‘ಪುಷ್ಪ 2’ ಸಂತ್ರಸ್ತನ ಭೇಟಿ ಮಾಡಿದ ಅಲ್ಲು ಕುಟುಂಬ; ಹಲವು ಭರವಸೆ

ಪುಷ್ಪ 2 ಪ್ರೀಮಿಯರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಿಂದ ಗಾಯಗೊಂಡ ಶ್ರೀತೇಜ್‌ನ ಮನೆಗೆ ಅಲ್ಲು ಅರ್ಜುನ್ ಕುಟುಂಬ ಭೇಟಿ ನೀಡಿದೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ತಂದೆ ಅಲ್ಲು ಅರವಿಂದ್ ಬಾಲಕನ ಆರೋಗ್ಯ ವಿಚಾರಿಸಿ, ಚಿಕಿತ್ಸೆ, ಶಿಕ್ಷಣಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ. ಶ್ರೀತೇಜ್‌ಗೆ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದ್ದು, ತಿಂಗಳಿಗೆ ₹1.5 ಲಕ್ಷ ಬಡ್ಡಿ ಸಿಗಲಿದೆ. ಅಲ್ಲು ಅರವಿಂದ್ ಶ್ರೀತೇಜ್‌ನ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತಿದ್ದಾರೆ.

‘ಪುಷ್ಪ 2’ ಸಂತ್ರಸ್ತನ ಭೇಟಿ ಮಾಡಿದ ಅಲ್ಲು ಕುಟುಂಬ; ಹಲವು ಭರವಸೆ
ಸ್ನೇಹಾ-ಅಲ್ಲು ಅರವಿಂದ್

Updated on: May 07, 2026 | 3:15 PM

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಪ್ರೀಮಿಯರ್ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಸಾಕಷ್ಟು ನೋವು ಅನುಭವಿಸಿದರು. ವೈಯಕ್ತಿಕವಾಗಿಯೂ ಈ ಘಟನೆ ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತು. ದುರ್ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕ ಶ್ರೀತೇಜ್ ಮನೆಗೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಹಾಗೂ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಚಿಕಿತ್ಸೆ ಮತ್ತು ಮುಂದಿನ ಭವಿಷ್ಯಕ್ಕೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.

2024ರ ಡಿಸೆಂಬರ್ 4ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಅಲ್ಲಿ ಕೇವಲ ಸಿನಿಮಾ ಮಾತ್ರ ಪ್ರದರ್ಶನ ಕಾಣುತ್ತಾ ಇರಲಿಲ್ಲ, ಅಲ್ಲಿ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ನೆರೆದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ ಶ್ರೀತೇಜ್ ತೀವ್ರವಾಗಿ ಗಾಯಗೊಂಡಿದ್ದನು. ಆತನ ತಾಯಿ ಮೃತಪಟ್ಟಿದ್ದರು. ಮೆದುಳಿಗೆ ಪೆಟ್ಟು ಬಿದ್ದಿದ್ದರಿಂದ ಶ್ರೀತೇಜ್ ಹಲವು ತಿಂಗಳುಗಳ ಕಾಲ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಪಡೆದಿದ್ದನು. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದರೂ, ಸಂಪೂರ್ಣ ಗುಣಮುಖನಾಗಲು ಇನ್ನೂ ಕಾಲಾವಕಾಶ ಬೇಕಿದೆ.

ಅಲ್ಲು ಕುಟುಂಬದ ಭರವಸೆ:

ಶ್ರೀತೇಜ್ ಮನೆಗೆ ಭೇಟಿ ನೀಡಿದ ಸ್ನೇಹಾ ರೆಡ್ಡಿ ಮತ್ತು ಅಲ್ಲು ಅರವಿಂದ್, ಬಾಲಕನ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ಶ್ರೀತೇಜ್‌ನ ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಅಲ್ಲು ಅರವಿಂದ್ ವಹಿಸಿಕೊಂಡಿದ್ದಾರೆ. ‘ಚೆನ್ನಾಗಿ ಓದು ಮಗಳೇ, ನಿನ್ನ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

ಘಟನೆ ನಡೆದ ದಿನದಿಂದಲೂ ಅಲ್ಲು ಅರ್ಜುನ್ ಕುಟುಂಬ ಮತ್ತು ‘ಪುಷ್ಪ’ ಚಿತ್ರದ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಶ್ರೀತೇಜ್‌ನ ವೈದ್ಯಕೀಯ ವೆಚ್ಚವನ್ನು ಭರಿಸುತ್ತಿದೆ. ಏಪ್ರಿಲ್ 2025ರಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರವೂ ಆತನಿಗೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಗನ ಚೇತರಿಕೆ ನಿಧಾನವಾಗಿದ್ದರೂ, ಸತತ ಚಿಕಿತ್ಸೆಯಿಂದಾಗಿ ಸುಧಾರಣೆ ಕಾಣುತ್ತಿದೆ ಎಂಬುದು ಬಾಲಕನ ತಂದೆ ಭಾಸ್ಕರ್ ಅಭಿಪ್ರಾಯ.

ಇದನ್ನೂ ಓದಿ: 200 ದಿನ: ಚಿತ್ರಮಂದಿರಗಳ ಉಳಿಸಲು ಅಲ್ಲು ಅರ್ಜುನ್ ದಿಟ್ಟ ನಿರ್ಧಾರ

ಶ್ರೀತೇಜ್ ಭವಿಷ್ಯದ ದೃಷ್ಟಿಯಿಂದ ಆತನ ಹೆಸರಿನಲ್ಲಿ 2 ಕೋಟಿ ರೂಪಾಯಿ ಠೇವಣಿ ಇಡಲಾಗಿದೆ. ಇದರಿಂದ ಪ್ರತಿ ತಿಂಗಳು ಆತನಿಗೆ ಸುಮಾರು 1.5 ಲಕ್ಷ ರೂಪಾಯಿ ಬಡ್ಡಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us