ರೇಟ್​ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ; ಚುನಾವಣಾ ಆಯೋಗದ ನೋಟಿಸ್​ಗೆ ಡಿಕೆ ಶಿವಕುಮಾರ್‌ ಉತ್ತರ

|

Updated on: May 07, 2023 | 1:17 PM

ರೇಟ್​ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ. ರೇಟ್​ ಕಾರ್ಡ್ ನೀಡಿದ್ದು ಯತ್ನಾಳ್​, ಗೂಳಿಹಟ್ಟಿ ಶೇಖರ್, ​ಹೆಚ್​.ವಿಶ್ವನಾಥ್ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ರೇಟ್​ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ; ಚುನಾವಣಾ ಆಯೋಗದ ನೋಟಿಸ್​ಗೆ ಡಿಕೆ ಶಿವಕುಮಾರ್‌ ಉತ್ತರ
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಿಸಿ ಕಾಂಗ್ರೆಸ್ ಪಕ್ಷ ನೀಡಿರುವ ಜಾಹಿರಾತು ಇದೀಗ ವಿವಾದಕ್ಕೊಳಗಾಗಿದೆ. ಕಾಂಗ್ರೆಸ್ ಪಕ್ಷದ ಜಾಹಿರಾತನ್ನು ಚುನಾವಣಾ ಆಯೋಗ(Election Commission) ಗಂಭೀರವಾಗಿ ಪರಿಗಣಿಸಿದ್ದು ನೀತಿ ಸಂಹಿತೆ ಉಲ್ಲಂಘನೆ ದೂರಿನ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್(DK Shivakumar) ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಕಾಂಗ್ರೆಸ್ ಮಾಡಿರುವ ನಿರ್ದಿಷ್ಟ ಆರೋಪಗಳ ಕುರಿತಾಗಿ ಸಾಕ್ಷ್ಯಾಧಾರ ಹಾಜರುಪಡಿಸುವಂತೆ ಚುನಾವಣಾ ಆಯೋಗ ತಾಕೀತು ಮಾಡಿದೆ. ಸದ್ಯ ಈ ಬಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ರೇಟ್​ ಕಾರ್ಡ್ ಕೊಟ್ಟಿದ್ದು ನಾನಲ್ಲ, ಬಿಜೆಪಿಯವರೇ. ರೇಟ್​ ಕಾರ್ಡ್ ನೀಡಿದ್ದು ಯತ್ನಾಳ್​, ಗೂಳಿಹಟ್ಟಿ ಶೇಖರ್, ​ಹೆಚ್​.ವಿಶ್ವನಾಥ್ ಎಂದು ಡಿಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಸಿಎಂ ಸ್ಥಾನಕ್ಕೆ ರೇಟ್​ ಎಷ್ಟು ಎಂಬುವುದನ್ನು ಬಿಜೆಪಿಯವರೇ ಹೇಳಿದ್ದಾರೆ. ಮಂತ್ರಿ ಸ್ಥಾನಕ್ಕೆ ಎಷ್ಟು ರೇಟ್​​, ಮಠಗಳ ಸ್ವಾಮೀಜಿಗಳಿಂದ ಎಷ್ಟು ರೇಟ್​. ಈ ರೇಟ್​ ಕಾರ್ಡ್​ ನೀಡಿದ್ದು ಬಿಜೆಪಿಯವರೇ. ಬಿಜೆಪಿಯವರೇ ನೀಡಿದ ರೇಟ್​​​ ಕಾರ್ಡ್​ನ್ನು ನಾವು ನೀಡಿದ್ದೇವೆ ಅಷ್ಟೇ ಎಂದರು.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಮೂರೇ ದಿನ ಬಾಕಿ ಉಳಿದಿದೆ. ಈ ನಡುವೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ನೀಡಿರುವ ಜಾಹಿರಾತು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೇ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೂಡಾ ಜಾಹಿರಾತನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 123(4), ಐಪಿಸಿ ಸೆಕ್ಷನ್ 171 ಜಿ ಅಡಿ ಅಪರಾಧವಾಗಿದೆ. ಕಾಂಗ್ರೆಸ್ ಪಕ್ಷದ ಜಾಹೀರಾತಿನಲ್ಲಿನ ನಿರ್ದಿಷ್ಟ ಭ್ರಷ್ಟಾಚಾರ ಆರೋಪಗಳು ಚುನಾವಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರಬಹುದಾದ ಕಾರಣ ನಾಳೆಯೇ ಭ್ರಷ್ಟಾಚಾರ ಆರೋಪಗಳಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಚುನಾವಣಾ ಆಯೋಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ನೋಟಿಸ್ ಜಾರಿಗೊಳಿಸಿದೆ.

ಇದನ್ನೂ ಓದಿ: ವರುಣಾದಲ್ಲಿ ಗೆದ್ದರೆ ದೊಡ್ಡ ಹುದ್ದೆ: ಅಮಿತ್​ ಶಾ ಕೊಟ್ಟ ಭರವಸೆ ಬಿಚ್ಚಿಟ್ಟ ಸೋಮಣ್ಣ

ಪತ್ರಿಕೆಗಳಲ್ಲಿ ಮೇ.5 ರಂದು ನೀಡಿರುವ ಜಾಹಿರಾತು ಚುನಾವಣಾ ಆಯೋಗದ ಈ ಕ್ರಮಕ್ಕೆ ಕಾರಣವಾಗಿದೆ. ಭ್ರಷ್ಟಾಚಾರ ಆರೋಪಗಳಿರುವ ಆಧಾರರಹಿತ ಜಾಹಿರಾತು ಬಗ್ಗೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ದೂರು ಪರಿಶೀಲಿಸಿದ ಚುನಾವಣಾ ಆಯೋಗ ಆರೋಪಗಳ ಬಗ್ಗೆ ನೈಜ ಸಾಕ್ಷ್ಯ ಒದಗಿಸಲು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಸೂಚನೆ ನೀಡಿದೆ. ಮೇ .7 ರ ಸಂಜೆ 7 ಗಂಟೆಯೊಳಗೆ ವಿವರಣೆ ಒದಗಿಸಲು ತಾಕೀತು ಮಾಡಿದೆ. ಸರ್ಕಾರದ ನೀತಿಯ ಬಗ್ಗೆ ಟೀಕಿಸುವ ಹಕ್ಕಿದೆ. ಆದರೆ ಜಾಹಿರಾತಿನಲ್ಲಿರುವುದು ಸಾಧಾರಣ ಆರೋಪಗಳಲ್ಲ . ಸರ್ಕಾರದ ಆಡಳಿತ ಯಂತ್ರದ ಮೇಲೆ ನಿರ್ದಿಷ್ಟವಾಗಿ ಭ್ರಷ್ಟಾಚಾರದ ಆರೋಪಿಸಲಾಗಿದೆ. ಇದು ಚುನಾವಣೆ ಪ್ರಕ್ರಿಯೆ ಮೇಲೂ ಪರಿಣಾಮ ಬೀರುವಂತದ್ದಾಗಿದೆ. ಜಾಹಿರಾತು ಗಮನಿಸಿದರೆ ಕಾಂಗ್ರೆಸ್ ಪಕ್ಷದ ಬಳಿ ಪುರಾವೆಗಳಿರಬೇಕು. ಹೀಗಾಗಿ ನಾಳೆ ಸಂಜೆ 7 ಗಂಟೆಯೊಳಗೆ ಪುರಾವೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಇನ್ನು ಕಾಂಗ್ರೆಸ್ ಪಕ್ಷದ ಜಾಹಿರಾತಿನ ಬಗ್ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೇಶವಪ್ರಸಾದ್ ವತಿಯಿಂದ ಇಂದು ಲೀಗಲ್ ನೋಟೀಸ್ ಜಾರಿಗೊಳಿಸಲಾಗಿದೆ. ತಕ್ಷಣ ಆರೋಪ ಹಿಂಪಡೆದು ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಜಾಹಿರಾತು ನೀಡಬೇಕು. ಇಲ್ಲವಾದರೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಸದ್ಯ ಚುನಾವಣಾ ಆಯೋಗ ಮೇ 7 ರವರೆಗೆ ಗಡುವು ನೀಡಿದ್ದು ಕಾಂಗ್ರೆಸ್ ಪಕ್ಷ ಅಷ್ಟರೊಳಗೆ ಸಾಕ್ಷ್ಯಾಧಾರ ಒದಗಿಸಬೇಕಿದೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ