Sowmya Reddy: ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಇನೋವಾ ಕಾರು ಜಪ್ತಿ; ಏನೇನು ಸಿಕ್ತು ನೋಡಿ

ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿಗೆ (Sowmya Reddy) ಸೇರಿದ ಇನೋವಾ ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀರು ಗುರುವಾರ ವಶಕ್ಕೆ ಪಡೆದಿದ್ದಾರೆ.

Sowmya Reddy: ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಇನೋವಾ ಕಾರು ಜಪ್ತಿ; ಏನೇನು ಸಿಕ್ತು ನೋಡಿ
ಸೌಮ್ಯಾ ರೆಡ್ಡಿ

Updated on: Apr 06, 2023 | 6:18 PM

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿಗೆ (Sowmya Reddy) ಸೇರಿದ ಇನೋವಾ ಕಾರನ್ನು ಫ್ಲೈಯಿಂಗ್ ಸ್ಕ್ವಾಡ್ ಹಾಗೂ ತಿಲಕನಗರ ಪೊಲೀರು ಗುರುವಾರ ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಮತದಾರರಿಗೆ ಹಂಚಲು ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಚೆಕ್​ಪೋಸ್ಟ್​ನಲ್ಲಿ ತಪಾಸಣೆ ವೇಳೆ ಪೊಲೀಸರ ಗಮನಕ್ಕೆ ಬಂದಿದೆ. ತಕ್ಷಣವೇ ಕಾರನ್ನು ಜಪ್ತಿ ಮಾಡಿ, ಅದರಲ್ಲಿರುವ ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸದ್ಯ ಕಾರನ್ನು ತಿಲಕ​ನಗರ ಠಾಣೆ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ. ಚಾಲಕ ರಾಮಚಂದ್ರಪ್ಪ ಎಂಬುವರು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಕಾರು ವಶಕ್ಕೆ ಪಡೆಯಲಾಗಿದೆ. ರಾಮಚಂದ್ರ ವಿರುದ್ಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿನಲ್ಲಿ ಏನೇನು ಸಿಕ್ತು?

ಮೊಬೈಲ್​ಗಳು, 23 ಸೀರೆಗಳು, 23 ಬ್ಲೌಸ್ ಪೀಸ್, 16 ಶಾಲು, 150 ಪ್ರೋಗ್ರೆಸ್ ರಿಪೋರ್ಟ್ ಇರುವ ಬುಕ್​ಲೆಟ್ಸ್, ಸ್ಯಾಮ್ಸಂಗ್, ನೋಕಿಯಾ ಆ್ಯಂಡ್ರಾಯ್ಡ್ ಮೊಬೈಲ್​ಗಳನ್ನು ಮತದಾರರಿಗೆ ಹಂಚಲು ಕಾರಿನಲ್ಲಿ ಕೊಂಡೊಯ್ಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯದಲ್ಲಿ ಮತದಾರರಿಗೆ ಆಮಿಷವೊಡ್ಡುವ, ಉಡುಗೊರೆ, ನಗದು ಹಂಚುವ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಚುನಾವಣಾ ನೀತಿನ ಸಂಹಿತೆ ಜಾರಿಯಾದ ಬಳಿಕ, ಅಂದರೆ ಮಾರ್ಚ್ 29ರ ನಂತರ ಒಂದು ವಾರದ ಅವಧಿಯಲ್ಲಿ ಚುನಾವಣಾ ಅಧಿಕಾರಿಗಳು, ಪೊಲೀಸರು 69.36 ಕೋಟಿ ರೂ. ಮೌಲ್ಯದ ನಗದು, ಉಡುಗೊರೆ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Karnataka Elections 2023: ಕಂತೆ ಕಂತೆ ಹಣ ಸೊಂಟಕ್ಕೆ ಕಟ್ಟಿಕೊಂಡು ಬೈಕ್​ನಲ್ಲಿ ಸಾಗಾಟ; 7 ಲಕ್ಷ ರೂ. ಪೊಲೀಸರ ವಶಕ್ಕೆ

ನೀತಿ ಸಂಹಿತೆ ಜಾರಿಯಾದ ನಂತರ ಈವರೆಗೆ ವಶಪಡಿಸಿಕೊಂಡಿರುವುದರಲ್ಲಿ 22.75 ಕೋಟಿ ರೂ. ನಗದು, 12 ಕೋಟಿ ರೂ. ಮೌಲ್ಯದ ಉಡುಗೊರೆ ವಸ್ತುಗಳು ಸೇರಿವೆ. ನಗದು, ಇತರೆ ವಸ್ತುಗಳು, ಮದ್ಯ, ಮಾದಕ ದ್ರವ್ಯ ಸೇರಿದಂತೆ ಒಟ್ಟು 69,36,17,467 ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ಬುಧವಾರ ತಿಳಿಸಿತ್ತು.

ಬೆಂಗಳೂರಿನ ಆರ್​ಟಿ ನಗರದಲ್ಲಿ ಚುನಾವಣಾಧಿಕಾರಿಗಳು ಬುಧವಾರ ದಾಳಿ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿಟ್ಟಿದ್ದ 231 ಕುಕ್ಕರ್​​ಗಳ ಜಪ್ತಿ ಮಾಡಿದ್ದರು. ಇವುಗಳನ್ನು ಮತದಾರರಿಗೆ ಹಂಚುವುದಕ್ಕಾಗಿ ಖಾಲಿ ಮನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಪೈಕಿ ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಭಾವಚಿತ್ರವಿರುವ 60 ಕುಕ್ಕರ್​​ಗಳನ್ನೂ​ ಜಪ್ತಿ ಮಾಡಲಾಗಿತ್ತು.

ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us