Hassan: ಜೆಡಿಎಸ್ ಟಿಕೆಟ್ ಫೈಟ್; ಅಭ್ಯರ್ಥಿ ಘೋಷಣೆಗೂ ಮುನ್ನವೇ ಸ್ವರೂಪ್​ಗೆ ಬಿ ಫಾರಂ ನೀಡಿದ ಕುಮಾರಸ್ವಾಮಿ

ಹೆಚ್​ಡಿ ಕುಮಾರಸ್ವಾಮಿ ಅವರು ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಸ್ವರೂಪ್​ಗೆ ಶುಕ್ರವಾರ ಬಿ ಫಾರಂ ನೀಡಿರುವುದು ಕುತೂಹಲ ಹೆಚ್ಚಿಸಿದೆ.

Hassan: ಜೆಡಿಎಸ್ ಟಿಕೆಟ್ ಫೈಟ್; ಅಭ್ಯರ್ಥಿ ಘೋಷಣೆಗೂ ಮುನ್ನವೇ ಸ್ವರೂಪ್​ಗೆ ಬಿ ಫಾರಂ ನೀಡಿದ ಕುಮಾರಸ್ವಾಮಿ
ಹೆಚ್​ ಡಿ ಕುಮಾರಸ್ವಾಮಿImage Credit source: FILE
Follow us
|

Updated on:Apr 14, 2023 | 4:55 PM

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿ ಪಾರಂ ಪಡೆದು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ಮಧ್ಯೆ, ಜೆಡಿಎಸ್​​ (JDS) ಪಕ್ಷದಿಂದ ಹಾಸನ ಕ್ಷೇತ್ರದ ಟಿಕೆಟ್ ಪಡೆಯಲು ಪೈಪೋಟಿಯೂ ಹೆಚ್ಚಾಗಿದೆ. ಹೆಚ್​ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಸ್ವರೂಪ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ರೇವಣ್ಣ ಹಾಗೂ ಕುಮಾರಸ್ವಾಮಿ ಮಧ್ಯೆ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಉಭಯರೂ ತಮ್ಮ ಕಡೆಯವರಿಗೇ ಟಿಕೆಟ್​ ಸಿಗಬೇಕೇಂದು ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ, ಹೆಚ್​ಡಿ ಕುಮಾರಸ್ವಾಮಿ ಅವರು ಸ್ವರೂಪ್​ಗೆ (Swaroop) ಶುಕ್ರವಾರ ಬಿ ಫಾರಂ ನೀಡಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ನಡೆಯುತ್ತಿದ್ದು, ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಅರಮನೆ ಶಂಕರ್​, ಯಾದಗಿರಿ ಜಿಲ್ಲೆ ಶಹಾಪುರ ಕ್ಷೇತ್ರದ ಅಭ್ಯರ್ಥಿ ಗುರುಪಾಟೀಲ್​ ಸೇರಿದಂತೆ ಅನೇಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ. ಇದೇ ವೇಳೆ ಹಾಸನದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಸ್ವರೂಪ್​ಗೆ ಬಿ ಫಾರಂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವ ಕಾರಣ ಜೆಡಿಎಸ್​​ ಇನ್ನೂ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಅತ್ತ ಹಾಸನ ಕ್ಷೇತ್ರದ ಟಿಕೆಟ್ ಅನ್ನು ಭವಾನಿ ರೇವಣ್ಣ ಅವರಿಗೆ ಕೊಡದಿದ್ದರೆ ತಮಗೂ ಹೊಳೆನರಸೀಪುರ ಕ್ಷೇತ್ರದ ಟಿಕೆಟ್ ಬೇಡ ಎಂದು ಹೆಚ್​ಡಿ ರೇವಣ್ಣ ಪಟ್ಟುಹಿಡಿದಿದ್ದಾರೆ. ಮತ್ತೊಂದೆಡೆ, ಸಾಮಾನ್ಯ ಕಾರ್ಯಕರ್ತನಿಗೇ ಹಾಸನದ ಟಿಕೆಟ್ ನೀಡುತ್ತೇನೆ ಎಂಬ ನಿಲುವಿಗೆ ಬದ್ಧ ಎಂದು ಹೆಚ್​ಡಿ ಕುಮಾರಸ್ವಾಮಿ ಪುನರುಚ್ಚರಿಸಿದ್ದಾರೆ. ಇದೀಗ ಸ್ವರೂಪ್​ಗೆ ಬಿ ಫಾರಂ ನೀಡಿರುವುದು ಕುತೂಹಲ ಹೆಚ್ಚಿಸಿದೆ.

ದತ್ತಾ ಜೆಡಿಎಸ್​ ಸೇರ್ಪಡೆ ಬಗ್ಗೆಯೂ ವ್ಯಂಗ್ಯವಾಡಿದ್ದ ಹೆಚ್​​ಡಿಕೆ

ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ವೈಎಸ್​ವಿ ದತ್ತಾ ಜೆಡಿಎಸ್​ಗೆ ಮರಳಿರುವುದಕ್ಕೂ ಹೆಚ್​ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದರು. ದತ್ತಾ ಅಂತರರಾಷ್ಟ್ರೀಯ ಮಟ್ಟದ ಪಕ್ಷ ಸೇರಲು ಹೋಗಿದ್ದವರು. ಅವರ ಬಗ್ಗೆ ಹೆಚ್ಚು ಮಾತನಾಡಲಾರೆ. ದೇವೇಗೌಡರು ಹೇಳಿದ್ದಕ್ಕೆ ಪಕ್ಷಕ್ಕೆ ಮರಳಿದ್ದೇನೆ ಎಂದಿದ್ದಾರೆ. ಈ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ವಿಶೇಷವೆಂದರೆ, ಹೆಚ್​ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಅವರು ದತ್ತಾ ನಿವಾಸಕ್ಕೆ ತೆರಳಿ ಅವರನ್ನು ಜೆಡಿಎಸ್​ಗೆ ಸೇರ್ಪಡೆ ಮಾಡಿಕೊಂಡಿದ್ದರು. ಆದರೆ, ಕಡೂರು ಕ್ಷೇತ್ರದಿಂದ ಈಗಾಗಲೇ ಜೆಡಿಎಸ್ ಟಿಕೆಟ್ ಪಡೆದಿರುವ ಧನಂಜಯ್ ಅವರು ದತ್ತಾ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳು ಜೆಡಿಎಸ್​​ನಲ್ಲಿ ಒಡಕು ಹೆಚ್ಚಾಗುವ ಸುಳಿವನ್ನು ನೀಡಿರುವುದಂತೂ ನಿಜ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Fri, 14 April 23