ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು

ಕೊವಿಡ್​ನಿಂದಾಗಿ ಕಷ್ಟಪಡುತ್ತಿರುವ ಹಲವು ಪ್ರದೇಶಗಳ ಜನರಿಗೆ ಭೂಮಿ ಪಡ್ನೇಕರ್​ ಸಹಾಯ ಮಾಡಿದ್ದಾರೆ. ಈಗ ಅವರು ಕಪಿಲ್​ ಶರ್ಮಾ ಜೊತೆಗೂಡಿ ಕರ್ನಾಟಕದ ಜನರ ಸಹಾಯಕ್ಕೆ ಧಾವಿಸಿದ್ದಾರೆ.

ಸೋನು ಸೂದ್​ ಮಾತ್ರವಲ್ಲ, ಕರುನಾಡಿಗೆ ಕೊವಿಡ್ ಕಷ್ಟದಲ್ಲಿ ನೆರವಾದ ಇನ್ನಿಬ್ಬರು ಬಾಲಿವುಡ್​ ಸ್ಟಾರ್​ಗಳು
ಭೂಮಿ ಪೆಡ್ನೇಕರ್​- ಕಪಿಲ್​ ಶರ್ಮಾ

Updated on: May 28, 2021 | 9:00 AM

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ತೀವ್ರ ಹೊಡೆತ ತಿಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಕೂಡ ಮುಂಚೂಣಿಯಲ್ಲಿದೆ. ಬೆಡ್​ ಮತ್ತು ಆಕ್ಸಿಜನ್​ ಸಿಲಿಂಡರ್​ಗಳ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಅನೇಕರು ಅಸುನೀಗಿದ್ದಾರೆ. ಇಂಥ ಗಂಭೀರ ಪರಿಸ್ಥಿತಿಯಲ್ಲಿ ಅನೇಕ ಸ್ಟಾರ್​ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ನಟ ಸೋನು ಸೂದ್​ ಹಲವು ಬಗೆಯಲ್ಲಿ ಕರ್ನಾಟಕಕ್ಕೆ ನೆರವಾಗುತ್ತಿದ್ದಾರೆ. ಸೋನು ಮಾತ್ರವಲ್ಲದೆ ಇನ್ನೂ ಕೆಲವು ಬಾಲಿವುಡ್​ ಸ್ಟಾರ್​ಗಳು ನೆರವು ನೀಡುತ್ತಿದ್ದಾರೆ. ಹಾಸ್ಯ ಕಲಾವಿದ, ಟಿವಿ ಕಾರ್ಯಕ್ರಮಗಳ ನಿರೂಪಕ ಕಪಿಲ್​ ಶರ್ಮಾ ಹಾಗೂ ನಟಿ ಭೂಮಿ ಪೆಡ್ನೇಕರ್​ ಕೂಡ ಕರುನಾಡಿಗೆ ನೆರವು ನೀಡುತ್ತಿದ್ದಾರೆ.

ಕೊವಿಡ್​ನಿಂದಾಗಿ ಕಷ್ಟಪಡುತ್ತಿರುವ ಹಲವು ಪ್ರದೇಶಗಳ ಜನರಿಗೆ ಭೂಮಿ ಪೆಡ್ನೇಕರ್​ ಸಹಾಯ ಮಾಡಿದ್ದಾರೆ. ಈಗ ಅವರು ಕಪಿಲ್​ ಶರ್ಮಾ ಜೊತೆಗೂಡಿ ಕರ್ನಾಟಕದ ಜನರ ಸಹಾಯಕ್ಕೆ ಧಾವಿಸಿದ್ದಾರೆ. ಇಬ್ಬರೂ ಜೊತೆಯಾಗಿ ಕರುನಾಡಿನ ಹಲವು ಆಸ್ಪತ್ರೆಗಳಿಗೆ ಆಕ್ಸಿಜನ್​ ಬಸ್​ಗಳನ್ನು ಬದಗಿಸುತ್ತಿದ್ದಾರೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ ಮುಂತಾದ ಕಡೆಗಳಲ್ಲಿ ಆಸ್ಪತ್ರೆಗಳ ಎದುರು ಆಕ್ಸಿಜನ್​ ಬಸ್​ಗಳು ಸದಾ ಸಿದ್ಧವಾಗಿರುವಂತೆ ನೋಡಿಕೊಳ್ಳಲು ಭೂಮಿ ಪೆಡ್ನೇಕರ್​ ಮತ್ತು ಕಪಿಲ್​ ಶರ್ಮಾ ವ್ಯವಸ್ಥೆ ಮಾಡುತ್ತಿದ್ದಾರೆ.

‘ಕೊವಿಡ್​ ಎರಡನೇ ಅಲೆ ಈಗ ಗ್ರಾಮೀಣ ಭಾಗಗಳಿಗೆ ಹಬ್ಬಿದೆ. ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜನ್​ ಸೇರಿದಂತೆ ಕೆಲವು ಅಗತ್ಯ ಸೌಲಭ್ಯಗಳ ಕೊರತೆ ಇದೆ. ಹಾಗಾಗಿ ಅಂಥ ಕಡೆಗಳಿಗೆ ನಾವು ಆಕ್ಸಿಜನ್​ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕದ ಗ್ರಾಮೀಣ ಪ್ರದೇಶ ಮತ್ತು ಜಿಲ್ಲಾ ಕೇಂದ್ರಗಳ ಕಡೆಗೆ ನಾವು ಗಮನ ಹರಿಸುತ್ತಿದ್ದೇವೆ’ ಎಂದು ಭೂಮಿ ಪೆಡ್ನೇಕರ್​ ಹೇಳಿದ್ದಾರೆ.

‘ಬೆಡ್​ ಸಿಗುವುದಕ್ಕೂ ಮುನ್ನ ಆಸ್ಪತ್ರೆಯ ಎದುರು ಕಾಯುತ್ತಿರುವ ಸೋಂಕಿತರಿಗೆ ನಮ್ಮ ಬಸ್​ಗಳಿಂದ ಸಹಾಯ ಆಗುತ್ತದೆ. ಅದರಲ್ಲಿ ಆಕ್ಸಿಜನ್​ ಕಾನ್ಸಂಟ್ರೇಟರ್​ಗಳನ್ನು ಅಳವಡಿಸಿರುತ್ತೇವೆ. ಈ ಕಾರ್ಯದಲ್ಲಿ ಕಪಿಲ್ ಶರ್ಮಾ ಕೈ ಜೋಡಿಸಿರುವುದು ಸಂತಸದ ವಿಚಾರ’ ಎಂದಿದ್ದಾರೆ ಭೂಮಿ. ಇತ್ತೀಚೆಗೆ ನಟ ಸೋನು ಸೂದ್​ ಅವರು ಬೆಂಗಳೂರಿನ 5 ಸಾವಿರ ಜನರಿಗೆ ಪ್ರತಿ ದಿನ ಊಟ ಒದಗಿಸುವ ಕಾರ್ಯ ಆರಂಭಿಸಿದರು. ಸೂದ್​ ಚಾರಿಟಿ ಫೌಂಡೇಷನ್​ ಕಡೆಯಿಂದ ಈ ಕಾರ್ಯ ನಡೆಯುತ್ತಿದೆ.

ಇದಕ್ಕೆ ‘ಫುಡ್​ ಫ್ರಮ್​ ಸೂದ್​’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಹಾಗೂ ಕರ್ನಾಟಕ ರಾಜ್ಯ, ರೈಲ್ವೇ ಪೊಲೀಸರು ಸಾಥ್ ನೀಡಿದ್ದಾರೆ. ಸೂದ್​ ಚಾರಿಟಿ ಫೌಂಡೇಷನ್ ಸ್ವಯಂ ಸೇವಕರ ಈ ಕೆಲಸಕ್ಕೆ ಬೀಜಿಂಗ್​ ಬೈಟ್ಸ್​ ರೆಸ್ಟೊರೆಂಟ್​ ಮಾಲೀಕ ಇಬ್ರಾಹಿಂ ಕೈ ಜೋಡಿಸಿದ್ದಾರೆ. ಪ್ರತಿ ದಿನ 5 ಸಾವಿರ ಜನರಿಗೆ ಉಡುಗೆ ಮಾಡಲು ಇಬ್ರಾಹಿಂ ಅವರು ಉಚಿತವಾಗಿ ತಮ್ಮ ರೆಸ್ಟೊರೆಂಟ್​ ಬಿಟ್ಟುಕೊಟ್ಟಿದ್ದಾರೆ.

ಇದನ್ನೂ ಓದಿ:

Sonu Sood: ಸೋನು ಸೂದ್​ ಕಾಲಿಗೆ ಬೀಳಲು ಮುಂದಾದ ಜನ; ಕೈ ಮುಗಿದು ದೊಡ್ಡವರಾದ ರಿಯಲ್​ ಹೀರೋ

Sonu Sood: ಸೋನು ಸೂದ್​ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us