ಪಂಜಾಬ್​​ನಲ್ಲಿ ಆಪ್ ಜಯಭೇರಿ ಬಾರಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಭಗವಂತ್ ಮಾನ್​​ರ ಹಳೇ ಕಾಮಿಡಿ ವಿಡಿಯೊ

ಭಗವಂತ್ ಮಾನ್ ಅವರು ಎಂಎಲ್ಎ ಅಥವಾ "ಮಂತ್ರಿ" (ಸಚಿವರು) ಆಗುವ ಬಯಕೆಯನ್ನು ವ್ಯಕ್ತಪಡಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡ ಹಾಸ್ಯ ಕಾರ್ಯಕ್ರಮದ ವಿಡಿಯೊ ಇದಾಗಿದೆ.

ಪಂಜಾಬ್​​ನಲ್ಲಿ ಆಪ್ ಜಯಭೇರಿ ಬಾರಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಭಗವಂತ್ ಮಾನ್​​ರ ಹಳೇ ಕಾಮಿಡಿ ವಿಡಿಯೊ
ಭಗವಂತ್ ಮಾನ್
Updated By: ರಶ್ಮಿ ಕಲ್ಲಕಟ್ಟ

Updated on: Mar 10, 2022 | 8:55 PM

ಪಂಜಾಬ್ (Punjab) ಮುಖ್ಯಮಂತ್ರಿಯಾಗಿ ಚುನಾಯಿತರಾದ ಭಗವಂತ್ ಮಾನ್ (Bhagwant Mann)ಅವರ ಹಿಂದಿನ ಕಾಮಿಡಿಯನ್ ವೃತ್ತಿಜೀವನದ ಬಗ್ಗೆ ಮೀಮ್​​ಗಳ ಜತೆ ಇದೀಗ ಅವರ ಹಳೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ. ಭಗವಂತ್ ಮಾನ್ ಅವರು ಎಂಎಲ್ಎ ಅಥವಾ “ಮಂತ್ರಿ” (ಸಚಿವರು) ಆಗುವ ಬಯಕೆಯನ್ನು ವ್ಯಕ್ತಪಡಿಸುವ ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡ ಹಾಸ್ಯ ಕಾರ್ಯಕ್ರಮದ ವಿಡಿಯೊ ಇದಾಗಿದೆ. ಮಾನ್ ಪಂಜಾಬ್‌ನ ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವ ಸಮಯದಲ್ಲಿ ಈ ವಿಡಿಯೊ ಹೆಚ್ಚು ಸದ್ದು ಮಾಡಿದ್ದೂ ಇದೇ ಕಾರಣದಿಂದ. ಈ ವಿಡಿಯೊದಲ್ಲಿ ಭಗವಂತ್ ಮಾನ್ ವಿದ್ಯಾರ್ಥಿಯಾಗಿ ನಟಿಸಿದ್ದಾರೆ, ಅವರ ಶಿಕ್ಷಕರು ದೊಡ್ಡವನಾದ ಮೇಲೆ ಏನಾಗಬೇಕೆಂದು ಕೇಳುತ್ತಾರೆ. ಸಾಕಷ್ಟು ವಿದ್ಯಾಭ್ಯಾಸ ಪಡೆದರೆ ಅಧಿಕಾರಿಯಾಗಬಹುದು, ಇಲ್ಲದೇ ಹೋದರೆ ಎಂಎಲ್ ಎ ಆಗಬಹುದು, ಮಂತ್ರಿ ಆಗಬಹುದು ಎಂದು ಪಂಜಾಬಿ ಭಾಷೆಯಲ್ಲಿ ಉತ್ತರಿಸುತ್ತಾರೆ. ವಿಡಿಯೊ ನಂತರ ಮಾನ್ ರಾಜಕಾರಣಿಯಾಗಿರುವ ಫೋಟೊ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಜತೆಗಿರುವ ಮತ್ತೊಂದು ಫೋಟೊವನ್ನು ವಿಡಿಯೊದಲ್ಲಿ ಎಡಿಟ್ ಮಾಡಲಾಗಿದೆ. ಟ್ವಿಟರ್‌ನಲ್ಲಿ ಆ ವಿಡಿಯೊ ತುಣುಕು ಅನ್ನು ಹಂಚಿಕೊಂಡವರಲ್ಲಿ ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಕೂಡಾ ಒಬ್ಬರು “ಪ್ರೊಫೆಟಿಕ್,” ಎಂದು ಅವರು ಈ ವಿಡಿಯೊಗೆ ಶೀರ್ಷಿಕೆ ನೀಡಿದ್ದಾರೆ.


ಏತನ್ಮಧ್ಯೆ, ಟ್ವಿಟರ್‌ನ ಗಮನವನ್ನು ಸೆಳೆದ ಮಾನ್ ಅವರ ವಿಡಿಯೊ ಇದೊಂದೇ ಅಲ್ಲ,. ಮಾನ್ ಲಾಫ್ಟರ್ ಚಾಲೆಂಜ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದು ಅದರಲ್ಲಿ ರಾಜಕೀಯ ಪ್ರತಿಸ್ಪರ್ಧಿ ನವಜೋತ್ ಸಿಧು ತೀರ್ಪುಗಾರರಾಗಿದ್ದಾರೆ.


ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು 117 ವಿಧಾನಸಭಾ ಸ್ಥಾನಗಳ ಪೈಕಿ 92 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ಇಂದು ತಮ್ಮ ವಿಜಯೋತ್ಸವ ಭಾಷಣದಲ್ಲಿ ಭಗವಂತ್ ಮಾನ್ ಅವರು ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮದಲ್ಲಿ ನಡೆಯಲಿದೆ ಎಂದು ಘೋಷಿಸಿದರು. “ಯಾವುದೇ ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಯವರ ಚಿತ್ರವಿರುವುದಿಲ್ಲ, ಬದಲಿಗೆ ಭಗತ್ ಸಿಂಗ್ ಮತ್ತು ಬಿಆರ್ ಅಂಬೇಡ್ಕರ್ ಅವರ ಚಿತ್ರಗಳು ಇರುತ್ತವೆ” ಎಂದು ಮಾನ್ ಘೋಷಿಸಿದರು.

ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ ಎಂದು ಜನ ಸಾಬೀತು ಮಾಡಿದ್ದಾರೆ, ಇದು ಕೇವಲ ಆರಂಭ; ಪಂಜಾಬ್​ನಲ್ಲಿ ಆಪ್​ ಗೆಲುವಿಗೆ ಕೇಜ್ರಿವಾಲ್ ಸಂತಸ