ವರುಣಾ ಕುರುಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮಣ್ಣ ಮಣಿಸಲು ರಹಸ್ಯ ಸ್ಥಳದಲ್ಲಿ ಸಿದ್ದರಾಮಯ್ಯ ಮತ್ತು ಆಪ್ತರಿಂದ ತಂತ್ರಗಾರಿಗೆ

|

Updated on: Apr 12, 2023 | 4:58 PM

ಹಾಲಿ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರಾದ ಕಾಂಗ್ರೆಸ್​ನ ಸಿದ್ದರಾಮಯ್ಯ ಮತ್ತು ಬಿಜೆಪಿಯ ವಿ ಸೋಮಣ್ಣ ನಡುವೆ ತೀವ್ರ ಹೋರಾಟ ನಡೆಯಲಿದೆ. ಸೋಮಣ್ಣ ಅವರನ್ನು ಮಣಿಸಲು ಸಿದ್ದರಾಮಯ್ಯ ಮತ್ತು ಆಪ್ತರು ತಂತ್ರಗಾರಿಕೆ ಹೆಣೆಯಲು ಆರಂಭಿಸಿದ್ದಾರೆ.

ವರುಣಾ ಕುರುಕ್ಷೇತ್ರ: ಬಿಜೆಪಿ ಅಭ್ಯರ್ಥಿ ಸೋಮಣ್ಣ ಮಣಿಸಲು ರಹಸ್ಯ ಸ್ಥಳದಲ್ಲಿ ಸಿದ್ದರಾಮಯ್ಯ ಮತ್ತು ಆಪ್ತರಿಂದ ತಂತ್ರಗಾರಿಗೆ
ವರುಣಾ ಕ್ಷೇತ್ರದ ಅಭ್ಯರ್ಥಿಗಳಾದ ಸಿದ್ದರಾಮಯ್ಯ ಮತ್ತು ವಿ ಸೋಮಣ್ಣ
Follow us on

ಬೆಂಗಳೂರು: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಂತರ ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯ (Karnataka Assembly Elections 2023) ಕಾವು ಮತ್ತಷ್ಟು ಹೆಚ್ಚಾಗಿದೆ. ಅದರಲ್ಲೂ ವರುಣಾ ಕ್ಷೇತ್ರ (Varuna Constituency) ಈ ಬಾರಿ ಭಾರೀ ಕುತೂಹಲ ಕೆರಳಿಸಿದೆ. ಈ ಕ್ಷೇತ್ರದಲ್ಲಿ ಘಟಾನುಘಟಿ ನಾಯಕರಾದ ಕಾಂಗ್ರೆಸ್​ನ ಸಿದ್ದರಾಮಯ್ಯ (Siddaramaiah) ಮತ್ತು ಬಿಜೆಪಿಯ ವಿ ಸೋಮಣ್ಣ (V Somanna) ನಡುವೆ ತೀವ್ರ ಹೋರಾಟ ನಡೆಯಲಿದೆ. ಬಿಜೆಪಿ ಸೋಮಣ್ಣ ಅವರನ್ನು ವರುಣಾದಲ್ಲಿ ಕಣಕ್ಕಿಳಿಸುತ್ತಿದ್ದಂತೆ ಎಚ್ಚೆತ್ತ ಸಿದ್ದರಾಮಯ್ಯ ಮತ್ತು ಆಪ್ತರು ತಂತ್ರಗಾರಿಕೆ ಹೆಣೆಯಲು ಆರಂಭಿಸಿದ್ದಾರೆ. ರಹಸ್ಯ ಸ್ಥಳದಲ್ಲಿ ಆಪ್ತರೊಂದಿಗೆ ಸಿದ್ದರಾಮಯ್ಯ ಮಾತುಕುತೆ ನಡೆಸುತ್ತಿದ್ದಾರೆ.

ಬಿಜೆಪಿ ಹೈಕಮಾಂಡ್ ಸಚಿವ ಸೋಮಣ್ಣಗೆ ಚಾಮರಾಜನಗರ ಮತ್ತು ವರುಣಾ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಿದೆ. ಸೋಮಣ್ಣಗೆ ಈ ಎರಡು ಕ್ಷೇತ್ರಗಳು ಹೊಸದಾಗಿದ್ದು, ಗೆಲುವಿಗಾಗಿ ತಂತ್ರಗಾರಿಕೆ ಹೆಣೆಯಲು ಸಜ್ಜಾಗುತ್ತಿದ್ದಾರೆ. ಇತ್ತ ವರುಣಾದಲ್ಲಿ ಬಿಜೆಪಿ, ಪ್ರತಿಸ್ಪರ್ಧಿಯಾಗಿ ಸೋಮಣ್ಣರನ್ನು ಕಣಕ್ಕಿಳಿಸುತ್ತಿದ್ದಂತೆ ಎಚ್ಚೆತ್ತ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಮತ್ತು ತಂಡ ಭಾರೀ ತಂತ್ರಗಾರಿಕೆ ಹೆಣೆಯಲು ಆರಂಭಸಿದ್ದಾರೆ.

ಇದನ್ನೂ ಓದಿ: Explainer: ಸಿದ್ದರಾಮಯ್ಯ ವಿರುದ್ಧ ಸೋಮಣ್ಣರನ್ನೇ ಆಯ್ಕೆ ಮಾಡಿದ್ದೇಕೆ? ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವೇನು? ಇಲ್ಲಿದೆ ವರುಣಾ ಗ್ರೌಂಡ್ ರಿಪೋರ್ಟ್

ಸಿದ್ದರಾಮಯ್ಯ ಮತ್ತು ಆಪ್ತರಾದ ಮಾಜಿ ಗೃಹಸಚಿವ ಕೆಜೆ ಜಾರ್ಜ್, ಭೈರತಿ ಸುರೇಶ್ ಸೇರಿದಂತೆ ಮತ್ತಿತರರು ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸುತ್ತಿದ್ದಾರೆ. ಕೆಲವು ಕ್ಷೇತ್ರಗಳ ಟಿಕೆಟ್ ಹಂಚಿಕೆ ಸಂಬಂಧ ಆಪ್ತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಮಾತ್ರವಲ್ಲದೆ, ಸಿದ್ದರಾಮಯ್ಯ ಎರಡನೇ ಕ್ಷೇತ್ರವಾಗಿ ಕೋಲಾರದಲ್ಲಿ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ಹೈಕಮಾಂಡ್ ಕೋಲಾರದ ಟಿಕೆಟ್ ನೀಡಿದರೆ ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಆಪ್ತರೊಂದಿಗಿನ ಚರ್ಚೆ ತೀವ್ರ ಕುತೂಹಲ ಮೂಡಿಸಿದೆ. ರಾಜಕೀಯ ತಂತ್ರಗಾರಿಕೆ ಮೂಲಕ ಸೋಮಣ್ಣ ಅವರನ್ನು ಮಣಿಸುವಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗುತ್ತಾರಾ ಅಥವಾ 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್​ನ ಜಿಟಿ ದೇವೇಗೌಡ ಅವರು ಸೋಲಿಸಿದಂತೆ ಈ ಬಾರಿಯ ಚುನಾವಣೆಯಲ್ಲಿ ಸೋಮಣ್ಣ ಅವರು ಸೋಲಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಸಿದ್ದರಾಮಯ್ಯ ಮತ್ತು ಸೋಮಣ್ಣರಿಗೆ ನಿರ್ಣಾಯಕ ಹೋರಾಟ

ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿರುವಂತೆ ಅವರದ್ದು ಕೊನೆಯ ಚುನಾವಣೆಯಾಗಿದೆ. ಇತ್ತ ಸೋಮಣ್ಣ ಅವರಿಗೆ ನೀಡಿದ ಎರಡೂ ಕ್ಷೇತ್ರಗಳು ಅವರಿಗೆ ಹೊಸ ಕ್ಷೇತ್ರವಾಗಿರುವುದರಿಂದ ಗೆಲುವಿಗಾಗಿ ಇನ್ನಿಲ್ಲದ ಶ್ರಮ ಹಾಕಬೇಕಾಗಿದೆ. ಎರಡೂ ಕ್ಷೇತ್ರ ಕಳೆದುಕೊಂಡರೆ ರಾಜಕೀಯ ಜೀವನಕ್ಕೆ ಹೊಡೆತ ಬೀಳಲಿದೆ. ಹೀಗಾಗಿ ಈ ಇಬ್ಬರು ಘಟಾನುಘಟಿ ನಾಯಕರಿಗೆ ಗೆಲುವು ನಿರ್ಣಾಯಕವಾಗಿದ್ದು, ಜನಾಶೀರ್ವಾದ ಯಾರಿಗೆ ಇದೆ ಎಂಬುದು ಮೇ 13ರಂದು ತಿಳಿದುಬರಲಿದೆ.

ಪ್ರತಿಸ್ಪರ್ಧಿ ಸೋಮಣ್ಣ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

ವರುಣದಿಂದ ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಯಾರೇ ಬಂದರೂ ಸ್ವಾಗತ, ಯಾರು ಬೇಕಾದರೂ ಸ್ಪರ್ಧಿಸಬಹುದು, ನನ್ನ ವಿರುದ್ಧ ಸೋಮಣ್ಣ ಸ್ಪರ್ಧೆ ಹಿಂದಿನ ಉದ್ದೇಶ ಏನೂ ಗೊತ್ತಿಲ್ಲ. ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ನಾನು ಮಾತಾಡಲ್ಲ. ಸೋಮಣ್ಣ ಎರಡು ಕಡೆ ಸ್ಪರ್ಧೆ ಮಾಡುತ್ತಾರೆ ಅಂದರೆ ಬೇಡ ಎನ್ನಲಾ? ಸೋಮಣ್ಣ ಒಂದು ಕಡೆ ಸ್ಪರ್ಧಿಸಬೇಡಿ ಎನ್ನಲಾ ಎಂದು ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸೋಮಣ್ಣ ಸೋಲಿಸುತ್ತಾರಾ?

ರಾಜ್ಯದ ಮಾಸ್ ಲೀಡರ್​ಗಳಲ್ಲಿ ಒಬ್ಬರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಮಣ್ಣ ಅವರು ಸೋಲಿಸುತ್ತಾರಾ ಎಂಬುದು ಎಲ್ಲರಲ್ಲಿರುವ ಪ್ರಶ್ನೆಯಾಗಿದೆ. ಈ ಬಗ್ಗೆ ಹೇಳಿಕೆ ನೀಡಿದ್ದ ಸೋಮಣ್ಣ, ಸೋಲು ಗೆಲುವು ಒಂದು ನಾಣ್ಯದ ಎರಡು ಮುಖ. ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದವನು ಸೋಮಣ್ಣ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಂದು ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ ಅನುಭವ ಇದೆ. ಇದು ವಿಧಿ ನಿಯಮ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ವರುಣಾ ಕ್ಷೇತ್ರದ ಟಿಕೆಟ್ ನೀಡಿದೆ. ಪ್ರಚಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Wed, 12 April 23