‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಸುರೇಶ್​ ಹೈಲೈಟ್​ ಆಗುತ್ತಿದ್ದಾರೆ. ಅವರ ಬಗ್ಗೆ ಹಲವು ವಿಚಾರಗಳು ದೊಡ್ಮನೆಯಲ್ಲಿ ಗುಸುಗುಸು ಚರ್ಚೆಗೆ ಕಾರಣ ಆಗುತ್ತಿವೆ.

‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?
ದಿವ್ಯಾ ಸುರೇಶ್

Updated on: Mar 30, 2021 | 10:37 AM

ಬಿಗ್​ ಬಾಸ್​ನಲ್ಲಿ 4ನೇ ವಾರದ ಎಲಿಮಿನೇಷನ್​ ಕಳೆದ ಬಳಿಕ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಬೇರೆ ಸ್ಪರ್ಧಿಗಳ ಬಲಾಬಲದ ಬಗ್ಗೆಯೂ ಚರ್ಚೆಗಳು ನಡೆದಿವೆ. ಎಲ್ಲಿ, ಏನು ತಪ್ಪಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಇತ್ತೀಚೆಗೆ ಪ್ರಶಾಂತ್​ ಸಂಬರಗಿ ಮತ್ತು ಶಮಂತ್​ ಬ್ರೋ ಗೌಡ ನಡುವೆ ಒಂದಷ್ಟು ಮಾತುಕತೆ ನಡೆಯಿತು. ಆಗ ಅವರು ದಿವ್ಯಾ ಸುರೇಶ್​ ಬಗ್ಗೆ ಗುಸಗುಗುಸು ಮಾತನಾಡಿಕೊಂಡಿದ್ದಾರೆ.

ಎಷ್ಟೇ ಪ್ರಯತ್ನ ಮಾಡಿದರೂ ಶಮಂತ್​ಗೆ ದಿವ್ಯಾ ಜೊತೆ ಕನೆಕ್ಟ್​ ಆಗಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದಕ್ಕೆ ಅವರು ಪ್ರಶಾಂತ್​ ಸಂಬರಗಿ ಹತ್ತಿರ ಹೋಗಿ ಸಲಹೆ ಕೇಳಿದ್ದಾರೆ. ಆಗ ಪ್ರಶಾಂತ್​ ಕೆಲವೊಂದು ಉಪಾಯಗಳನ್ನು ಹೇಳಿಕೊಟ್ಟಿದ್ದಾರೆ. ಇದೇ ಮಾತುಕತೆಯ ನಡುವೆ ‘ಗಂಡಸರನ್ನು ಕಂಡರೆ ದಿವ್ಯಾ ವಾಕರಿಕೆ ಮಾಡುತ್ತಾಳೆ’ ಎಂದು ಪ್ರಶಾಂತ್​ ಗುಟ್ಟಾಗಿ ಹೇಳಿದ್ದಾರೆ.

‘ನಿನಗೆ ಒಂದು ಸ್ಟ್ರಾಟಜಿ ಹೇಳಿಕೊಡುತ್ತೇನೆ. ನೀನು ಅವಳಿಗೆ ಕಾಳು ಹಾಕುತ್ತಿದ್ದೀಯ ಎಂಬುದನ್ನು ಮೊದಲು ತಲೆಯಿಂದ ತೆಗೆದುಬಿಡು. ಎರಡು-ಮೂರು ಸಲ ಹೋಗಿ ಸುಮ್ಮನೆ ಅವರ ಸಲಹೆ ಕೇಳು. ನೀನು ಅವಳಿಗೆ ಕಾಂಪಿಟೀಷನ್​ ಕೊಡುತ್ತಿದ್ದೀಯ ಅಂತಾನೇ ಅವಳು ನಿನ್ನ ಮೇಲೆ ರೇಗಾಡೋದು. ಅವಳು ತುಂಬ ಸಫರ್​ ಆಗಿ ಬಿಟ್ಟಿದ್ದಾಳೆ. ಗಂಡಸರನ್ನು ಕಂಡರೆ ವಾಕರಿಕೆ ಮಾಡುತ್ತಾಳೆ. ಅದು ಯಾವುದೇ ಗಂಡಸು ಆಗಿರಲಿ. ಅದನ್ನು ನೀನು ಅರ್ಥಮಾಡಿಕೋ. ಸ್ವಲ್ಪ ಗಟ್ಟಿಯಾಗಿ ಮಾತನಾಡು. ಸಾಫ್ಟ್​ ಆಗಿ ಮಾತನಾಡಬೇಡ’ ಎಂದು ಶಮಂತ್​ಗೆ ಪ್ರಶಾಂತ್ ಕಿವಿಮಾತು ಹೇಳಿದ್ದಾರೆ.

ಬಿಗ್ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ದಿವ್ಯಾ ಸುರೇಶ್​ ಅವರು ಮಂಜು ಪಾವಗಡ ಜೊತೆ ಹೆಚ್ಚು ಬೆರೆತಿದ್ದಾರೆಯೇ ಹೊರತು ಬೇರೆ ಗಂಡಸರ ಜೊತೆ ಅವರು ಮಾತನಾಡುವುದು ಕಡಿಮೆ. ಅದೇ ಕಾರಣಕ್ಕಾಗಿ ಪ್ರಶಾಂತ್​ ಸಂಬರಗಿ ಈ ರೀತಿ ಹೇಳಿದ್ದಾರೆ. ದಿವ್ಯಾ ಬದುಕಿನಲ್ಲಿ ನಡೆದ ಕೆಲವು ಘಟನೆಗಳು ಇದಕ್ಕೆ ಕಾರಣ ಇರಬಹುದು ಎಂಬುದು ಪ್ರಶಾಂತ್​ ಅಭಿಪ್ರಾಯ. ಇನ್ನು, ಮಂಜು-ದಿವ್ಯಾ ನಡುವಿನ ಆಪ್ತತೆ ಆಗಾಗ ಸದ್ದು ಮಾಡುತ್ತಿದೆ. ವಾರದ ಪಂಚಾಯಿತಿಯಲ್ಲಿ ಸುದೀಪ್​ ಕೂಡ ಇದೇ ವಿಚಾರ ಇಟ್ಟುಕೊಂಡು ಇಬ್ಬರ ಕಾಲು ಎಳೆಯುತ್ತಿರುತ್ತಾರೆ.

ಬಿಗ್​ ಬಾಸ್ ಮನೆಯ ಆಟ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಕ್ಯಾಪ್ಟನ್​ ಆಗಿ ವಿಶ್ವನಾಥ್​ ಆಯ್ಕೆ ಆಗಿದ್ದಾರೆ. ನಿಧಿ ಸುಬ್ಬಯ್ಯ, ಅರವಿಂದ್​, ಶುಭಾ ಪೂಂಜಾ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ಈ ವಾರ ನಾಮಿನೇಟ್​ ಆಗಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ವಿಶ್ವನಾಥ್​ ಸೇವ್​​ ಮಾಡಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us