ಎರಡನೇ ಪಾರ್ಟ್​ಗೆ ಪೂರ್ಣಗೊಳ್ಳಲ್ಲ ‘ಪುಷ್ಪ’ ಕಥೆ; ‘ರೂಲ್’ ಆದ ಬಳಿಕ ಬರಲಿದೆ ‘ರೋರ್’?

| Updated By: ರಾಜೇಶ್ ದುಗ್ಗುಮನೆ

Updated on: Feb 07, 2024 | 8:12 AM

ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾದಲ್ಲಿ ಪುಷ್ಪರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ರಕ್ತಚಂದನ ಕಳ್ಳಸಾಗಣೆ ಬಗ್ಗೆ ಇದೆ. ಆತ ಬೆಳೆದು ಬಂದ ಹಾದಿಯನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಎರಡನೇ ಭಾಗದಲ್ಲಿ ಹೆಸರೇ ಹೇಳುವಂತೆ ಆತನ ಆಡಳಿತದ ಬಗ್ಗೆ ತೋರಿಸಲಾಗುತ್ತದೆ. ಈಗ ನಿರ್ದೇಶಕರು ಮೂರನೇ ಭಾಗದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

ಎರಡನೇ ಪಾರ್ಟ್​ಗೆ ಪೂರ್ಣಗೊಳ್ಳಲ್ಲ ‘ಪುಷ್ಪ’ ಕಥೆ; ‘ರೂಲ್’ ಆದ ಬಳಿಕ ಬರಲಿದೆ ‘ರೋರ್’?
ಅಲ್ಲು ಅರ್ಜುನ್
Follow us on

‘ಪುಷ್ಪ: ದಿ ರೈಸ್’ ಸಿನಿಮಾ (Pushpa Movie) ಸೃಷ್ಟಿ ಮಾಡಿದ ದಾಖಲೆಗಳು ಹಲವು. ಈ ಚಿತ್ರವನ್ನು ಅಭಿಮಾನಿಗಳು ಸಾಕಷ್ಟು ಇಷ್ಟಪಟ್ಟಿದ್ದಾರೆ. ಅಲ್ಲು ಅರ್ಜುನ್ ಮ್ಯಾನರಿಸಂ ಬೇರೆಯದೇ ರೀತಿಯಲ್ಲಿ ಇತ್ತು. ಇದು ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಫಹಾದ್ ಫಾಸಿಲ್ ಮೊದಲಾದವರು ನಟಿಸಿದ್ದಾರೆ. ಈಗ ಚಿತ್ರಕ್ಕೆ ಎರಡನೇ ಭಾಗ ಸಿದ್ಧವಾಗುತ್ತಿದ್ದು, ‘ಪುಷ್ಪ: ದಿ ರೂಲ್’ ಎಂದು ಶೀರ್ಷಿಕೆ ನೀಡಲಾಗಿದೆ. ಇದಾದ ಬಳಿಕ ‘ಪುಷ್ಪ: ದಿ ರೋರ್’ ಬರಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಕುತೂಹಲ ಹೆಚ್ಚಿದೆ.

ಅಲ್ಲು ಅರ್ಜುನ್ ಅವರು ‘ಪುಷ್ಪ’ ಸಿನಿಮಾದಲ್ಲಿ ಪುಷ್ಪರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಕಥೆ ರಕ್ತಚಂದನ ಕಳ್ಳಸಾಗಣೆ ಬಗ್ಗೆ ಇದೆ. ಪುಷ್ಪರಾಜ್ ಕೂಲಿ ಮಾಡಿಕೊಂಡಿರುವ ಸಾಮಾನ್ಯ ವ್ಯಕ್ತಿ. ಆತ ರಕ್ತಚಂದನ ಕಳ್ಳಸಾಗಣೆಯವರ ಜೊತೆ ಸೇರಿ ಡಾನ್ ಆಗಿ ಬೆಳೆಯುತ್ತಾನೆ. ಆತ ಬೆಳೆದು ಬಂದ ಹಾದಿಯನ್ನು ತೋರಿಸಲಾಗಿದೆ. ಎರಡನೇ ಭಾಗದಲ್ಲಿ ಹೆಸರೇ ಹೇಳುವಂತೆ ಆತನ ಆಡಳಿತದ ಬಗ್ಗೆ ತೋರಿಸಲಾಗುತ್ತದೆ. ಈಗ ನಿರ್ದೇಶಕರು ಮೂರನೇ ಭಾಗದ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಇದಕ್ಕೆ ‘ಪುಷ್ಪ: ದಿ ರೋರ್’ ಎಂದು ಶೀರ್ಷಿಕೆ ಇಡುವ ಆಲೋಚನೆ ಅವರಿಗೆ ಇದೆ.

ಇತ್ತೀಚಿನ ಸಿನಿಮಾಗಳಲ್ಲಿ ಪಾರ್ಟ್​ಗಳಲ್ಲಿ ಕಥೆ ಹೇಳುವ ಟ್ರೆಂಡ್ ಜೋರಾಗಿದೆ. ‘ಕೆಜಿಎಫ್​’ ಈಗಾಗಲೇ ಎರಡು ಭಾಗಗಳಲ್ಲಿ ಬಂದಿದ್ದು ಮೂರನೇ ಪಾರ್ಟ್ ಕೂಡ ಸಿದ್ಧವಾಗಲಿದೆ. ‘ಪುಷ್ಪ’ ತಂಡ ಕೂಡ ಇದನ್ನು ಫಾಲೋ ಮಾಡುತ್ತಿದೆ. ‘ಪುಷ್ಪ’ ಚಿತ್ರದ ಮೂರನೇ ಭಾಗದಲ್ಲಿ ಪುಷ್ಪರಾಜ್​ನ ಘರ್ಜನೆ ಕೇಳಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಯಾಗಿದ್ದಾರೆ. ಆದರೆ, ಈ ಚಿತ್ರ ಸದ್ಯಕ್ಕಂತೂ ಸೆಟ್ಟೇರುವುದಿಲ್ಲ.

‘ಪುಷ್ಪ 2’ ಶೂಟಿಂಗ್ ಭರದಿಂದ ಸಾಗುತ್ತಿದೆ. ಆಗಸ್ಟ್ 15ರಂದು ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ಈ ಬಗ್ಗೆ ಅಧಿಕೃತ ಘೋಷಣೆ ಕೂಡ ಆಗಿದೆ. ಹೀಗಾಗಿ ವೇಗವಾಗಿ ಶೂಟಿಂಗ್ ಪೂರ್ಣಗೊಳಿಸಲು ತಂಡ ಪ್ಲ್ಯಾನ್ ಮಾಡಿದೆ. ಸಿನಿಮಾದ ಕಥೆ ವಿದೇಶದಲ್ಲೂ ಸಾಗಲಿದ್ದು, ಚಿತ್ರದ ಶೂಟಿಂಗ್​ಗೆ ತಂಡ ಜಪಾನ್​ಗೆ ತೆರಳಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಹೇಗಿದೆ ನೋಡಿ ಅಲ್ಲು ಅರ್ಜುನ್ ಒಡೆತನದ ಏಳು ಕೋಟಿ ರೂಪಾಯಿ ವ್ಯಾನಿಟಿ ವ್ಯಾನ್; ವಿಶೇಷತೆಗಳೇನು?

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಜೊತೆ ಇನ್ನೂ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅವರು ‘ಪುಷ್ಪ’ ಸರಣಿಗಾಗಿ ಹಲವು ವರ್ಷ ಮುಡಿಪಿಟ್ಟಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿ ನಟಿಸುವ ಅನಿವಾರ್ಯತೆ ಅವರಿಗೆ ಇದೆ. ಈ ಕಾರಣದಿಂದ ಸದ್ಯಕ್ಕಂತೂ ಅವರು ‘ಪುಷ್ಪ 3’ ಬಗ್ಗೆ ಆಲೋಚಿಸುವುದಿಲ್ಲ. ನಿರ್ದೇಶಕ ಸುಕುಮಾರ್ ಅವರಿಗೂ ಬೇರೆ ಕಮಿಟ್​ಮೆಂಟ್​ಗಳು ಇವೆ. ಈ ಎಲ್ಲಾ ಕಾರಣದಿಂದ ‘ಪುಷ್ಪ 3’ ಸೆಟ್ಟೇರಲು ಹೆಚ್ಚು ಸಮಯ ಹಿಡಿಯಲಿದೆ.  ‘ಪುಷ್ಪ 2’ ಕ್ಲೈಮ್ಯಾಕ್ಸ್ ನೋಡಿದ ಬಳಿಕವೇ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:53 am, Wed, 7 February 24