AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲು ಎಸೆತ ಪ್ರಕರಣದ ಹಿಂದೆ ದುಷ್ಕರ್ಮಿಗಳ ಕೈವಾಡ ಶಂಕೆ: ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?

ನಾನು 35 ವರ್ಷಗಳಿಂದ ರಾಜಕರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಶತ್ರುಗಳು ಕಡಿಮೆ ಇರಬಹುದು ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು ಎಂದು ತಮ್ಮ ಮೇಲೆ ಕಲ್ಲು ಎಸೆದ ಬಗ್ಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅಸಮಾಧಾನ ಹೊರಹಾಕಿದರು.

ಕಲ್ಲು ಎಸೆತ ಪ್ರಕರಣದ ಹಿಂದೆ ದುಷ್ಕರ್ಮಿಗಳ ಕೈವಾಡ ಶಂಕೆ: ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದೇನು?
ಡಾ ಜಿ ಪರಮೇಶ್ವರ್
Rakesh Nayak Manchi
|

Updated on:Apr 29, 2023 | 5:10 PM

Share

ತುಮಕೂರು: ನಾನು 35 ವರ್ಷಗಳಿಂದ ರಾಜಕರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಶತ್ರುಗಳು ಕಡಿಮೆ ಇರಬಹುದು ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr. G. Parameshwara) ಅಸಮಾಧಾನ ಹೊರಹಾಕಿದರು. ನಿನ್ನೆ (ಏಪ್ರಿಲ್ 28) ಚುನಾವಣಾ ಪ್ರಚಾರದ ವೇಳೆ ಪರಮೇಶ್ವರ್ ತಲೆಗೆ ಕಲ್ಲು ಎಸೆದ ಘಟನೆ ನಡೆದಿತ್ತು. ಈ ಬಗ್ಗೆ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡರು.

ನಿನ್ನೆ ದಿವಸ ನಾನು ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದೆ. ಸಂಜೆ ಬೈರೆ‌ನಹಳ್ಳಿ ಕ್ರಾಸ್ ಬಳಿ‌ ಬಂದಾಗ ಜೆಸಿಬಿಯಲ್ಲಿ ಹೂ ಹಾಕಲು ರೆಡಿ‌ಮಾಡಿದ್ದರು. ಈ ವೇಳೆ ನನ್ನನ್ನು ಮೇಲಕ್ಕೆ ಎತ್ತಬೇಡಿ ಎಂದರೂ ಕಾರ್ಯಕರ್ತರು ಎತ್ತಿಕೊಂಡರು. ಅಷ್ಟೊತ್ತಿಗಾಗಲೇ ತಲೆಗೆ ಏನೋ ಹೊಡೆದ ಹಾಗೆ ಆಯ್ತು. ಕೆಂಪು ಹೂ ಆದ ಕಾರಣ ಯಾರಿಗೂ ಗೊತ್ತಾಗಿಲ್ಲ. ನಾನು ನೋವಿನಿಂದ ಕೂಗಿಕೊಂಡಾಗ ನಮ್ಮ ಆಸ್ಪತ್ರೆ ವೈದ್ಯರು ಕೂಡಲೇ ದೌಡಾಯಿಸಿ ಚಿಕಿತ್ಸೆ ನೀಡಿದರು. ಅಕ್ಕಿರಾಮ್ ಪುರ ಪಿಹೆಚ್​ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರು ಎಂದರು.

ಇದನ್ನೂ ಓದಿ: ತುಮಕೂರು: ಜಿ ಪರಮೇಶ್ವರ್ ನಾಮಪತ್ರ ಸಲ್ಲಿಕೆ ವೇಳೆ ಕಲ್ಲು ತೂರಾಟ, ಆರೋಪಿಯ ಬಂಧನ

ಘಟನೆ ಹೇಗಾಯಿತು ಎಂದು ಹೇಳಲು ಕಷ್ಟ. ಬಹುಶಃ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬಹುದು ಅನ್ನಿಸುತ್ತದೆ. ಆದರೆ ಯಾವ ಉದ್ದೇಶಕ್ಕೆ ಹಾಕಿದರು ಎಂದು ಹೇಳಲು ಕಷ್ಟ. ನಾನು 35 ವರ್ಷಗಳಿಂದ ರಾಜಕರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಶತ್ರುಗಳು ಕಡಿಮೆ ಇರಬಹುದು ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ಹೂನಲ್ಲಿ ಅಷ್ಟು ದೊಡ್ಡ ಕಲ್ಲು ಬರಲು ಸಾಧ್ಯವಿಲ್ಲ. ಯಾರೋ ದುಷ್ಕರ್ಮಿಗಳು ಹಾಕಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ ಎಂದರು.

ನನಗೆ ಚಾಕು ಇರಿಯುವ ಯತ್ನ ನಡೆದಿತ್ತು: ಪರಮೇಶ್ವರ್

1999 ರಲ್ಲಿ ಚಾಕು ತೆಗೆದುಕೊಂಡು ತಿವಿಯಲು ಯತ್ನ ಮಾಡಿದ್ದರು ಎಂದು ಪರಮೇಶ್ವರ್ ಹೇಳಿದರು. ನನ್ನ ವಿರುದ್ಧ ಪದೇ ಪದೇ ಯಾಕೆ ಹೀಗೆ ಆಗುತ್ತಿದೆ ಅಂತಾ ತಿಳಿದಿಲ್ಲ. ತನಿಖೆ‌ ಮಾಡಿ ಸತ್ಯ ಹೊರತರುವಂತೆ ಸೂಚಿಸಿದ್ದೇನೆ. ಕಲ್ಲು ಎಸೆದಿದ್ದರಿಂದ ತಲೆಯಲ್ಲಿ ಒಂದೂವರೆ ಇಂಚು ಗಾಯವಾಗಿದೆ. ವೈದ್ಯರು ಹೊಸದಾಗಿ ಸರ್ಜಿಕಲ್ ಗ್ಲೂ ಹಾಕಿ ಪೀಲ್ ಮಾಡಿದ್ದಾರೆ. ಸ್ವಲ್ಪ ನೋವಿದೆ ಎಂದರು.

ನಾನು ಹೆದರಿಕೊಂಡು ಹೋಗಲ್ಲ: ಪರಮೇಶ್ವರ್

ಸದ್ಯ ಚುನಾವಣಾ ಪ್ರಚಾರಕ್ಕೆ ಹೋಗಬಹುದಾ ಎಂಬುದರ ಬಗ್ಗೆ ವೈದ್ಯರ ಬಳಿ ಚರ್ಚಿಸುತ್ತೇನೆ ಎಂದು ಹೇಳಿದ ಪರಮೇಶ್ವರ್, ಪ್ರಚಾರದ ವೇಳೆ ನನಗೆ ಭದ್ರತೆ ಅವಶ್ಯಕತೆ ಇರಲಿಲ್ಲ ಅಂದುಕೊಂಡಿದ್ದೇನೆ. ನನಗೆ ಯಾವುದೇ ತೊಂದರೆ ಆದ್ರೂ ಕೂಡ ಲೆಕ್ಕ ಮಾಡುವುದಿಲ್ಲ. ನಾನು ಹೆದರಿಕೊಂಡು ಹೋಗಲ್ಲ. ನಾನು ಎಲ್ಲವನ್ನೂ ಎದುರಿಸುತ್ತೇನೆ. ವೈದ್ಯರು ಸೂಚಿಸಿದರೆ ಪ್ರಚಾರಕ್ಕೆ ಈಗಲೇ ಹೋಗುತ್ತೇನೆ. ಆದರೆ ವೈದ್ಯರು ನಾಳೆವರೆಗೂ ಇರಿ ಅಂದಿದ್ದಾರೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಸದ್ಯ ಕಾರ್ಯಕರ್ತರು ಶಾಂತಿಯಿಂದ ಇರುವಂತೆ ನಾನು ಕ್ಷೇತ್ರದ ಕಾರ್ಯಕರ್ತರಿಗೆ ಮನವಿ ಮಾಡತ್ತೇನೆ ಎಂದರು.

ಕುಮಾರಸ್ವಾಮಿ ಟೀಕೆಗೆ ಪರಮೇಶ್ವರ್ ತಿರುಗೇಟು

ಕುಮಾರಸ್ವಾಮಿ ಅವರ ಡ್ರಾಮ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್, ಕುಮಾರಸ್ವಾಮಿಗೆ ಡ್ರಾಮ ಮಾಡಿ ಅಭ್ಯಾಸ ಇರಬೇಕು. ಏಟು ತಿಂದವನು ನಾನಲ್ವ ಅವರಲ್ಲ. ನನಗೆ ಡ್ರಾಮ‌ಮಾಡುವ ಅವಶ್ಯಕತೆ ಇಲ್ಲ. ಅತ್ತು ಕರೆದು ಹೇಳುವ ಅವಶ್ಯಕತೆ ಇಲ್ಲ. ನಾನು ಜನರ ಮುಂದೆ ಹೋಗುತ್ತೇನೆ. ನಾನು ನಾಲ್ಕು ಸಲ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ನಾನು ಕ್ರೀಡಾಪಟುವಾಗಿದ್ದೆ, ಸೋಲು ಗೆಲುವು ನನಗೆ ಒಂದೆ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Sat, 29 April 23