‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ

| Updated By: ಮದನ್​ ಕುಮಾರ್​

Updated on: Dec 30, 2021 | 4:44 PM

RRR Movie: ಹಿಂದಿ ರಾಜ್ಯಗಳ ಪ್ರೇಕ್ಷಕರನ್ನು ಸೆಳೆಯಲು ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಅವರನ್ನು ‘ಆರ್​ಆರ್​ಆರ್​’ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತೇ? ಈ ಪ್ರಶ್ನೆಗೆ ರಾಜಮೌಳಿ ಉತ್ತರಿಸಿದ್ದಾರೆ.

‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ, ಅಜಯ್​ ದೇವಗನ್​ ಅತಿಥಿ ಪಾತ್ರ; ಸತ್ಯ ಬಾಯ್ಬಿಟ್ಟ ರಾಜಮೌಳಿ
ಅಜಯ್​ ದೇವಗನ್​, ರಾಜಮೌಳಿ, ಆಲಿಯಾ ಭಟ್​
Follow us on

ಹತ್ತು ಹಲವು ಕಾರಣಗಳಿಂದಾಗಿ ‘ಆರ್​ಆರ್​ಆರ್​’ ಸಿನಿಮಾ (RRR Movie) ಮೇಲೆ ನಿರೀಕ್ಷೆ ಸೃಷ್ಟಿ ಆಗಿದೆ. ಜ.7ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ರಾಜಮೌಳಿ (SS Rajamouli) ನಿರ್ದೇಶನದ ಈ ಸಿನಿಮಾದಲ್ಲಿ ಪಾತ್ರವರ್ಗ ಹೈಲೈಟ್​ ಆಗಿದೆ. ಬಾಲಿವುಡ್​ ಕಲಾವಿದರಾದ ಅಜಯ್​ ದೇವಗನ್​ (Ajay Devgn) ಮತ್ತು ಆಲಿಯಾ ಭಟ್ (Alia Bhatt)​ ಅವರು ನಟಿಸಿದ್ದಾರೆ. ಆದರೆ ಅವರ ಪಾತ್ರಗಳ ಬಗ್ಗೆ ಒಂದು ಸತ್ಯವನ್ನು ನಿರ್ದೇಶಕ ರಾಜಮೌಳಿ ಬಾಯಿ ಬಿಟ್ಟಿದ್ದಾರೆ. ಇವರಿಬ್ಬರದ್ದು ಅತಿಥಿ ಪಾತ್ರ ಎಂದು ಅವರು ಹೇಳಿದ್ದಾರೆ. ಈ ವಿಷಯ ಕೇಳಿ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ಅಭಿಮಾನಿಗಳಿಗೆ ಬೇಸರ ಆದರೂ ಅಚ್ಚರಿ ಏನಿಲ್ಲ. ಈ ಸಿನಿಮಾದಲ್ಲಿ ಹೀರೋಗಳಾಗಿ ಜ್ಯೂ. ಎನ್​ಟಿಆರ್​ (Jr NTR) ಮತ್ತು ರಾಮ್​ ಚರಣ್​ (Ram Charan) ಮಿಂಚಲಿದ್ದಾರೆ.

ಆಲಿಯಾ ಭಟ್​ ಅವರು ಸೀತಾ ಎಂಬ ಪಾತ್ರವನ್ನು ನಿಭಾಯಿಸಿದ್ದಾರೆ. ಆದರೆ ಅದೊಂದು ಚಿಕ್ಕ ಪಾತ್ರ ಎಂಬ ಮಾಹಿತಿ ಈಗ ತಿಳಿದುಬಂದಿದೆ. ಆ ಬಗ್ಗೆ ರಾಜಮೌಳಿ ಕೂಡ ಯಾವುದೇ ಮುಚ್ಚುಮರೆ ಮಾಡಿಲ್ಲ. ‘ಆಲಿಯಾ ಮತ್ತು ಅಜಯ್​ ದೇವಗನ್​ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅದನ್ನು ಮುಚ್ಚಿಟ್ಟು ನಾನು ಪ್ರೇಕ್ಷಕರಿಗೆ ಮೋಸ ಮಾಡುವುದಿಲ್ಲ. ಆದರೆ ಆ ಪಾತ್ರಗಳಿಗೆ ಹೀರೋಗಳಷ್ಟೇ ಮಹತ್ವ ಇದೆ’ ಎಂದು ರಾಜಮೌಳಿ ಹೇಳಿದ್ದಾರೆ.

ಹಾಗಾದರೆ ಹಿಂದಿ ರಾಜ್ಯಗಳ ಪ್ರೇಕ್ಷಕರನ್ನು ಸೆಳೆಯಲು ಅವರಿಬ್ಬರನ್ನು ಆಯ್ಕೆ ಮಾಡಿಕೊಳ್ಳಲಾಯಿತೇ? ಈ ಪ್ರಶ್ನೆಗೂ ರಾಜಮೌಳಿ ಉತ್ತರಿಸಿದ್ದಾರೆ. ‘ಕಮರ್ಷಿಯಲ್​ ಉದ್ದೇಶದಿಂದ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ‘ಈಗ’ ಮತ್ತು ‘ಬಾಹುಬಲಿ’ ಚಿತ್ರಕ್ಕೆ ಬೇರೆ ಭಾಷೆಯ ಚಿತ್ರರಂಗದ ಕಲಾವಿದರನ್ನು ಆಯ್ಕೆ ಮಾಡಿಕೊಂಡಾಗಲೂ ಅಂಥ ಉದ್ದೇಶ ಇರಲಿಲ್ಲ. ಆಯಾ ಪಾತ್ರಕ್ಕೆ ಯಾರು ಸೂಕ್ತವಾಗಿ ಹೊಂದಿಕೆ ಆಗುತ್ತಾರೋ ಅಂಥವರನ್ನೇ ಆಯ್ಕೆ ಮಾಡಿಕೊಂಡೆ’ ಎಂದು ಅವರು ಹೇಳಿದ್ದಾರೆ.

‘ತೆರೆ ಮೇಲೆ ಒಂದು ಪಾತ್ರ ಎಷ್ಟು ಹೊತ್ತು ಬರುತ್ತದೆ ಎಂಬುದು ಮುಖ್ಯವಲ್ಲ. ಆ ಪಾತ್ರಕ್ಕೆ ಎಷ್ಟು ಮಹತ್ವ ಇದೆ ಎಂಬುದು ಮುಖ್ಯವಾಗುತ್ತದೆ. ಆ ದೃಷ್ಟಿಯಿಂದ ಆಲಿಯಾ ಭಟ್​ ಮತ್ತು ಅಜಯ್​ ದೇವಗನ್​ ನಿಭಾಯಿಸಿರುವ ಈ ಪಾತ್ರಗಳಿಗೆ ತುಂಬ ಪ್ರಾಮುಖ್ಯತೆ ಇದೆ. ಈ ಸಿನಿಮಾದ ಆತ್ಮವೇ ಅಜಯ್​ ದೇವಗನ್​ ಪಾತ್ರ. ಇಬ್ಬರು ಹೀರೋಗಳನ್ನು ಬ್ಯಾಲೆನ್ಸ್​ ಮಾಡುವಂತಹ ಪಾತ್ರ ಆಲಿಯಾ ಭಟ್​ ಅವರದ್ದು’ ಎಂದು ರಾಜಮೌಳಿ ಹೇಳಿದ್ದಾರೆ.

ಈ ಸಿನಿಮಾ ತೆಲುಗಿನಲ್ಲಿ ನಿರ್ಮಾಣ ಆಗಿದ್ದು ಕನ್ನಡ, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಾಣುತ್ತಿದೆ. ಪ್ರಚಾರಕ್ಕಾಗಿ ಚಿತ್ರತಂಡ ಹೆಚ್ಚು ಒತ್ತು ನೀಡುತ್ತಿದೆ. ಬರೋಬ್ಬರಿ 20 ಕೋಟಿ ರೂಪಾಯಿಯನ್ನು ಪ್ರಚಾರಕ್ಕಾಗಿಯೇ ಮೀಸಲಿಡಲಾಗಿದೆ. ಡಿವಿವಿ ದಾನಯ್ಯ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬಂದಿವೆ.

ಇದನ್ನೂ ಓದಿ:

ಹಾಲಿವುಡ್​ ಆಫರ್​ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ

ಶರ್ಟ್​ ಬಟನ್​ ಹಾಕಿಕೊಳ್ಳಲು ಸಲ್ಲುಗೆ ಬೇಕಾಯ್ತು ಆಲಿಯಾ ಭಟ್​ ಸಹಾಯ; ವಿಡಿಯೋ ವೈರಲ್​

Published On - 4:43 pm, Thu, 30 December 21