Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಾಗಾರ್ಜುನ

Akkineni Nagarjuna: ಸಮಂತಾ ಬಗ್ಗೆ ಹಾಗೂ ತಮ್ಮ ಬಗ್ಗೆ ತಮ್ಮ ಕುಟುಂಬದ ಬಗ್ಗೆ ಮಾಧ್ಯಮಗಳ ಮುಂದೆ ನೀಚ ಹೇಳಿಕೆ ನೀಡಿರುವ ತೆಲಂಗಾಣ ಸಚಿವೆ ಕೊಂಡ ಸುರೇಖಾ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ ಅಕ್ಕಿನೇನಿ ನಾಗಾರ್ಜುನ.

ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ನಾಗಾರ್ಜುನ
Follow us
ಮಂಜುನಾಥ ಸಿ.
|

Updated on: Oct 03, 2024 | 6:39 PM

ನಟಿ ಸಮಂತಾ-ನಾಗ ಚೈತನ್ಯ ವಿಚ್ಛೇದನ ಹಾಗೂ ಅಕ್ಕಿನೇನಿ ಕುಟುಂಬದ ಬಗ್ಗೆ ತೆಲಂಗಾಣ ಸಚಿವೆ ಕೊಂಡ ಸುರೇಖಾ ನೀಡಿರುವ ಹೇಳಿಕೆ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿದೆ. ಜೂ ಎನ್​ಟಿಆರ್, ನಾನಿ, ರಾಣಾ ದಗ್ಗುಬಾಟಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು, ಕೊಂಡ ಸುರೇಖಾ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟಿ ಸಮಂತಾ, ನಾಗ ಚೈತನ್ಯ ಅವರುಗಳು ಸಹ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಅಕ್ಕಿನೇನಿ ನಾಗಾರ್ಜುನ, ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ್ದ ಸಚಿವೆ ಕೊಂಡ ಸುರೇಖಾ, ವಿಪಕ್ಷ ಮುಖಂಡ ಕೆಟಿಆರ್ ಅನ್ನು ಟೀಕಿಸುವ ಭರದಲ್ಲಿ ಸಮಂತಾ, ನಾಗಾರ್ಜುನ ಮತ್ತು ನಾಗ ಚೈತನ್ಯ ಅವರನ್ನು ಎಳೆದು ತಂದಿದ್ದರು. ‘ನಾಗಾರ್ಜುನಗೆ ಸೇರಿದ ಅಕ್ರಮ ಕಟ್ಟಡ ಎನ್ ಕನ್ವೆನ್ಷನ್ ಅನ್ನು ಬೀಳಿಸುವ ಬೆದರಿಕೆಯನ್ನು ಕೆಟಿಆರ್ ಹಾಕಿದ್ದರು, ಅದನ್ನು ಬೀಳಿಸಬಾರದೆಂದರೆ ಸಮಂತಾ ಅನ್ನು ನನ್ನ ಬಳಿ ಕಳಿಸು ಎಂದಿದ್ದ, ಅಂತೆಯೇ ನಾಗಾರ್ಜುನ ಸಮಂತಾ ಅನ್ನು ಕೆಟಿಆರ್ ಬಳಿ ಹೋಗಲು ಹೇಳಿದ್ದರು, ಆದರೆ ಸಮಂತಾ ಅದಕ್ಕೆ ಒಪ್ಪಿರಲಿಲ್ಲ, ಇದೇ ಕಾರಣಕ್ಕೆ ಸಮಂತಾಗೆ ನಾಗ ಚೈತನ್ಯ ವಿಚ್ಛೇದನ ನೀಡಿ ಹೊರ ಹಾಕಿದರು’ ಎಂದಿದ್ದರು. ಕೊಂಡ ಸುರೇಖಾರ ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ:ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ

ಇದೀಗ ನಟ ಅಕ್ಕಿನೇನಿ ನಾಗಾರ್ಜುನ, ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾಮಪಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೊಂಡ ಸುರೇಖಾ ವಿರುದ್ಧ ದೂರು ದಾಖಲಿಸಿರುವ ನಾಗಾರ್ಜುನ, ಸಚಿವೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಶೀಘ್ರವೇ ನಡೆಯಲಿದೆ. ದೂರು ದಾಖಲಿಸಿರುವ ಪ್ರತಿಯನ್ನು ನಾಗಾರ್ಜುನ ಎರಡನೇ ಪುತ್ರ ಅಕ್ಕಿನೇನಿ ಅಖಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ, ನಾಗ ಚೈತನ್ಯ, ನಾಗಾರ್ಜುನ ಬಗ್ಗೆ ಕೊಂಡ ಸುರೇಖಾ ನೀಡಿರುವ ಈ ನೀಚ ಹೇಳಿಕೆಯನ್ನು ಅಕ್ಕಿನೇನಿ ಕುಟುಂಬ ಸದಸ್ಯರೆಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಇರುವ ನಾಗಾರ್ಜುನ ಪತ್ನಿ ಅಮಲಾ ಸಹ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ‘ಮಹಿಳೆಯೊಬ್ಬಳು-ರಾಕ್ಷಸಿಯಾಗಿ ಬದಲಾಗಿದ್ದನ್ನು ನೋಡಿದೆ’ ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ ಅಲ್ಲದೆ ಕೊಂಡ ಸುರೇಖಾ ಅವರನ್ನು ಪಕ್ಷದಿಂದ ಕಿತ್ತುಹಾಕುವಂತೆ ರಾಹುಲ್ ಗಾಂಧಿಯನ್ನು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ