ಏನು ಗ್ಯಾರಂಟಿ ಕೊಡಬೇಕೆಂಬುದು ರಾಹುಲ್​ಗೇ ಗೊತ್ತಿಲ್ಲ; ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು ಈ ಕಾರಣಕ್ಕೆ ನೋಡಿ

ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜವಳಿ ಪಾರ್ಕ್​ಗಾಗಿ 5,000 ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಅವರನ್ನು ಲೇವಡಿ ಮಾಡಿದ್ದಾರೆ.

ಏನು ಗ್ಯಾರಂಟಿ ಕೊಡಬೇಕೆಂಬುದು ರಾಹುಲ್​ಗೇ ಗೊತ್ತಿಲ್ಲ; ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದು ಈ ಕಾರಣಕ್ಕೆ ನೋಡಿ
ಗ್ಯಾರಂಟಿ ಬಗ್ಗೆ ಸುರ್ಜೇವಾಲ ಬಳಿ ಮಾಹಿತಿ ಕೇಳುತ್ತಿರುವ ರಾಹುಲ್ ಗಾಂಧಿ
Image Credit source: Twitter

Updated on: Apr 29, 2023 | 7:15 PM

ಬೆಂಗಳೂರು: ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಜವಳಿ ಪಾರ್ಕ್​ಗಾಗಿ 5,000 ಕೋಟಿ ರೂ. ಹೂಡಿಕೆ ಮಾಡುವ ಭರವಸೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಅವರನ್ನು ಲೇವಡಿ ಮಾಡಿದ್ದಾರೆ. ಭರವಸೆ ನೀಡುವುದಕ್ಕೂ ಮೊದಲು, ‘ಎಷ್ಟು ಮೊತ್ತದ ಜವಳಿ ಪಾರ್ಕ್’​ ಎಂದು ರಾಹುಲ್ ಗಾಂಧಿ ಅವರು ರಣದೀಪ್ ಸುರ್ಜೇವಾಲ ಅವರನ್ನು ಕೇಳುತ್ತಿರುವ ವಿಡಿಯೋ ಟ್ವೀಟ್ ಮಾಡಿರುವ ಬಿಜೆಪಿ ನಾಯಕರು, ಏನು ಗ್ಯಾರಂಟಿ ನೀಡಬೇಕೆಂಬುದೇ ಇವರಿಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಗ್ಯಾರಂಟಿಗಳೆಲ್ಲ ಸುಳ್ಳು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.

ಏನು ಗ್ಯಾರಂಟಿ ನೀಡುತ್ತಿದ್ದೇವೆ, ಎಷ್ಟು ನೀಡುತ್ತಿದ್ದೇವೆ ಎಂಬುದು ಇವರಿಗೇ ತಿಳಿದಿಲ್ಲ. ಇದು ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಜನರಿಗೆ ನೀಡುವ ಗ್ಯಾರಂಟಿಯ ಅವಸ್ಥೆ. ರಾಜಸ್ಥಾನ, ಛತ್ತೀಸ್​ಗಡ ರಾಜ್ಯಗಳಲ್ಲಿ ಅವರ ಗ್ಯಾರಂಟಿಗಳೆಲ್ಲ ಈಡೇರಿಲ್ಲ. ಕರ್ನಾಟಕದ ಜನ ಈ ಗ್ಯಾರಂಟಿಗಳನ್ನೆಲ್ಲ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.


ರಾಹುಲ್ ಗಾಂಧಿಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ತನಗೇ ಗೊತ್ತಿಲ್ಲದ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡಲು ರಾಹುಲ್ ಗಾಂಧಿ ಮುಂದಾಗುತ್ತಿದ್ದಾರೆ ಎಂದು ಬಿಜೆಪಿ ನಾಯಕ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.


ಗ್ಯಾರಂಟಿ ಬಗ್ಗೆ ಘೋಷಣೆ ಮಾಡುವ ಮುನ್ನ ರಾಹುಲ್ ಗಾಂಧಿ ಅವರು ಸುರ್ಜೇವಾಲ ಜತೆ, ಮೊತ್ತ 2000 ರೂಪಾಯಿಯೇ ಅಥವಾ 5000 ರೂಪಾಯಿಯೇ ಎಂದು ಪರಿಶೀಲನೆ ನಡೆಸುವುದು ವಿಡಿಯೋದಲ್ಲಿದೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಐದು ಗ್ಯಾರಂಟಿಗಳನ್ನು ಈವರೆಗೆ ಘೋಷಿಸಿದೆ. ಗೃಹಲಕ್ಷ್ಮೀ ಯೋಜನೆ ಮೂಲಕ ಬಡ ಕುಟುಂಬಗಳ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ, ಬಡವರಿಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, 10 ಕೆಜಿ ಅಕ್ಕಿ ಹಾಗೂ ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ, ಮಹಿಳೆಯರಿಗೆ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣದ ಭರವಸೆಗಳನ್ನು ನೀಡಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ