Uttar Pradesh Assembly polls ಅಪ್ನಾ ದಳ ಮತ್ತು ನಿಶಾದ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ

| Updated By: ರಶ್ಮಿ ಕಲ್ಲಕಟ್ಟ

Updated on: Jan 19, 2022 | 6:55 PM

ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, 2019ರ ಲೋಕಸಭೆ ಚುನಾವಣೆಯಲ್ಲಿ ನಾವು ಮಾಡಿದಂತೆ ಎನ್‌ಡಿಎ ಮಿತ್ರಪಕ್ಷಗಳು ಒಟ್ಟಾಗಿ ಸ್ಪರ್ಧಿಸುತ್ತಿವೆ ಎಂದಿದ್ದಾರೆ.

Uttar Pradesh Assembly polls ಅಪ್ನಾ ದಳ ಮತ್ತು ನಿಶಾದ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ
ಮೈತ್ರಿಕೂಟದ ನಾಯಕರೊಂದಿಗೆ ಬಿಜೆಪಿ ವರಿಷ್ಠರು
Follow us on

ದೆಹಲಿ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ(UP Assembly polls 2022) ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಅಂತಿಮಗೊಳಿಸಿದ್ದು, ಅಪ್ನಾ ದಳ ಮತ್ತು ನಿಶಾದ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವುದಾಗಿ ಹೇಳಿದೆ. ಹಿಂದಿನ ದಿನ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (CEC) ಸಭೆಯ ಮುಕ್ತಾಯದ ನಂತರ ಪಕ್ಷದ ನಿರ್ಧಾರವನ್ನು ಅದರ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಘೋಷಣೆ ಮಾಡಿದರು. ಬುಧವಾರ  ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ, 2019ರ ಲೋಕಸಭೆ ಚುನಾವಣೆಯಲ್ಲಿ ನಾವು ಮಾಡಿದಂತೆ ಎನ್‌ಡಿಎ ಮಿತ್ರಪಕ್ಷಗಳು ಒಟ್ಟಾಗಿ ಸ್ಪರ್ಧಿಸುತ್ತಿವೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಅಪ್ನಾ ದಳ ಮತ್ತು ನಿಶಾದ್ ಪಕ್ಷವು 403 ಸ್ಥಾನಗಳಲ್ಲಿ ಜಂಟಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಲಿವೆ ಎಂದಿದ್ದಾರೆ.ಮುಂಬರುವ ಚುನಾವಣೆಗೆ ಸೀಟು ಹಂಚಿಕೆ ಕುರಿತು ಕಳೆದ ಕೆಲವು ದಿನಗಳಿಂದ ಉಭಯ ಪಕ್ಷಗಳೊಂದಿಗೆ ವಿವರವಾದ ಚರ್ಚೆ ನಡೆಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ತಿಳಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸೀಟು ಹಂಚಿಕೆಗಾಗಿ ಬಿಜೆಪಿ ವರಿಷ್ಠರೊಂದಿಗೆ ಅಂತಿಮ ಸುತ್ತಿನ ಸಭೆ ನಡೆಸಲು ಅಪ್ನಾ ದಳದ ರಾಜ್ಯಾಧ್ಯಕ್ಷ ಡಾ.ಜಮುನಾ ಪ್ರಸಾದ್ ಸರೋಜ್ ಮಂಗಳವಾರ ದೆಹಲಿಗೆ ಆಗಮಿಸಿದ್ದರು. ಅಪ್ನಾ ದಳದ ಅಧ್ಯಕ್ಷೆ ಅನುಪ್ರಿಯಾ ಪಟೇಲ್ ಮತ್ತು ಆಶಿಶ್ ಪಟೇಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸುದ್ದಿ ಸಂಸ್ಥೆ ಎಎನ್ಐ ತಿಳಿಸಿದೆ.

11 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಎರಡು ಪಟ್ಟು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಅಪ್ನಾ ದಳದ ಪದಾಧಿಕಾರಿಗಳು ಎಎನ್‌ಐಗೆ ತಿಳಿಸಿದ್ದಾರೆ.

ವಿಷಯ ತಿಳಿದಿರುವ ಜನರ ಪ್ರಕಾರ ಕಾನ್ಪುರ್, ಮೌರಾನಿಪುರ, ಝಾನ್ಸಿ, ನಾನ್ಪಾರಾ, ಬಹ್ರೈಚ್, ಬನಾರಸ್‌ನ ಸೇವಾಪುರಿ ರೊಹನಿಯಾ ಪಿಂಡ್ರಾ, ಅಲಹಾಬಾದ್‌ನ ಸೊರಾವ್ ಹಂಡಿಯಾ, ಗೋರಖ್‌ಪುರದ ಶೋಹ್ರತ್‌ಗಢ್, ನೌತನ್ವಾ, ಕುಶಿನಗರ ಮತ್ತು ಇತರ ಕೆಲವು ಸ್ಥಾನಗಳ ಮೇಲೆ ಪಕ್ಷವು ತನ್ನ ದೃಷ್ಟಿ ನೆಟ್ಟಿದೆ. ಲಕ್ನೋದಿಂದ ಮೋಹನ್‌ಲಾಲ್‌ಗಂಜ್‌ ನ ಕೆಲವು ಸೀಟುಗಳ ಮೇಲೂ ಕಣ್ಣಿಟ್ಟಿದೆ.

ಕಳೆದ ವಾರ ಮುಂಬರುವ ವಿಧಾನಸಭಾ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ 107 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಅಲ್ಲದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖ್‌ಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಅದು ಹೇಳಿದೆ. ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭಾಷಣದ ವೇಳೆ ಟೆಲಿಪ್ರಾಂಪ್ಟರ್ ಕೈಕೊಟ್ಟಿದ್ದಲ್ಲ, ಅದು ತಾಂತ್ರಿಕ ದೋಷ

Published On - 6:31 pm, Wed, 19 January 22