
‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ದೊಡ್ಡ ಸೆಲೆಬ್ರಿಟಿಗಳು ಸಹ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ. ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಅವರ ಪ್ರತಿಭೆಯನ್ನು ಕೊಂಡಾಡುತ್ತಿದ್ದಾರೆ. ಆದಿತ್ಯ ಧರ್ ಅಚಾನಕ್ಕಾಗಿ ಭಾರತದ ಟಾಪ್ ನಿರ್ದೇಶಕರಾಗಿ ಸ್ಥಾನ ಪಡೆದುಕೊಂಡಿದ್ದಾರೆ. ಆದಿತ್ಯ ಧರ್ ಅವರ ಈ ಅದ್ಭುತ ಯಶಸ್ಸಿನ ಹಿಂದೆ ಪತ್ನಿ, ನಟಿ ಯಾಮಿ ಗೌತಮ್ ಅವರ ಪಾಲು ಸಹ ಇದೆ. ಈಗ ಈ ಜೋಡಿ ಬಾಲಿವುಡ್ನ ‘ಪವರ್ ಕಪಲ್’ ಆಗಿ ಹೊರಹೊಮ್ಮಿದೆ. ಹಿಮಾಚಲ ಪ್ರದೇಶದ ಸುಂದರಿ ಯಾಮಿಗೂ ಕರ್ನಾಟಕಕ್ಕೂ ಒಂದು ಗಾಢವಾದ ಮತ್ತು ಮರೆಯಲಾಗದ ಸಂಬಂಧವಿದೆ.
ಇಂದು ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿರುವ ಯಾಮಿ ಗೌತಮ್ ಅವರ ಬೆಳ್ಳಿಪರದೆಯ ಪಯಣ ಆರಂಭವಾಗಿದ್ದು ಮುಂಬೈನಲ್ಲಲ್ಲ, ಬದಲಾಗಿ ಬೆಂಗಳೂರಿನಲ್ಲಿ. ಯಾಮಿ ಗೌತಮ್ ಅವರು ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದು 2010ರಲ್ಲಿ ಬಿಡುಗಡೆಯಾದ ‘ಉಲ್ಲಾಸ ಉತ್ಸಾಹ’ ಎಂಬ ಕನ್ನಡ ಚಿತ್ರದ ಮೂಲಕ. ಈ ಚಿತ್ರದಲ್ಲಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ನಾಯಕಿಯಾಗಿ ನಟಿಸಿದ್ದರು.
ಈ ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮಗೆ ಗಣೇಶ್ ಅವರ ಸ್ಟಾರ್ಡಮ್ ಬಗ್ಗೆ ಅರಿವಿರಲಿಲ್ಲ ಎಂದು ಯಾಮಿ ಹಲವು ಸಂದರ್ಶನಗಳಲ್ಲಿ ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲದೆ ತಮ್ಮ ಜೀವನಕ್ಕೆ ತಿರುವು ನೀಡಿದ್ದು ಬೆಂಗಳೂರು ಎಂದು ಸಹ ಅವರು ಹೇಳಿಕೊಂಡಿದ್ದಿದೆ. ‘ಬೆಂಗಳೂರಿನ ಚಿತ್ರಮಂದಿರವೊಂದರಲ್ಲಿ ನನ್ನ ತಾಯಿಯ ಜೊತೆ ಕುಳಿತು ಈ ಸಿನಿಮಾ ನೋಡಿದಾಗ, ನಾನು ಚಿತ್ರರಂಗದಲ್ಲಿ ಉಳಿಯಲು ಬಂದಿದ್ದೇನೆ ಎಂಬ ಆತ್ಮವಿಶ್ವಾಸ ಮೂಡಿತು’ ಎಂದು ಅವರು ಹೇಳಿಕೊಂಡಿದ್ದರು.
ಇದನ್ನೂ ಓದಿ:ಮುನ್ನೆಚ್ಚರಿಕೆಯ ಹೊರತಾಗಿಯೂ ‘ಧುರಂಧರ್ 2’ ಸಿನಿಮಾಕ್ಕೆ ಭಾರಿ ನಷ್ಟ
ಯಾಮಿ ಗೌಥಮ್ ಅವರ ವೃತ್ತಿ ಜೀವನದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಕೊಡುಗೆ ಅಪಾರವಾಗಿದೆ. ಯಾಮಿ ಅವರು ಬಾಲಿವುಡ್ಗೆ ಹೋಗುವ ಮುನ್ನ ದಕ್ಷಿಣದ ಭಾಷೆಗಳಲ್ಲಿ ನಟಿಸಿ ಅನುಭವ ಪಡೆದುಕೊಂಡಿದ್ದರು. ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾದ ಬಳಿಕ ತೆಲುಗಿನಲ್ಲಿ ‘ನುವ್ವಿಲಾ’ ಸಿನಿಮಾನಲ್ಲಿ ನಟಿಸಿದ್ದರು, ಅದೇ ಸಿನಿಮಾನಲ್ಲಿ ವಿಜಯ್ ದೇವರಕೊಂಡ ಸಹ ಇದ್ದರು, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಜೊತೆಗೆ ‘ಹೀರೋ’ ಮತ್ತು ತಮಿಳಿನಲ್ಲಿ ‘ಗೌರವಂ’ ಚಿತ್ರಗಳಲ್ಲಿ ನಟಿಸಿದರು. ‘ಗೌರವಂ’ ಸಿನಿಮಾವನ್ನು ಪ್ರಕಾಶ್ ರೈ ನಿರ್ಮಾಣ ಮಾಡಿದ್ದರು. ಅವರ ಮೊದಲ ಹಿಂದಿ ಸಿನಿಮಾ ‘ವಿಕ್ಕಿ ಡೋನರ್’ ಆ ಸಿನಿಮಾ ಸಹ ಸೂಪರ್ ಹಿಟ್ ಆಯ್ತು.
ಯಾಮಿ ಗೌತಮ್ ಇಂದಿಗೂ ದಕ್ಷಿಣ ಭಾರತದ ಚಿತ್ರರಂಗದ ಕಾರ್ಯವೈಖರಿ ಮತ್ತು ಅಲ್ಲಿನ ಜನರ ಒಗ್ಗಟ್ಟನ್ನು ಶ್ಲಾಘಿಸುತ್ತಾರೆ. ‘ದಕ್ಷಿಣದ ಚಿತ್ರರಂಗದಲ್ಲಿ ಯಾರೂ ಸಿನಿಮಾ ಬಗ್ಗೆ ನೆಗೆಟಿವಿಟಿ ಹರಡಲು ಧೈರ್ಯ ಮಾಡುವುದಿಲ್ಲ, ಯಾಕೆಂದರೆ ಅಲ್ಲಿನ ಇಂಡಸ್ಟ್ರಿ ಒಂದಾಗಿ ನಿಲ್ಲುತ್ತದೆ’ ಎಂಬ ಅವರ ಮಾತುಗಳು ಅವರು ಇಂದಿಗೂ ಸ್ಯಾಂಡಲ್ವುಡ್ ಮತ್ತು ಇತರ ದಕ್ಷಿಣ ಭಾಷೆಗಳ ಮೇಲೆ ಹೊಂದಿರುವ ಪ್ರೀತಿಯನ್ನು ತೋರಿಸುತ್ತದೆ.
‘ಧುರಂಧರ್’ ನಿರ್ದೇಶಕ ಆದಿತ್ಯ ಧರ್ ಅವರ ವೃತ್ತಿ ಜೀವನದ ಮೇಲೂ ಯಾಮಿ ಗೌಥಮ್ ಪ್ರಭಾವ ಇದೆ. ಆದಿತ್ಯ ನಿರ್ದೇಶಿಸಿದ ಮೊದಲ ಸಿನಿಮಾ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾನಲ್ಲಿ ಯಾಮಿ ನಟಿಸಿದ್ದರು. ಪಲ್ಲವಿ ಶರ್ಮಾ ಎಂಬ ಗುಪ್ತಚರ ಅಧಿಕಾರಿಯ ಪಾತ್ರ ಮಾಡಿದ್ದ ಯಾಮಿ, ಆದಿತ್ಯ ಅವರ ಕೆಲಸದ ಶಿಸ್ತು ಮತ್ತು ಶಾಂತ ಸ್ವಭಾವಕ್ಕೆ ಮಾರುಹೋದರು. 2021ರಲ್ಲಿ ಇವರು ಸರಳವಾಗಿ ವಿವಾಹವಾದರು.
ಸಿನಿಮಾ ನಿರ್ಮಾಣದ ಒತ್ತಡದ ಸಮಯದಲ್ಲಿ ಯಾಮಿ ಅವರು ಆದಿತ್ಯ ಅವರಿಗೆ ದೊಡ್ಡ ಬೆಂಬಲವಾಗಿ ನಿಂತಿದ್ದಾರೆ. ಇತ್ತೀಚೆಗೆ ‘ಧುರಂಧರ್ 2’ ಬಿಡುಗಡೆಯ ಮುನ್ನ ಬಾಲಿವುಡ್ನಲ್ಲಿ ನಡೆಯುವ ‘ಪೇಯ್ಡ್ ಹೈಪ್’ ಪ್ರಚಾರದ ವಿರುದ್ಧ ಯಾಮಿ ಧ್ವನಿ ಎತ್ತಿದ್ದರು. ತನ್ನ ಪತಿ ಮತ್ತು ತಂಡದ ಪ್ರಾಮಾಣಿಕ ಶ್ರಮವನ್ನು ರಕ್ಷಿಸಲು ಅವರು ದಕ್ಷಿಣ ಭಾರತದ ಚಿತ್ರರಂಗದ ಒಗ್ಗಟ್ಟನ್ನು ಉದಾಹರಣೆಯಾಗಿ ನೀಡಿ ಬಾಲಿವುಡ್ಗೆ ಬುದ್ಧಿ ಹೇಳಿದ್ದರು. ‘ಧುರಂಧರ್ 2’ ನಲ್ಲಿಯೂ ಸಹ ಯಾಮಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಯಾಮಿ ಅವರು ಶಾಜಿಯಾ ಬಾನೋ ಎಂಬ ಹೆಸರಿನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೇವಲ ಒಂದು ಸಣ್ಣ ದೃಶ್ಯವಾದರೂ, ಕಥೆಗೆ ಒಂದು ದೊಡ್ಡ ತಿರುವು ನೀಡುವ ಪಾತ್ರ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ