Narendra Modi: ಪಂಚರಾಜ್ಯ ಚುನಾವಣೆ: ಬಿಜೆಪಿಗೆ ಆಶೀರ್ವದಿಸಿದ ಜನತಾ ಜನಾರ್ದನನಿಗೆ ಪ್ರಧಾನಿ ನರೇಂದ್ರ ಮೋದಿ ನಮನ

|

Updated on: Dec 03, 2023 | 5:26 PM

Assembly Election Results 2023: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡ ರಾಜ್ಯದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಅರ್ಪಿಸಿದ್ದಾರೆ. ಸರ್ಕಾರದ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲು ಶ್ರಮಿಸಿದ ಬಿಜೆಪಿ ಕಾರ್ಯಕರ್ತರನ್ನೂ ಮೋದಿ ಶ್ಲಾಘಿಸಿದ್ದಾರೆ. ತೆಲಂಗಾಣದಲ್ಲಿ ಕಳೆದ ಕೆಲ ವರ್ಷಗಳಿಂದ ಬಿಜೆಪಿ ಸತತವಾಗಿ ಬಲವೃದ್ಧಿಸಿಕೊಳ್ಳಲು ಕಾರಣವಾದ ಕಾರ್ಯಕರ್ತರ ಶ್ರಮವನ್ನೂ ಮೋದಿ ಗುರುತಿಸಿದ್ದಾರೆ.

Narendra Modi: ಪಂಚರಾಜ್ಯ ಚುನಾವಣೆ: ಬಿಜೆಪಿಗೆ ಆಶೀರ್ವದಿಸಿದ ಜನತಾ ಜನಾರ್ದನನಿಗೆ ಪ್ರಧಾನಿ ನರೇಂದ್ರ ಮೋದಿ ನಮನ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ, ಡಿಸೆಂಬರ್ 3: ಮೊನ್ನೆ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಗಳಲ್ಲಿ (five states assembly elections) ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಹೊರಬಂದಿದೆ. ಮಧ್ಯಪ್ರದೇಶ, ರಾಜಸ್ಥಾನ್ ಮತ್ತು ಛತ್ತೀಸ್​ಗಡ ರಾಜ್ಯಗಳು ಬಿಜೆಪಿ ಪಾಲಾಗಿವೆ. ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಎರಡನ್ನು ಕಳೆದುಕೊಂಡು, ಒಂದನ್ನು ಗಳಿಸಿದೆ. ಬಿಜೆಪಿ ಒಂದನ್ನು ಉಳಿಸಿಕೊಂಡು ಎರಡನ್ನು ಗಳಿಸಿದೆ. ಒಟ್ಟಾರೆ, ಬಿಜೆಪಿಗೆ ಸಕಾರಾತ್ಮಕ ಫಲಿತಾಂಶ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ತೆಲಂಗಾಣದಲ್ಲಿ ಮೊದಲ ಬಾರಿಗೆ ಅಧಿಕಾರ ಪಡೆದಿರುವ ತೃಪ್ತಿ ಬಿಟ್ಟರೆ ಉಳಿದಂತೆ ನಿರಾಸೆ ಆಗಿದೆ. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯನ್ನು ಆಶೀರ್ವದಿಸಿದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.

ಜನತಾ ಜನಾರ್ದನನಿಗೆ ನನ್ನ ನಮನ ಎಂದ ನರೇಂದ್ರ ಮೋದಿ

ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿಯನ್ನು ಗೆಲ್ಲಿಸಿದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಕೃತಜ್ಞತೆ ಅರ್ಪಿಸಿದ್ದಾರೆ. ಬಿಜೆಪಿ ಗೆಲುವು ಬಹುತೇಕ ಖಚಿತವಾಗುತ್ತಿರುವಂತೆಯೇ ಮೋದಿ ಟ್ವೀಟ್ ಮಾಡಿ ಪಕ್ಷದ ಕಾರ್ಯಕರ್ತರಿಗೂ ಧನ್ಯವಾದ ಹೇಳಿದ್ದಾರೆ.

‘ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿಶೇಷ ಧನ್ಯವಾದ. ನೀವೆಲ್ಲಾ ಅದ್ಭುತ ನಿದರ್ಶನ ಹಾಕಿಕೊಟ್ಟಿದ್ದೀರಿ. ಬಿಜೆಪಿಯ ಅಭಿವೃದ್ಧಿ ಮತ್ತು ಬಡವರ ಕಲ್ಯಾಣ ನೀತಿಗಳನ್ನು ಜನರಿಗೆ ನೀವು ತಲುಪಿಸಿದ ರೀತಿಗೆ ಎಷ್ಟು ಹೊಗಳಿದರೂ ಸಾಲದು…’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮ ವಿರೋಧಿಸಿದ್ದೇ ಸೋಲಿಗೆ ಕಾರಣ: ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣ ಟೀಕೆ

‘ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡದ ಚುನಾವಣಾ ಫಲಿತಾಂಶಗಳು ಒಳ್ಳೆಯ ಆಡಳಿತ ಮತ್ತು ಅಭಿವೃದ್ಧಿ ರಾಜಕಾರಣಕ್ಕೆ ಮಾತ್ರವೇ ಜನಬೆಂಬಲ ಇದೆ ಎಂಬುದನ್ನು ತೋರಿಸಿಕೊಟ್ಟಿವೆ. ಜನರ ವಿಶ್ವಾಸ ಬಿಜೆಪಿ ಮೇಲಿದೆ.

‘ಅಭಿವೃದ್ಧಿ ಹೊಂದಿದ ದೇಶದ ಗುರಿಯನ್ನು ಹೊತ್ತು ನಾವು ಮುಂದಡಿ ಇಡುತ್ತಿದ್ದೇವೆ. ಈ ಹಾದಿಯಲ್ಲಿ ನಾವು ವಿರಮಿಸುವುದಿಲ್ಲ. ಭಾರತವನ್ನು ವಿಜಯಶಾಲಿಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ನಾವು ಇಂದು ಪ್ರಬಲ ಹೆಜ್ಜೆ ಇಟ್ಟಿದ್ದೇವೆ,’ ಎಂದು ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದೇಕೆ ಮತದಾರ? ಇಲ್ಲಿದೆ ಕಾರಣ

ತೆಲಂಗಾಣ ಮತದಾರರಿಗೂ ಪ್ರಧಾನಿ ಧನ್ಯವಾದ…

ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಎರಡಂಕಿ ಸಂಖ್ಯೆ ದಾಟದೇ ಹೋದರೂ ಕಳೆದ ಚುನಾವಣೆಗಿಂತ ಸಾಕಷ್ಟು ಉತ್ತಮ ಫಲಿತಾಂಶ ಪಡೆದಿದೆ. ಕಳೆದ ಕೆಲ ವರ್ಷಗಳಿಂದ ಈ ರಾಜ್ಯದಲ್ಲಿ ಬಿಜೆಪಿ ಬಲವೃದ್ಧಿ ಸತತವಾಗಿ ಆಗುತ್ತಿದೆ. ಈ ವಿಚಾರವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಟ್ವೀಟ್​ವೊಂದರಲ್ಲಿ ತೆಲಂಗಾಣ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ.

‘…ತೆಲಂಗಾಣದೊಂದಿಗಿನ ನಮ್ಮ ಬಾಂದವ್ಯ ನಿಜಕ್ಕೂ ಅಬಾಧಿತವಾಗಿದೆ. ಜನರಿಗಾಗಿ ಕೆಲಸ ಮಾಡುವುದನ್ನು ನಾವು ಮುಂದುವರಿಸುತ್ತೇವೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನ ಶ್ರಮವನ್ನೂ ನಾವು ಮೆಚ್ಚಿದ್ದೇವೆ,’ ಎಂದು ನರೇಂದ್ರ ಮೋದಿ ಪ್ರತ್ಯೇಕ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:25 pm, Sun, 3 December 23