ಕರ್ನಾಟಕ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ; ಯಾವುದಕ್ಕೆಲ್ಲ ನಿರ್ಬಂಧ? ಇಲ್ಲಿದೆ ಮಾಹಿತಿ

|

Updated on: May 08, 2023 | 6:36 PM

ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರರ ಅಬ್ಬರದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮತದಾನಕ್ಕೆ ಕೆಲವೇ ಗಂಟೆಗಳು ಉಳಿದಿರುವ ಈ ಸಂದರ್ಭದಲ್ಲಿ ಯಾವುದಕ್ಕೆಲ್ಲ ನಿರ್ಬಂಧ ಹೇರಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ; ಯಾವುದಕ್ಕೆಲ್ಲ ನಿರ್ಬಂಧ? ಇಲ್ಲಿದೆ ಮಾಹಿತಿ
ಕರ್ನಾಟಕ ವಿಧಾನಸಭೆ ಚುನಾವಣೆ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ತೆರೆ
Follow us on

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023) ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದ್ದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರರ ಅಬ್ಬರದ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕೊನೆಯ ದಿನಗಳಲ್ಲಿ ಮೂರೂ ಪಕ್ಷಗಳು ಪ್ರಚಾರದಲ್ಲಿ ಜಿದ್ದಾಜಿದ್ದಿನ ಪೈಪೋಟಿಗೆ ಬಿದ್ದಿದ್ದವು. ಬಿಜೆಪಿ ಪರವಾಗಿಯಂತೂ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಅಖಾಡಕ್ಕೆ ಧುಮುಕಿ ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಮೆಗಾ ರೋಡ್​​ಶೋ ನಡೆಸುವ ಮೂಲಕ ಮತಯಾಚನೆ ಮಾಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ರಾಜ್ಯದ ಮೂಲೆ ಮೂಲೆ ಸುತ್ತಿದ್ದರು. ಅತ್ತ ಕಾಂಗ್ರೆಸ್ ಪರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಕೂಡ ಪ್ರಚಾರ ಕೈಗೊಂಡಿದ್ದರು. ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.

ಯಾವುದಕ್ಕೆಲ್ಲ ನಿರ್ಬಂಧ?

ಮತದಾನಕ್ಕೆ ಕೆಲವೇ ಗಂಟೆಗಳು ಉಳಿದಿರುವ ಈ ಸಂದರ್ಭದಲ್ಲಿ ಯಾವುದಕ್ಕೆಲ್ಲ ನಿರ್ಬಂಧ ಹೇರಲಾಗಿದೆ ಎಂಬ ಬಗ್ಗೆ ಚುನಾವಣಾ ಆಯೋಗದ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಸಂಜೆ 5 ಗಂಟೆಯ ಬಳಿಕ ಸಭೆ, ಸಮಾರಂಭ, ಉತ್ಸವ, ರ‍್ಯಾಲಿ ಮತ್ತು ಧ್ವನಿವರ್ಧಕಗಳನ್ನು ಬಳಸಿ ಪ್ರಚಾರ ಮಾಡುವಂತಿಲ್ಲ ಎಂದು ಆಯೋಗ ಸೂಚಿಸಿದೆ. ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಅಲ್ಲಿನ ಅಭ್ಯರ್ಥಿ ಹೊರತುಪಡಿಸಿ ಬೇರೆ ನಾಯಕರು ಬಂದು ಪ್ರಚಾರ ಮಾಡುವುದಕ್ಕೂ ನಿರ್ಬಂಧ ಹೇರಿದೆ. ಅಭ್ಯರ್ಥಿ ಸೇರಿದಂತೆ 6 ಜನರು ಮಾತ್ರ ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಆಯೋಗ ಅವಕಾಶ ನೀಡಿದೆ.

  • ಯಾವುದೇ ರೀತಿಯ ಬಹಿರಂಗ ಸಭೆ, ಸಾರ್ವಜನಿಕ ಸಮಾವೇಶ ನಡೆಸುವಂತಿಲ್ಲ
  • ಇಂದು ಸಂಜೆ 6 ಗಂಟೆಯ ನಂತರ (ಮೇ 8) ಮೇ 10ರಂದು ಮತದಾನ ಪ್ರಕ್ರಿಯೆ ಮುಗಿಯುವ ವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ
  • 48 ಗಂಟೆಗಳ ಕಾಲ ಧ್ವನಿವರ್ಧಕ ಬಳಕೆಗೆ ಅನುಮತಿ ಇಲ್ಲ
  • ಅಭ್ಯರ್ಥಿಗಳ ನಡುವಣ ದ್ವೇಷ ಹೆಚ್ಚಿಸುವಂಥ ಹಾಗೂ ದ್ವೇಷ ಸೃಷ್ಟಿಸುವಂತಹ ಯಾವುದೇ ಚಟುವಟಿಕೆ ನಡೆಸಬಾರದು
  • ಸೂಕ್ಷ್ಮ ಪ್ರದೇಶಗಳ ಮತಕೇಂದ್ರಗಳನ್ನು ಸಿಸಿಟಿವಿ ಕ್ಯಾಮರಾ ಮೂಲಕ ನಿರಂತರ ಕಣ್ಗಾವಲಿನಲ್ಲಿ ಇರಿಸಬೇಕು

ಇದನ್ನೂ ಓದಿ: ಹಳೇ ಮೈಸೂರು ಭಾಗ ಗೆಲ್ಲಲು ಬಿಜೆಪಿಯ ತಂತ್ರಗಳೇನು? ಕಾಂಗ್ರೆಸ್ – ಜೆಡಿಎಸ್‌ನ ಪ್ರತಿತಂತ್ರಗಳೇನು? ಇಲ್ಲಿದೆ ವಿವರ

ರಾಜ್ಯ ವಿಧಾನಸಭೆ ಚುನಾವಣೆ ಮೇ 10ರಂದು ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ಅಂದೇ ಫಲಿತಾಂಶವೂ ಪ್ರಕಟವಾಗಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 8 May 23