AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಸೋಲು: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ

ವಿಧಾನಸಭೆ ಚುನಾವಣೆಯ ಮತ ಎಣಿಕೆ ನಿನ್ನೆ (ಮೇ.13) ರಂದು ನಡೆದಿದ್ದು, ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಸೌಮ್ಯ ರೆಡ್ಡಿಯವರಿಗೆ ಸೋಲಾಗಿದೆ. ಹೌದು ನಿನ್ನೆ ಮಧ್ಯಾಹ್ನದ ವೇಳೆಗೆ 116 ಮತಗಳ ಅಂತರದಿಂದ ಗೆದ್ದಿದ್ದ ಸೌಮ್ಯ ರೆಡ್ಡಿಯವರು, ಮರು ಎಣಿಕೆಯಲ್ಲಿ 16 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.

ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಸೋಲು: ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧಾರ
ಕಾಂಗ್ರೆಸ್​ ನಾಯಕಿ ಸೌಮ್ಯ ರೆಡ್ಡಿ
ವಿವೇಕ ಬಿರಾದಾರ
|

Updated on: May 14, 2023 | 7:00 AM

Share

ಬೆಂಗಳೂರು: ಕಾಂಗ್ರೆಸ್​ ನಾಯಕಿ ಸೌಮ್ಯ ರೆಡ್ಡಿ (Soumya Reddy) ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ವಿಧಾನಸಭೆ ಚುನಾವಣೆಯ (Karnataka Assembly Election) ಮತ ಎಣಿಕೆ ನಿನ್ನೆ (ಮೇ.13) ರಂದು ನಡೆದಿದ್ದು, ಜಯನಗರ ವಿಧಾನಸಭಾ ಕ್ಷೇತ್ರದ (Jayanagar Assembly Constituency) ಕಾಂಗ್ರೆಸ್​ (Congress) ಅಭ್ಯರ್ಥಿ ಸೌಮ್ಯ ರೆಡ್ಡಿಯವರಿಗೆ ಸೋಲಾಗಿದೆ. ಹೌದು ನಿನ್ನೆ ಮಧ್ಯಾಹ್ನದ ವೇಳೆಗೆ 116 ಮತಗಳ ಅಂತರದಿಂದ ಗೆದ್ದಿದ್ದ ಸೌಮ್ಯ ರೆಡ್ಡಿಯವರು, ಮರು ಎಣಿಕೆಯಲ್ಲಿ 16 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಹೀಗಾಗಿ ಸೌಮ್ಯ ರೆಡ್ಡಿಯವರು ಇಂದು (ಮೇ.14) ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಿದ್ದಾರೆ.

ಮೊದಲ ಬಾರಿ ಮತ ಎಣಿಕೆಯಲ್ಲಿ ನನಗೆ ಗೆಲುವಾಗಿತ್ತು. ಸಂಸದ ತೇಜಸ್ವಿ‌ ಸೂರ್ಯ, ಬಿಜೆಪಿ ನಾಯಕ ಆರ್​. ಅಶೋಕ್ ಅಕ್ರಮವಾಗಿ ಮತ ಎಣಿಕೆ ಕೊಠಡಿಗೆ ಪ್ರವೇಶ ಮಾಡಿದ್ದರು. ಅಕ್ರಮವಾಗಿ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲುವಂತೆ ಮಾಡಿದ್ದಾರೆಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಜಯನಗರ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಸೌಮ್ಯಾ ರೆಡ್ಡಿ ಹೇಳಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಸಾಗಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್​ಗೆ ಭರ್ಜರಿ ಗೆಲುವು

ಮರು ಎಣಿಕೆಯಲ್ಲಿ ಸೌಮ್ಯ ರೆಡ್ಡಿಗೆ ಸೋಲು, ಆಗಿದ್ದೇನು?

ತೀವ್ರ ಕುತೂಹಲ ಮತ್ತು ಆತಂಕದ ಗೂಡಾದ ಜಯನಗರ ವಿಧಾನಸಭಾ ಕ್ಷೇತ್ರದ ಫಲಿತಾಂಶವನ್ನು ಅಳೆದೂ ಸುರಿದು ಕೇಂದ್ರ ಚುನಾವಣಾ ಆಯೋಗ ಅಂತಿಮವಾಗಿ ಪ್ರಕಟಿಸಿತ್ತು. ನಾಲ್ಕು ಬಾರಿ ಮತ್ತೆ ಮತ್ತೆ ಎಣಿಸಿದರೂ 16 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ನಿಚ್ಚಳ ಗೆಲುವು ಎಂದು ಚುನಾವಣಾ ಆಯೋಗ ಸಾರಿತ್ತು. ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮೂರ್ತಿಗೆ 57,797 ಮತಗಳು ಮತ್ತು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ 57,781 ಮತಗಳು ಎಂದು ಚುನಾವಣಾಧಿಕಾರಿಗಳಿಂದ ಜಯನಗರ ಕ್ಷೇತ್ರದ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಾಯಿಗೆ ಬಂದ ತುತ್ತು ಕೈಗೆ ಬರಲಿಲ್ಲ ಎಂಬಂತಾಯಿತಲ್ಲ ಎಂದು ಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ನಡುರಾತ್ರಿ ಕಣ್ಣೀರು ಹಾಕಿದ್ದರು.

ಮೊದಲ ಸುತ್ತಿನಲ್ಲಿ 116 ಮತಗಳಿಂದ ಗೆದ್ದುಬೀಗಿದ್ದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಆ ನಂತರ ಮರು ಎಣಿಕೆಯಾದಾಗ ಫಲಿತಾಂಶ ಕಾಂಗ್ರೆಸ್​ನ ‘ಕೈ’ ಚೆಲ್ಲಿತ್ತು. ವಿಜಯ ಲಕ್ಷ್ಮಿ ಬಿಜೆಪಿ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಕೊರಳಿಗೆ ಜಯದ ಹಾರ ಹಾಕಿದ್ದಳು.

ಜಯನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಒಟ್ಟು 2,09,942 ಮತದಾರರು ಇದ್ದರು. 105582 ಮಂದಿ ಪುರುಷರು, 1,04,345 ಮಹಿಳೆಯರು ಇದ್ದಾರೆ. ಕಣದಲ್ಲಿ 15 ಮಂದಿ ಅಭ್ಯರ್ಥಿಗಳು ಇದ್ದರು. ಶೇ. 53.72ರಷ್ಟು ಮತದಾನವಾಗಿತ್ತು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿ