ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಏನೂ ಪರಿಣಾಮವಾಗದು; ಬಿಎಲ್ ಸಂತೋಷ್​​ರನ್ನು ಸಮರ್ಥಿಸಿದ ಯಡಿಯೂರಪ್ಪ

ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಅವರನ್ನು ಜಗದೀಶ್ ಶೆಟ್ಟರ್ ದೂಷಿಸಿದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶೆಟ್ಟರ್ ಆರೋಪಗಳನ್ನು ತಳ್ಳಿಹಾಕಿದೆ ಬಿಎಸ್​ವೈ, ಟಿಕೆಟ್ ಕೈತಪ್ಪಿದ್ದಕ್ಕೆ ಸಂತೋಷ್​ ಅವರನ್ನು ಶೆಟ್ಟರ್ ದೂರುವುದು ಸರಿಯಲ್ಲ ಎಂದಿದ್ದಾರೆ.

ಶೆಟ್ಟರ್ ಪಕ್ಷ ಬಿಟ್ಟಿದ್ದರಿಂದ ಏನೂ ಪರಿಣಾಮವಾಗದು; ಬಿಎಲ್ ಸಂತೋಷ್​​ರನ್ನು ಸಮರ್ಥಿಸಿದ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್

Updated on: Apr 18, 2023 | 6:10 PM

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ (BL Santhosh) ಅವರನ್ನು ಜಗದೀಶ್ ಶೆಟ್ಟರ್ (Jagadish Shettar) ದೂಷಿಸಿದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ (BS Yediyurappa) ಆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಶೆಟ್ಟರ್ ಆರೋಪಗಳನ್ನು ತಳ್ಳಿಹಾಕಿದೆ ಬಿಎಸ್​ವೈ, ಟಿಕೆಟ್ ಕೈತಪ್ಪಿದ್ದಕ್ಕೆ ಸಂತೋಷ್​ ಅವರನ್ನು ಶೆಟ್ಟರ್ ದೂರುವುದು ಸರಿಯಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಪಕ್ಷ ತೊರೆದಿರುವ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದರು. ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿರುವುದರಿಂದ ಪಕ್ಷದ ಮೇಲೆ ಯಾವುದೇ ಪರಿಣಾಮವಾಗದು. ಅವರ ಜೊತೆ ಬಿಜೆಪಿ ಮುಖಂಡರಾಗಲೀ, ಪಕ್ಷದ ಕಾರ್ಯಕರ್ತರಾಗಲೀ ಹೋಗಿಲ್ಲ. ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಇಂದು ಹುಬ್ಬಳ್ಳಿಯಲ್ಲಿರುತ್ತಾರೆ. ಮುಂದಿನ ಮೂರು ದಿನಗಳಲ್ಲಿ ನಾನು ಕೂಡ ಅಲ್ಲಿಗೆ ಹೋಗುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಶೆಟ್ಟರ್ ಈಗಾಗಲೇ ನಿರ್ಧಾರ ಕೈಗೊಂಡಾಗಿದೆ. ಇನ್ನು ಆ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಯಡಿಯೂರಪ್ಪ ಹೇಳಿದರು.

ಶೆಟ್ಟರ್ ಅಂಥ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸಲು ಅವಕಾಶ ನೀಡುವುದಾಗಿ ನಾವು ಹೇಳಿದ್ದೆವು. ಅವರನ್ನು ರಾಜ್ಯಸಭೆಯಿಂದ ಆಯ್ಕೆ ಮಾಡಿದ ನಂತರ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದಾಗಿಯೂ ಹೇಳಿದ್ದೆವು. ನಾವು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು ಆದರೆ ಅವರು ಒಪ್ಪಲಿಲ್ಲ. ಅವರು ತಮ್ಮದೇ ದಾರಿಯಲ್ಲಿ ಹೋಗುತ್ತಾರೆ ಮತ್ತು ನಾವು ನಮ್ಮ ದಾರಿಯಲ್ಲಿ ಹೋಗುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಸಂತೋಷ್ ಬಗ್ಗೆ ಶೆಟ್ಟರ್ ಮಾಡಿರುವ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಅದರಲ್ಲಿ ಯಾವುದೇ ಸತ್ಯವಿಲ್ಲ. ಶೆಟ್ಟರ್‌ಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಯಾರೂ ಹೊಣೆಯಲ್ಲ, ಪಕ್ಷದಿಂದ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ಸಂತೋಷ್ ಅವರನ್ನು ದೂರುವುದು ಅನಗತ್ಯ ಎಂದು ಯಡಿಯೂರಪ್ಪ ಹೇಳಿದರು.

ಇದನ್ನೂ ಓದಿ: ನನಗೆ ಮಾತ್ರವಲ್ಲ ರಾಮದಾಸ್​ಗೂ ಟಿಕೆಟ್​ ತಪ್ಪಿಸಿದ್ದು ಬಿಎಲ್​ ಸಂತೋಷ್​: ಸಾಲು ಸಾಲು ಆರೋಪಗಳನ್ನು ಮಾಡಿದ ಜಗದೀಶ್ ಶೆಟ್ಟರ್

ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಕೂಡ ಸಂತೋಷ್ ಅವರನ್ನು ಬೆಂಬಲಿಸಿದ್ದು, ಅವರ ಅನುಭವ ಚುನಾವಣೆಯಲ್ಲಿ ಪಕ್ಷಕ್ಕೆ ಸಹಾಯ ಮಾಡಲಿದೆ ಎಂದು ಹೇಳಿದರು.

ಸಂತೋಷ್ ಹಲವಾರು ವರ್ಷಗಳಿಂದ ಪಕ್ಷವನ್ನು ಬಲಪಡಿಸುತ್ತಿದ್ದಾರೆ. ಅವರಿಗೆ ರಾಜ್ಯದ ನಾಡಿಮಿಡಿತ ಗೊತ್ತಿದೆ. ಆದರೆ, ಟಿಕೆಟ್ ಹಂಚಿಕೆಗೆ ಅವರ ಕೊಡುಗೆ ಎಷ್ಟು ಎಂಬುದು ಗೊತ್ತಿಲ್ಲ. ಸಂತೋಷ್ ಅವರ ಅನುಭವ ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಸಹಕಾರಿಯಾಗಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಮಂಗಳವಾರ ಬೆಳಿಗ್ಗೆ ಸಂತೋಷ್ ಅವರ ವಿರುದ್ಧ ಟೀಕಾ ಪ್ರಹಾರ ಮಾಡಿದ್ದ ಶೆಟ್ಟರ್, ಅವರ ವರ್ತನೆ ಪಕ್ಷದ ಸಂಪೂರ್ಣ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us