
ಪ್ರಭಾಸ್ ನಟನೆ ‘ಫೌಜಿ’ ಚಿತ್ರದ ಶೂಟ್ ವೇಳೆ ಹಿರಿಯ ನಟ ರಾಜೇಶ್ ಶರ್ಮ ಅವರಿಗೆ ಒಂದು ತೊಂದರೆ ಆಗಿದೆ. ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಈ ಚಿತ್ರದ ಶೂಟ್ ನಡೆಯುತ್ತಿತ್ತು. ಈ ವೇಳೆ ರಾಜೇಶ್ ಅವರಿಗೆ ಹುಳುವೊಂದು ಕಚ್ಚಿದೆ. ಆ ಬಳಿಕ ಜ್ವರ ಕೂಡ ಕಾಣಿಸಿದೆ. ಸದ್ಯ ಅವರ ಆರೋಗ್ಯ ತೀವ್ರವಾಗಿ ಬಿಗಡಾಯಿಸಿದೆ. ಅವರು ಕೋಲ್ಕತ್ತಾ ತಲುಪಿದ್ದು, ಅಲ್ಲಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಮುಗಿದ ನಂತರ ರಾಜೇಶ್ ಶರ್ಮ ಅವರು ಸ್ಥಳೀಯ ತಂತ್ರಜ್ಞರೊಂದಿಗೆ ಮಾತನಾಡುತ್ತಿದ್ದರು. ಆ ಜಾಗದಲ್ಲಿ ದಟ್ಟವಾದ ಗಿಡಗಂಟಿಗಳಿದ್ದವು. ಅಲ್ಲಿ ಅವರಿಗೆ ಒಂದು ಕೀಟ ಕಚ್ಚಿದೆ. ಅದು ಕೇವಲ ಸಾಮಾನ್ಯ ಹುಳ ಇರಬೇಕು ಎಂದು ರಾಜೇಶ್ ಶರ್ಮ ನಿರ್ಲಕ್ಷ್ಯ ವಹಿಸಿದ್ದಾರೆ. ಅದುವೇ ಅವರು ಮಾಡಿದ ದೊಡ್ಡ ತಪ್ಪು.
ಕೀಟ ಕಚ್ಚಿದ ಆರು ಗಂಟೆಗಳ ನಂತರ ಅವರ ಬಲಗಾಲಿನಲ್ಲಿ ತೀವ್ರ ನೋವು ಕಾಣಿಸಿಕೊಂಡಿದೆ. ಅವರು ಕೋಲ್ಕತ್ತಾ ವಿಮಾನ ಹತ್ತುವಷ್ಟರಲ್ಲಿ ಜ್ವರ ಹೆಚ್ಚಾಗಿದೆ. ಮರುದಿನ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ತೀವ್ರ ಜ್ವರ ಮತ್ತು ಉಸಿರಾಟದ ತೊಂದರೆ ಇದೆ. ಅವರ ಬಲಗಾಲಿನ ಸೋಂಕು ವೇಗವಾಗಿ ಹರಡುತ್ತಿದೆ. ಕಾಲ್ಬೆರಳುಗಳಿಂದ ಮೊಣಕಾಲಿನವರೆಗೆ ಸೋಂಕು ಹಬ್ಬಿದ್ದು, ದೊಡ್ಡ ದೊಡ್ಡ ಗುಳ್ಳೆಗಳು ಎದ್ದಿವೆ ಎಂದು ವರದಿ ಆಗಿದೆ.
ಡಾ. ಅವಿಜಿತ್ ಭಟ್ಟಾಚಾರ್ಯ ಅವರ ನೇತೃತ್ವದಲ್ಲಿ ರಾಜೇಶ್ ಶರ್ಮ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ರಕ್ತ ಹೆಪ್ಪುಗಟ್ಟುವ ಭೀತಿ ಎದುರಾಗಿದೆ. ಈ ರಕ್ತ ಹೆಪ್ಪುಗಟ್ಟುವಿಕೆ ಶ್ವಾಸಕೋಶಕ್ಕೆ ತಲುಪಿದರೆ ಪ್ರಾಣಕ್ಕೆ ಆಪತ್ತು ಬರಬಹುದು. ಹಾಗಾಗಿ ವೈದ್ಯರು ಅವರ ಮೇಲೆ ಹೆಚ್ಚಿನ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ: ಕೋರ್ಟ್ ಕೇಸ್ನಲ್ಲಿ ಗೆದ್ದ ಕಪಿಲ್ ಶರ್ಮಾ; ಅರ್ಜಿ ಹಾಕಿದವನಿಗೆ ಕಿವಿಮಾತು ಹೇಳಿದ ಕೋರ್ಟ್
ರಾಜೇಶ್ ಶರ್ಮ ಅವರ ಚಿಕಿತ್ಸೆಗೆ ಬಂಗಾಳದ ಚಲನಚಿತ್ರ ಕಲಾವಿದರ ಸಂಘ ಮತ್ತು ನಟ ಪ್ರೊಸೆಂಜಿತ್ ಚಟರ್ಜಿ ಸಹಾಯ ಮಾಡುತ್ತಿದ್ದಾರೆ. ಇದಕ್ಕೆ ಅವರ ಕುಟುಂಬಸ್ಥರು ಧನ್ಯವಾದ ಹೇಳಿದ್ದಾರೆ. ರಾಜೇಶ್ ಶರ್ಮ ಅವರು ಕಳೆದ ಮೂರು ದಶಕಗಳಿಂದ ಹಿಂದಿ ಮತ್ತು ಬಂಗಾಳಿ ಚಿತ್ರರಂಗದಲ್ಲಿ ಪೋಷಕ ನಟರಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವೆಬ್ ಸೀರಿಸ್ ಮೂಲಕವೂ ಅವರು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.