
ಭಾರತೀಯ ಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಗೆ ನೀಡಲಾಗುವ ಶ್ರೇಷ್ಠ ಪ್ರಶಸ್ತಿ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಗೆ ಭಾಜನರಾದ ಎರಡನೇ ಕನ್ನಡದ ನಟ ಮತ್ತು ಮೂರನೇ ಕನ್ನಡಿಗ ಎನಿಸಿಕೊಂಡಿದ್ದಾರೆ ಅನಂತ್ ನಾಗ್. ಆದರೆ ಪ್ರಶಸ್ತಿ ಘೋಷಣೆಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅನಂತ್ ನಾಗ್, ತಾವು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಸಹ ಹೇಳಿಬಿಟ್ಟಿದ್ದಾರೆ. ಇದು ಅನಂತ್ ಅವರ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳಿಗೆ ಬೇಸರ ಮೂಡಿಸಿದೆ. ಅದಕ್ಕಿಂತಲೂ ಬೇಸರ ಮೂಡಿಸುವ ವಿಷಯವೆಂದರೆ ಅನಂತ್ ನಾಗ್ ಅವರಿಗೆ ಒಂದು ಸಿನಿಮಾನಲ್ಲಿ ನಟಿಸಬೇಕೆಂಬ ಆಸೆ ಬಹಳ ಇತ್ತಂತೆ ಆ ಬಗ್ಗೆ ವಿಷ್ಣುವರ್ಧನ್ ಹಾಗೂ ಶಂಕರ್ ನಾಗ್ ಅವರ ಬಳಿ ಮಾತನಾಡಿದ್ದರಂತೆ ಆದರೆ ಅದು ಸಾಧ್ಯವಾಗಲಿಲ್ಲ. ಅದುವೇ ಬಸವಣ್ಣನವರ ಕುರಿತಾದ ಸಿನಿಮಾ.
ಅನಂತ್ ನಾಗ್ ಅವರಿಗೆ ಬಸವಣ್ಣ ಹಾಗೂ ಬಿಜ್ಜಳನ ಕುರಿತು ಸಿನಿಮಾ ಮಾಡಬೇಕು ತಾವು ಆ ಸಿನಿಮಾನಲ್ಲಿ ನಟಿಸಬೇಕು ಎಂಬ ಆಸೆ ಇತ್ತಂತೆ. ಈ ಬಗ್ಗೆ ಡೆಕನ್ ಹೆರಾಲ್ಡ್ ಜೊತೆಗಿನ ಸಂದರ್ಶನದಲ್ಲಿ ಹಿಂದೊಮ್ಮೆ ಅನಂತ್ ನಾಗ್ ಹೇಳಿಕೊಂಡಿದ್ದರು. ‘ನಾನು ಸಾಕಷ್ಟು ಚಲನಚಿತ್ರಗಳನ್ನು ನೋಡುತ್ತಿದ್ದೆ. ವಿಶೇಷವಾಗಿ ಇಂಗ್ಲಿಷ್ ಚಲನಚಿತ್ರಗಳನ್ನು ನೋಡುತ್ತಿದ್ದೆ. ಸ್ಯಾಮ್ಯುಯೆಲ್ ಬೆಕೆಟ್ ಅವರ ನಾಟಕವೊಂದರ ಆಧಾರಿತ ಚಿತ್ರವನ್ನು ನಾನು ನೋಡಿದ್ದೆ. ಅದು ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಇಂಗ್ಲೆಂಡ್ನಲ್ಲಿ ಏನು ಸಂಭವಿಸಿತು ಹಾಗೂ ಚರ್ಚ್ ಹಾಗೂ ಸರ್ಕಾರದ, ಧರ್ಮ ಮತ್ತು ರಾಜಕಾರಣದ ನಡುವಿನ ಸಂಬಂಧದ ಬಗೆಗಿನ ಸಿನಿಮಾ ಅದಾಗಿತ್ತು. ನನ್ನ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದ ಚಿತ್ರ ಅದು. ನಾನು ಬಹುಶಃ 25 ಅಥವಾ 30 ಬಾರಿ ಆ ಚಿತ್ರವನ್ನು ನೋಡಿದ್ದೇನೆ. ಅದು ನನ್ನ ಮೇಲೆ ಅಪಾರ ಪ್ರಭಾವ ಬೀರಿತ್ತು’ ಎಂದಿದ್ದರು.
ಇದನ್ನೂ ಓದಿ:ಸಿನಿಮಾ ವಿಮರ್ಶೆ: ಒಳಿತು-ಕೆಡುಕು ನಡುವಿನ ಸಂಘರ್ಷ ನಿರ್ಧರಿಸುವ ‘ಟಾಸ್’
‘ನಾನು ಡೇವಿಡ್ ಲೀನ್ ಅವರಂತಹ ಇಂಗ್ಲಿಷ್ ಚಲನಚಿತ್ರಗಳಿಂದಲೂ ಬಹಳಷ್ಟು ಪ್ರಭಾವಿತನಾಗಿದ್ದೆ. ‘ಡಾಕ್ಟರ್ ಜಿವಾಗೊ’, ‘ರಿಯನ್ಸ್ ಡಾಟರ್’, ‘ಲಾರೆನ್ಸ್ ಆಫ್ ಅರೇಬಿಯಾ’, ‘ದಿ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯಿ’, ‘ಎ ಪಾಸೇಜ್ ಟು ಇಂಡಿಯಾ’ ಮುಂತಾದ ಚಿತ್ರಗಳು ಒಂದಕ್ಕಿಂತ ಒಂದು ಮೇಲ್ಮಟ್ಟದಲ್ಲಿದ್ದವು. ಅವೆಲ್ಲವೂ ನನ್ನ ಮೇಲೆ ಆಳವಾದ ಪ್ರಭಾವ ಬೀರಿದವು. ನಂತರ ನಾನು ಕರ್ನಾಟಕಕ್ಕೆ ಬಂದಾಗ, ಬಸವ ಮತ್ತು ಬಿಜ್ಜಳರ ಕುರಿತಾದ ನಾಟಕಗಳನ್ನು ಓದಲು ಆರಂಭಿಸಿದೆ. ಗಿರೀಶ್ ಕಾರ್ನಾಡರು ‘ತಲೆದಂಡ’ ಬರೆದಿದ್ದರು, ಲಂಕೇಶ್ ಅವರು ಅವರ ಬಗ್ಗೆ ಬರೆದಿದ್ದರು, ಹಾಗೆಯೇ ಕಂಬಾರರೂ ಸಹ ಆ ಬಗ್ಗೆ ಬರೆದಿದ್ದರು. ಆ ವಿಷಯವೂ ನನ್ನ ಮನಸ್ಸಿನಲ್ಲಿ ಉಳಿಯಿತು’ ಎಂದು ಅನಂತ್ ನಾಗ್ ಹೇಳಿದ್ದಾರೆ.
ಆ ಸಿನಿಮಾಗಳ ಪ್ರಭಾವ ಮತ್ತು ಕನ್ನಡದ ಓದಿನಿಂದಾಗಿ ನನಗೆ ಬಸವ ಮತ್ತು ಬಿಜ್ಜಳರ ಕುರಿತು ನಾವೊಂದು ಸಿನಿಮಾ ಮಾಡೋಣ ಎನಿಸಿತು. ನಾನು ಶಂಕರ್ ನಾಗ್ ಜೊತೆ ಮಾತನಾಡಿ ನೀನು ಸಿನಿಮಾ ನಿರ್ದೇಶನ ಮಾಡು ನಮ್ಮನ್ನು ಪಾತ್ರಧಾರಿಗಳನ್ನಾಗಿ ಹಾಕಿಕೊ ಎಂದಿದ್ದೆ. ಬಳಿಕ ವಿಷ್ಣುವರ್ಧನ್ ಜೊತೆಗೂ ಮಾತನಾಡಿದ್ದೆ, ‘ನೀವು ಬಿಜ್ಜಳ ಪಾತ್ರ ಮಾಡುವುದಾದರೆ ನಾನು ಬಸವಣ್ಣನ ಪಾತ್ರ ಮಾಡುತ್ತೇನೆ, ಅಥವಾ ನೀವು ಬಸವಣ್ಣನ ಪಾತ್ರ ಮಾಡುವುದಾದರೆ ನಾನು ಬಿಜ್ಜಳ ಪಾತ್ರ ಮಾಡುತ್ತೇನೆ’ ಎಂದು ತಿಳಿಸಿದ್ದೆ. ಆದರೆ ಅನಿವಾರ್ಯ ಕಾರಣಗಳಿಂದ ಆ ಸಿನಿಮಾ ಆಗಲಿಲ್ಲ’ ಎಂದಿದ್ದಾರೆ ಅನಂತ್ ನಾಗ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ