Bhagwant Mann: ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್​ ಪಾಲಿಗೆ; ಮುಂದಿನ ಸಿಎಂ ಭಗವಂತ್ ಮಾನ್ ರಾಜಕೀಯ ಜರ್ನಿ ಹೀಗಿತ್ತು

ಭಗವಂತ್ ಮಾನ್​ ತಮ್ಮ ಹಾಸ್ಯವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ಇವರು ಮೊದಲು ಸೇರಿದ್ದು ಪೀಪಲ್ಸ್ ಪಾರ್ಟಿ ಆಫ್​ ಪಂಜಾಬ್​ನ್ನು. 2014ರಲ್ಲಿ ಆಪ್​ ಸೇರ್ಪಡೆಯಾದರು.

Bhagwant Mann: ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್​ ಪಾಲಿಗೆ; ಮುಂದಿನ ಸಿಎಂ ಭಗವಂತ್ ಮಾನ್ ರಾಜಕೀಯ ಜರ್ನಿ ಹೀಗಿತ್ತು
ಭಗವಂತ್ ಮಾನ್​
Follow us
| Updated By: Lakshmi Hegde

Updated on: Mar 10, 2022 | 1:16 PM

ಪಂಜಾಬ್​​ ರಾಜಕೀಯದಲ್ಲಿ (Punjab Politics) ಅಚ್ಚರಿಯ ಬೆಳವಣಿಗೆ. ಅರವಿಂದ್ ಕೇಜ್ರಿವಾಲ್​ ನೇತೃತ್ವದ ಆಮ್​ ಆದ್ಮಿ ಪಕ್ಷ (Aam Aadmi Party) ಅಧಿಕಾರದ ಚುಕ್ಕಾಣಿ ಹಿಡಿದಿದೆ. ಭಗವಂತ್ ಮಾನ್​ (Bhagwant mann) ಪಂಜಾಬ್​ನ ನೂತನ ಮುಖ್ಯಮಂತ್ರಿ. ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ್ ಮಾನ್​, ಫೆ.20ರಂದು ಅಮ್ಮನೊಂದಿಗೆ ಹೋಗಿ ಮತ ಚಲಾವಣೆ ಮಾಡಿದ್ದರು. ಅಂದು ಅವರ ತಾಯಿ ಹರ್ಪಾಲ್​ ಕೌರ್ ಮಾಧ್ಯಮಗಳೊಂದಿಗೆ ಮಾತನಾಡಿ, ನನ್ನ ಮಗ ಈಗಾಗಲೇ ಮುಖ್ಯಮಂತ್ರಿಯಾಗಿದ್ದಾನೆ. ಅವನನ್ನು ಎಲ್ಲರೂ ಪ್ರೀತಿಸುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಹೇಳಿದ್ದರು. ಅದೀಗ ಸತ್ಯವಾಗಿದ್ದು, ಮಾನ್​ ಪಂಜಾಬ್​ ಸಿಎಂ ಹುದ್ದೆಗೆ ಏರಿದ್ದಾರೆ.

ಭಗವಂತ್ ಮಾನ್​ಗೆ ಈಗ 48 ವರ್ಷ. ಕಳೆದು ಹೋಗಿರುವ ನೈಜ ಪಂಜಾಬ್​​ನ್ನು ಮತ್ತೆ ವಾಪಸ್​ ಪಡೆಯಲು ನಮ್ಮ ಆಪ್​ ಪಕ್ಷ ಇಲ್ಲಿ ಅಧಿಕಾರಕ್ಕೆ ಬರಬೇಕು ಎಂಬುದು ಅವರ ಹೇಳಿಕೆಯಾಗಿತ್ತು. ಭಗತ್​ ಸಿಂಗ್​​ರ ಹೇಳಿಕೆಗಳನ್ನು ಉಲ್ಲೇಖಿಸುತ್ತ, ಸ್ವಾತಂತ್ರ್ಯ ಹೋರಾಟಗಾರರ ಟ್ರೇಡ್​ಮಾರ್ಕ್​ ಎಂದೇ ಕರೆಯಲ್ಪಡುವ ಹಳದಿ ಬಣ್ಣದ (ಬಸಂತಿ)ಟರ್ಬನ್​ (ಪೇಟ) ಧರಿಸಿ, ಪ್ರಚಾರ ಸಭೆಗಳಲ್ಲಿ ಇಂಕ್ವಿಲಾಬ್​ ಜಿಂದಾಬಾದ್ ಘೋಷಣೆಯನ್ನು ಕೂಗುತ್ತ ಜನರೊಂದಿಗೆ ಬೆರೆಯುವ ಇವರು, ರಾಜಕೀಯಕ್ಕೆ ಪ್ರವೇಶ ಪಡೆಯುವುದಕ್ಕೂ ಮೊದಲು ಸ್ಟ್ಯಾಂಡ್ಅಪ್​ ಕಾಮಿಡಿಯನ್​ ಆಗಿದ್ದವರು. ಹಾಸ್ಯನಟ ಆಗಿದ್ದ ಇವರಿಗೆ ರಾಜಕೀಯ ಕ್ಷೇತ್ರದಲ್ಲಿ ಅನುಭವ ಇಲ್ಲದೆ ಹೋದರೂ, 2014ರಲ್ಲಿ ಆಪ್​ ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ತಮ್ಮ ತವರು ಜಿಲ್ಲೆ ಸಂಗ್ರೂರ್​ ಲೋಕಸಭಾ ಕ್ಷೇತ್ರದಿಂದ ಗೆದ್ದವರು. ಇದೀಗ ಆಮ್​ ಆದ್ಮಿ ಪಾರ್ಟಿಯ ಎರಡನೇ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ದೆಹಲಿಯಲ್ಲಿ ಮಾತ್ರ ಆಪ್​ ಸರ್ಕಾರವಿತ್ತು. ಆ ಪಕ್ಷದ ಎರಡನೇ ಸರ್ಕಾರ ಪಂಜಾಬ್​​ನಲ್ಲಿ ರಚನೆಯಾಗುತ್ತಿರುವುದು ಆಪ್​ ವಲಯದಲ್ಲಿ ಭರ್ಜರಿ ಸಂಭ್ರಮಕ್ಕೆ ಕಾರಣವಾಗಿದೆ.

2022ರ ಜನವರಿ 19ರಂದು ಆಮ್​ ಆದ್ಮಿ ಪಕ್ಷ ಪಂಜಾಬ್​​ನಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಭಗವಂತ್ ಮಾನ್​ ಹೆಸರನ್ನು ಘೋಷಿಸಿತು. ಹೀಗೆ ಘೋಷಣೆಗೂ ಮೊದಲು ಆಪ್​ ಒಂದು ಹೊಸ ಪ್ರಯೋಗ ಮಾಡಿತ್ತು. ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನೀವೇ ಆಯ್ಕೆ ಮಾಡಿ ಎಂದು ಜನರಿಗೇ ಹೇಳಿ, ಆಯ್ಕೆಯಾಗಿ ಫೋನ್​ನಂಬರ್​ ಕೊಟ್ಟಿತ್ತು. ಈ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಚುನಾವಣೆಗೆ ಸುಮಾರು 2.15 ಮಿಲಿಯನ್ ಜನರು ಸ್ಪಂದಿಸಿದ್ದರು. ಶೇ.93ರಷ್ಟು ಜನರು ಮಾನ್​ ಪರ ಮತದಾನ ಮಾಡಿದ್ದರು. ಇದೂ ಕೂಡ ಭಗವಂತ್ ಮಾನ್​ ಐಡಿಯಾವೇ ಆಗಿತ್ತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು.

ಭಗವಂತ್​ ಮಾನ್ ಎರಡು ಅವಧಿಗೆ ಸಂಗ್ರೂರ್​ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದವರು. ಸುಂಗ್ರೂರ್​​ನ ಸಾತೋಜ್​ ಗ್ರಾಮ ಇವರ ಹುಟ್ಟೂರು. 18ನೇ ವಯಸ್ಸಿನಲ್ಲಿಯೇ ತಕ್ಕಮಟ್ಟಿಗೆ ಜನಪ್ರಿಯತೆ ಗಳಿಸಿದವರು. ಸುನಮ್​ನ ಶಹೀದ್​ ಉಧಾಂ ಸಿಂಗ್ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದಾಗ ತಮ್ಮ ಮೊದಲನೇ ಆಡಿಯೋ ಕ್ಯಾಸೆಟ್​ ಬಿಡುಗಡೆ ಮಾಡಿದ್ದರು. ಸಾಮಾಜಿಕ ಮತ್ತು ರಾಜಕೀಯ ವಿಚಾರಗಳಲ್ಲಿ ಅತ್ಯಂತ ಚೆನ್ನಾಗಿ ವಿಡಂಬನೆ ಮಾಡುತ್ತಿದ್ದ ಅವರು ಬಹುಬೇಗನೇ ಒಬ್ಬ ಕಾಮಿಡಿಯನ್ ಆಗಿ ಗುರುತಿಸಿಕೊಂಡರು. ಪಂಜಾಬ್​ ದೂರದರ್ಶನ ಚಾನಲ್​ನಲ್ಲಿ ಪ್ರಸಾರವಾಗುತ್ತಿದ್ದ ಜುಗ್ನು ಮಸ್ತ್ ಮಸ್ತ್​ನಂತಹ ದೀರ್ಘಾವಧಿ ಶೋಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ರಾಜಕೀಯ ಜೀವನ

ಭಗವಂತ್ ಮಾನ್​ ತಮ್ಮ ಹಾಸ್ಯವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ರಾಜಕೀಯಕ್ಕೆ ಧುಮುಕಿದರು. ಇವರು ಮೊದಲು ಸೇರಿದ್ದು ಪೀಪಲ್ಸ್ ಪಾರ್ಟಿ ಆಫ್​ ಪಂಜಾಬ್​ನ್ನು. ಶಿರೋಮಣಿ ಅಕಾಲಿದಳದ ಪಿತಾಮಹ ಮತ್ತು ಪಂಜಾಬ್​​ನಲ್ಲಿ ಐದು ಬಾರಿ ಸಿಎಂ ಆದ ಪ್ರಕಾಶ್ ಸಿಂಗ್ ಬಾದಲ್​ ಅವರ ಸೋದರಳಿಯ ಮನ್​ಪ್ರೀತ್​ ಸಿಂಗ್ ಬಾದಲ್ 2011ರಲ್ಲಿ ಸಂಸ್ಥಾಪನೆ ಮಾಡಿದ್ದ ಪಕ್ಷ ಇದಾಗಿತ್ತು. ಆದರೆ 2014ರಲ್ಲಿ ಮನ್​ಪ್ರೀತ್​ ಸಿಂಗ್​ ತಮ್ಮ ಪಕ್ಷವನ್ನು ಕಾಂಗ್ರೆಸ್​ನೊಂದಿಗೆ ವಿಲೀನಗೊಳಿಸಿದರು. ಆಗ ಭಗವಂತ್ ಮಾನ್​ ಆಪ್​ಗೆ ಸೇರ್ಪಡೆಯಾದರು. ಅದೇ ವರ್ಷದ ಲೋಕಸಭಾ ಚುನಾವಣೆಯಲ್ಲಿ ಸುಂಗ್ರೂರ್​ನಿಂದ ಗೆದ್ದು, ದಾಖಲೆ ಮಾಡಿದರು.

ವಿವಾದಗಳಿಗೆ ಹೊರತಲ್ಲ

2017ರ ಪಂಜಾಬ್​ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಆಪ್​​ನ ಅನೇಕ ರ್ಯಾಲಿಗಳಲ್ಲಿ ಭಾಗವಹಿಸಿ, ಪ್ರಚಾರ ನಡೆಸಿದ್ದರು. ಆದರೆ ಈ ವೇಳೆ ಒಂದು ವಿವಾದವನ್ನೂ ಮೈಮೇಲೆ ಎಳೆದುಕೊಂಡಿದ್ದರು. ಪಂಜಾಬ್​ನಲ್ಲಿ ಸುದೀರ್ಘಾವಧಿ ಆಡಳಿತ ನಡೆಸಿದ ಬಾದಲ್​ ಕುಟುಂಬವನ್ನು ವ್ಯಂಗ್ಯವಾಡಿದ್ದರು. ಪಂಜಾಬ್​ನ ಪ್ರಸಿದ್ಧ ಕಿರುಗೀತೆ ಕಿಕ್ಲಿ-ಕಲೀರ್​​ ಮೂಲಕ ಅಕಾಲಿ ದಳದ ಆಡಳಿತವನ್ನು ಟೀಕಿಸಿದರು. ಅಷ್ಟೇ ಅಲ್ಲ, ಶಿರೋಮಣಿ ಅಕಾಲಿದಳದ ಅಂದಿನ ಸಚಿವ ಬಿಕ್ರಮ್​ ಸಿಂಗ್ ಮಜಿಥಿಯಾರನ್ನು ಅವರು ಡ್ರಗ್ಸ್​ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಟೀಕಿಸಿದ್ದರು. ಹೀಗಾಗಿ ಮಜಿಥಿಯಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2018ರಲ್ಲಿ ಆಪ್​ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್​ ಮಜಿಥಿಯಾ ಬಳಿ ಕ್ಷಮೆ ಕೇಳಿದಾಗ, ಇತ್ತ ಭಗವಂತ್ ಮಾನ್ ಅದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿ ತಮ್ಮ ರಾಜ್ಯ ಆಪ್​ ಮುಖ್ಯಸ್ಥನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.​ ಮತ್ತೆ ಅರವಿಂದ್ ಕೇಜ್ರಿವಾಲ್​ ಮಧ್ಯಪ್ರವೇಶದ ಬಳಿಕ ವಾಪಸ್ ಆಗಿದ್ದರು.

ಇನ್ನೊಂದು ವಿವಾದವೆಂದರೆ, ಸಂಸತ್​ ಕಲಾಪಕ್ಕೆ ಮದ್ಯಪಾನ ಮಾಡಿಕೊಂಡು ಬಂದಿದ್ದು. ಅದಾದ ಬಳಿಕ ತೀವ್ರ ಟೀಕೆಗೆ ಗುರಿಯಾಗಿದ್ದರು. ನಂತರ ತಮ್ಮ ತಪ್ಪನ್ನು ಒಪ್ಪಿಕೊಂಡು, ಈಗೆರಡು ವರ್ಷಗಳ ಹಿಂದೆ ಬರ್ನಾಲಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯ ವೇಳೆ, ತಾನು ಇನ್ನು ಮುಂದೆ ಎಂದಿಗೂ ಮದ್ಯಪಾನ ಮಾಡುವುದಿಲ್ಲ ಎಂದು ಪ್ರತಿಜ್ಞೆಯನ್ನೂ ಮಾಡಿದ್ದಾರೆ. ಇನ್ನು ಪತ್ನಿಯಿಂದ ದೂರ ಇರುವ ಇವರು ವಿಚ್ಛೇದನಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿದ್ದಾಗಿ ಮಾಹಿತಿ ಇದೆ. ಆಪ್​ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್​ ಎಂದು ಘೋಷಣೆಯಾಗುತ್ತಿದ್ದಂತೆ, ಕಾಂಗ್ರೆಸ್​ ಸಿಎಂ ಚರಣಜಿತ್ ಸಿಂಗ್ ಛನ್ನಿ ವ್ಯಂಗ್ಯವಾಡಿದ್ದರು. ಅವನೊಬ್ಬ ಕುಡುಕ, ಅವಿದ್ಯಾವಂತ. ಆತನ ಕೈಯಲ್ಲಿ ಪಂಜಾಬ್​ ಸುರಕ್ಷಿತವಾಗಿರುತ್ತದೆಯೇ ಎಂದು ಪ್ರಶ್ನಿಸಿದ್ದರು. ಆದರೆ ಆ ಯಾವ ಆರೋಪಗಳೂ ಲೆಕ್ಕಕ್ಕೆ ಬರಲಿಲ್ಲ. ಜನಾಶೀರ್ವಾದ ಮಾನ್​ರಿಗೆ ಸಿಕ್ಕಿದೆ.

ಇದನ್ನೂ ಓದಿ: ಪಟಿಯಾಲ ಕ್ಷೇತ್ರದಲ್ಲಿ ಪಂಜಾಬ್​ ಮಾಜಿ ಸಿಎಂ ಅಮರೀಂದರ್ ಸಿಂಗ್​ಗೆ ಭಾರೀ ಮುಖಭಂಗ; ಆಪ್​ ಸ್ಪರ್ಧಿ ವಿರುದ್ಧ ಕ್ಯಾಪ್ಟನ್​ಗೆ ಸೋಲು