ಅಬ್ ಕೀ ಬಾರ್, 400 ಪಾರ್! ನಾವು ಸಾಧಿಸಿ ತೋರಿಸುತ್ತೇವೆ: ಚುನಾವಣೆ ದಿನಾಂಕ ಪ್ರಕಟ ಬೆನ್ನಲ್ಲೇ ಪ್ರಧಾನಿ ಮೋದಿ ಘೋಷಣೆ

|

Updated on: Mar 16, 2024 | 5:13 PM

ಲೋಕಸಭೆ ಚುನಾವಣೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ದೇಶದ ಜನತೆಯನ್ನು ಉದ್ದೇಶಿಸಿ ಸಂದೇಶ ಪ್ರಕಟಿಸಿದ್ದಾರೆ. ನಾವು ಮಾಡಿರುವ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ಮೋದಿ ಸಂದೇಶದ ಪೂರ್ಣ ವಿವರ ಇಲ್ಲಿದೆ.

ಅಬ್ ಕೀ ಬಾರ್, 400 ಪಾರ್! ನಾವು ಸಾಧಿಸಿ ತೋರಿಸುತ್ತೇವೆ: ಚುನಾವಣೆ ದಿನಾಂಕ ಪ್ರಕಟ ಬೆನ್ನಲ್ಲೇ ಪ್ರಧಾನಿ ಮೋದಿ ಘೋಷಣೆ
ನರೇಂದ್ರ ಮೋದಿ
Follow us on

ನವದೆಹಲಿ, ಮಾರ್ಚ್ 16: ಲೋಕಸಭೆ ಚುನಾವಣೆ ದಿನಾಂಕ (Lok Sabha Election Dates) ಪ್ರಕಟಗೊಂಡ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಜಾಪ್ರಭುತ್ವದ ಹಬ್ಬ ಆಚರಿಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಮತ್ತೆ ಬಂದಿದೆ! ಚುನಾವಣಾ ಆಯೋಗವು 2024 ರ ಲೋಕಸಭೆ ಚುನಾವಣೆ ದಿನಾಂಕಗಳನ್ನು ಪ್ರಕಟಿಸಿದೆ. ನಾವು, ಅಂದರೆ ಬಿಜೆಪಿ-ಎನ್‌ಡಿಎ ಚುನಾವಣೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ. ಉತ್ತಮ ಆಡಳಿತ ಮತ್ತು ಕ್ಷೇತ್ರಗಳಾದ್ಯಂತ ಉತ್ತಮ ಸೇವೆ ನೀಡಿರುವ ನಮ್ಮ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ಹತ್ತು ವರ್ಷಗಳ ಹಿಂದೆ ನಾವು ಅಧಿಕಾರ ವಹಿಸಿಕೊಳ್ಳುವ ಮೊದಲು, ಈಗಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ಸರ್ಕಾರದ ಆಡಳಿತದಿಂದಾಗಿ ಭಾರತದ ಜನರು ಭ್ರಮನಿರಸನಗೊಂಡಿದ್ದರು. ಹಗರಣಗಳು ಮತ್ತು ಕೆಟ್ಟ ನೀತಿಗಳಿಂದ ಯಾವುದೇ ಕ್ಷೇತ್ರವನ್ನು ಬಿಟ್ಟಿರಲಿಲ್ಲ. ಜಗತ್ತು ಭಾರತವನ್ನು ಕೈಬಿಟ್ಟಿತ್ತು. ಅಲ್ಲಿಂದ ಮುಂದಕ್ಕೆ ನಮ್ಮದು ಇದು ಅದ್ಭುತವಾದ ತಿರುವು. 140 ಕೋಟಿ ಭಾರತೀಯರಿಂದ ಕೂಡಿರುವ ನಮ್ಮ ರಾಷ್ಟ್ರವು ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ನಾವು ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಕೋಟಿಗಟ್ಟಲೆ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದೇವೆ. ನಮ್ಮ ಯೋಜನೆಗಳು ಭಾರತದ ಎಲ್ಲಾ ಭಾಗಗಳನ್ನು ತಲುಪಿವೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಅಬ್ ಕೀ ಬಾರ್, 400 ಪಾರ್! ಮೋದಿ ಎಕ್ಸ್ ಸಂದೇಶ


ದೃಢಸಂಕಲ್ಪ, ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಸರ್ಕಾರ ಏನು ಮಾಡಬಹುದೆಂಬುದನ್ನು ಭಾರತದ ಜನರು ನೋಡುತ್ತಿದ್ದಾರೆ. ಮತ್ತು ಅವರು ಅದಕ್ಕಿಂತಲೂ ಹೆಚ್ಚಿನದನ್ನು ಬಯಸುತ್ತಾರೆ. ಅದಕ್ಕಾಗಿಯೇ ಭಾರತದ ಮೂಲೆ ಮೂಲೆಯಿಂದ, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಜನರು ಒಂದೇ ಧ್ವನಿಯಲ್ಲಿ ‘ಅಬ್ ಕೀ ಬಾರ್, 400 ಪಾರ್’ ಎಂದು ಹೇಳುತ್ತಿದ್ದಾರೆ ಎಂದು ಮೋದಿ ಹೇಳಿದರು.

ನಮ್ಮನ್ನು ನಿಂದಿಸುವುದು ಮತ್ತು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದನ್ನಷ್ಟೇ ಅವರು (ಪ್ರತಿಪಕ್ಷಗಳನ್ನು ಉದ್ದೇಶಿಸಿ ಮಾಡಬಲ್ಲರು. ಅವರ ವಂಶಾಡಳಿತದ ಧೋರಣೆ ಮತ್ತು ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಅವರ ಭ್ರಷ್ಟಾಚಾರದ ದಾಖಲೆ ಅವರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಅಂಥ ನಾಯಕತ್ವ ಜನರಿಗೆ ಬೇಕಾಗಿಲ್ಲ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ? ನಿಮ್ಮ ಕ್ಷೇತ್ರದಲ್ಲಿ ಯಾವಾಗ ಮತದಾನ? ಇಲ್ಲಿದೆ ನೋಡಿ

ನಮ್ಮ ಮೂರನೇ ಅವಧಿಯಲ್ಲಿ, ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕಳೆದ ದಶಕವು ಎಪ್ಪತ್ತು ವರ್ಷಗಳ ಕಾಲ ಆಳಿದವರು ಮಾಡಿದ ಲೋಪಗಳನ್ನು ಸರಿಪಡಿಸಲೇ ಬೇಕಾಯಿತು. ಹೌದು, ಆ ಅವಧಿಯು ಭಾರತ ಸಮೃದ್ಧ ಮತ್ತು ಸ್ವಾವಲಂಬಿಯಾಗಬಹುದು ಎಂಬ ಆತ್ಮ ವಿಶ್ವಾಸದ ಮನೋಭಾವವನ್ನು ಹುಟ್ಟುಹಾಕುವುದಕ್ಕೂ ಬೇಕಾಯಿತು. ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಯುದ್ಧವು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯಲಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗುವುದು. ಭಾರತವನ್ನು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ಯುವಕರ ಕನಸುಗಳನ್ನು ನನಸು ಮಾಡುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಇದನ್ನೂ ಓದಿ: 7 ಹಂತಗಳಲ್ಲಿ ಲೋಕಸಭೆ ಚುನಾವಣೆ;ಏಪ್ರಿಲ್ 19ರಂದು ಮೊದಲ ಹಂತದ ಮತದಾನ

ಮುಂಬರುವ ಐದು ವರ್ಷಗಳು ಮುಂದಿನ ಸಾವಿರ ವರ್ಷಗಳವರೆಗೆ ರಾಷ್ಟ್ರವಾಗಿ ನಮ್ಮ ಪಥವನ್ನು ಮಾರ್ಗದರ್ಶಿಸುವ ಮತ್ತು ಭಾರತವನ್ನು ಸಮೃದ್ಧಿ, ಸರ್ವತೋಮುಖ ಬೆಳವಣಿಗೆ ಮತ್ತು ಜಾಗತಿಕ ನಾಯಕತ್ವವನ್ನು ಸಾಕಾರಗೊಳಿಸುವ ಮಾರ್ಗಸೂಚಿ ಅಳವಡಿಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಪೂರಕವಾಗಿರಲಿದೆ ಎಂದು ನಾನು ಸ್ಪಷ್ಟವಾಗಿ ಭಾವಿಸುತ್ತೇನೆ. ಜನರ ಆಶೀರ್ವಾದದಿಂದ ವಿಶೇಷವಾಗಿ ಬಡವರು, ನಮ್ಮ ರೈತರು, ಯುವ ಮತ್ತು ನಾರಿ ಶಕ್ತಿಯಿಂದ ನಾನು ಹೆಚ್ಚಿನ ಶಕ್ತಿಯನ್ನು ಪಡೆಯುತ್ತೇನೆ. ಅವರು ‘ನಾನೂ ಸಹ ಮೋದಿ ಪರಿವಾರ’ ಎಂದು ಹೇಳಿದಾಗ, ಅದು ನನ್ನಲ್ಲಿ ಸಂತೋಷವನ್ನು ಉಂಟುಮಾಡುತ್ತಿದೆ. ವಿಕಸಿತ್ ಭಾರತವನ್ನು ನಿರ್ಮಿಸಲು ನನ್ನನ್ನು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ. ಇದು ನಾವು ಅಂದುಕೊಂಡಿದ್ದನ್ನು ಮಾಡುವ ಯುಗ. ನಾವು ಒಟ್ಟಿಗೆ ಅದನ್ನು ಮಾಡಿ ಸಾಧಿಸುತ್ತೇ. ಅದಕ್ಕಿದು ಸರಿಯಾದ ಸಮಯ ಎಂದು ಮೋದಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ