪದೇ ಈ ನಿಯಮಗಳನ್ನು ಪಾಲಿಸಿ ಸಾಮಾಜಿಕ ಅಂತರ ಕಾಪಾಡುವುದರ ಜೊತೆ ಆಗಾಗ ಕೈ ತೊಳೆಯಬೇಕು. ಯೋಗ, ಪ್ರಾಣಾಯಾಮ, ವ್ಯಾಯಾಮವನ್ನು ರೂಢಿ ಮಾಡಿಕೊಳ್ಳಬೇಕು. ಮನೆಯಿಂದಲೇ ಊಟದ ಡಬ್ಬಿ ಹಾಗೂ ಕಾಯಿಸಿ ಆರಿಸಿದ ನೀರನ್ನು ತರಬೇಕು. ಬಿಸಿಯಾದ ಆಹಾರ ಪದಾರ್ಥ ಸೇವಿಸಬೇಕು. ಪೆನ್, ನೋಟ್ ಬುಕ್, ನೀರಿನ ಬಾಟಲ್ ಸೇರಿದಂತೆ ಯಾವುದೇ ವಸ್ತುವನ್ನು ಸಹಪಾಠಿಗಳೊಂದಿಗೆ ಹಂಚಿಕೊಳ್ಳಬಾರದು.

ಈ ಕೆಳಗಿನ 5 ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ ರಾಜ್ಯದಲ್ಲಿ ಡೇಂಜರ್ ಝೋನ್ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆಡೆ ಶಾಲೆ ತೆರೆಯಲಾಗುತ್ತಿದ್ದು, ಶೇ.2 ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣ ಇರುವ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಉಡುಪಿ, ಹಾಸನ ಬಿಟ್ಟು ಮಿಕ್ಕೆಲ್ಲಾ ಕಡೆಗಳಲ್ಲೂ ಇಂದಿನಿಂದ 9 ರಿಂದ 12 ನೇ ತರಗತಿಗಳಿಗೆ ಮೊದಲ ಹಂತದಲ್ಲಿ ಶಾಲೆ ಶುರುವಾಗಲಿದೆ.

ಇದನ್ನೂ ಓದಿ: ಮಕ್ಕಳನ್ನು ಸ್ವಾಗತಿಸಲು ಸಜ್ಜಾದ ಶಾಲೆಗಳು; ಕೊರೊನಾ ಭೀತಿಯ ನಡುವೆಯೂ ಕಲಿಕೆಯ ಸಂಭ್ರಮ ಶುರು 

School Reopen: ಶಾಲಾ ಮಕ್ಕಳು ಇಂದಿನಿಂದ ತಂಡೋಪಾದಿಯಲಿ ಮರಳಿ ಶಾಲೆಗೆ, ಯಾವ ಜಿಲ್ಲೆಗಳಲ್ಲಿ ಸ್ಕೂಲ್ ರೀಓಪನ್ ಇಲ್ಲ!?

(Karnataka school reopening teachers creating awareness in students regarding covid 19)