BBK8: ಬಿಗ್​ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!

Bigg Boss Kannada 8: ಟಾಸ್ಕ್​ ಇಲ್ಲದ ಸಂದರ್ಭದಲ್ಲಿ ಬಿಗ್​ ಬಾಸ್​ ಸ್ಪರ್ಧಿಗಳು ಹಲವು ವಿಚಾರಗಳ ಬಗ್ಗೆ ಹರಟೆ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಬಿಗ್​ ಬಾಸ್​ ಬಗ್ಗೆ ತಮಗೆ ಇದ್ದ ಕೆಲವು ಕಲ್ಪನೆಗಳ ಬಗ್ಗೆ ರಘು ಗೌಡ ಮಾತನಾಡಿದ್ದಾರೆ.

BBK8: ಬಿಗ್​ ಬಾಸ್ ಮನೆಯಲ್ಲಿ ರಹಸ್ಯವಾಗಿ ಸಿಗುವ ಸೌಲಭ್ಯಗಳೇನು? ಮಾತಿನ ಮಧ್ಯೆ ಸತ್ಯ ಬಾಯಿಬಿಟ್ಟ ರಘು!
ರಘು ಗೌಡ - ಬಿಗ್​ ಬಾಸ್​ ಕನ್ನಡ ಸೀಸನ್​ 8

Updated on: Mar 25, 2021 | 12:11 PM

ಬಿಗ್​ ಬಾಸ್​ ಕಾರ್ಯಕ್ರಮದ ಬಗ್ಗೆ ಜನರಿಗೆ ಅನೇಕ ಅನುಮಾನಗಳಿವೆ. ಈ ರಿಯಾಲಿಟಿ ಶೋ ನಿಜವೋ ಅಥವಾ ಸುಳ್ಳೋ ಎಂದು ಇಂದಿಗೂ ಹಲವರು ಪ್ರಶ್ನೆ ಮಾಡುತ್ತಲೇ ಇದ್ದಾರೆ. 7 ಸೀಸನ್​ ಕಳೆದು 8ನೇ ಸೀಸನ್​ಗೆ ಕಾಲಿಟ್ಟರೂ ಅನೇಕರಿಗೆ ಈ ಅನುಮಾನ ಬಗೆಹರಿದಿಲ್ಲ. ಈ ಬಾರಿ ಬಿಗ್​ ಬಾಸ್​ಗೆ ಕಾಲಿಟ್ಟಿರುವ ರಘು ಗೌಡ ಅವರಿಗೂ ಈ ಕುರಿತಾಗಿ ಕೆಲವು ಕಲ್ಪನೆಗಳು ಇದ್ದವಂತೆ. ಇತರೆ ಸ್ಪರ್ಧಿಗಳ ಜೊತೆ ಮಾತನಾಡುತ್ತಿರುವಾಗ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.

ನಿಜಕ್ಕೂ ಬಿಗ್​ ಬಾಸ್​ ಸ್ಪರ್ಧಿಗಳು ಅಷ್ಟೆಲ್ಲ ಕಟ್ಟುನಿಟ್ಟಿನ ವಾತಾವರಣದಲ್ಲಿ ಇರುತ್ತಾರಾ? ರಹಸ್ಯವಾಗಿ ಅವರಿಗೆ ಮೊಬೈಲ್​ ಬಳಸಲು ಕೊಡುತ್ತಾರಾ? ಆಗಾಗ ಕುಟುಂಬದವರು ಬಂದು ಭೇಟಿ ಮಾಡುತ್ತಾರಾ? ಇಂತ ಹತ್ತಾರು ಪ್ರಶ್ನೆಗಳು ವೀಕ್ಷಕರ ಮನದಲ್ಲಿ ಕೊರೆಯುತ್ತಿರಬಹುದು. ನಿಜಕ್ಕೂ ಈ ರೀತಿಯ ಸೌಲಭ್ಯಗಳು ದೊಡ್ಮನೆ ಸದಸ್ಯರಿಗೆ ಸಿಗುತ್ತೋ ಇಲ್ಲವೋ ಎಂಬ ಬಗ್ಗೆ ರಘು ಬಾಯಿ ಬಿಟ್ಟಿದ್ದಾರೆ. ಅವರ ಮಾತಿಗೆ ಪ್ರಶಾಂತ್​ ಸಂಬರಗಿ, ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ. ಧ್ವನಿಗೂಡಿಸಿದ್ದಾರೆ.

‘ನಾವು ಆಡಿಯನ್ಸ್​ ಆಗಿದ್ದಾಗ ಎಷ್ಟೆಲ್ಲ ತಲೆ ಉಪಯೋಗಿಸುತ್ತಿದ್ವಿ ಅಲ್ವಾ? ಮೊಬೈಲ್​ ಕೊಡುತ್ತಾರೆ, ಸೀಕ್ರೆಟ್​ ರೂಮ್​ನಲ್ಲಿ ಫ್ಯಾಮಿಲಿಯವರು ಬಂದು ಮೀಟ್​ ಆಗ್ತಾರಾ ಎಂಥೆಲ್ಲ ಅಂದುಕೊಂಡಿದ್ವಿ’ ಎಂದು ರಘು ಹೇಳಿದ್ದಾರೆ. ‘ಆದರೆ ನನಗೆ ಆ ರೀತಿ ಯೋಚನೆಯೇ ಇರಲಿಲ್ಲ’ ಎಂದು ಅರವಿಂದ್​ ಪ್ರತಿಕ್ರಿಯಿಸಿದ್ದಾರೆ.

ಪ್ರಶಾಂತ್​ ಸಂಬರಗಿ ಕೂಡ ಆ ರೀತಿಯ ಆಲೋಚನೆಗಳನ್ನು ತಾವು ಇಟ್ಟುಕೊಂಡಿರಲಿಲ್ಲ ಎಂದು ಹೇಳಿದ್ದಾರೆ. ‘ಬಿಗ್​ ಬಾಸ್​ ಮನೆಯೊಳಗೆ ಹಾಗೆಲ್ಲ ಸೌಲಭ್ಯ ಇದೆಯಾ ಎಂದು ಯಾರಾದರೂ ಅನುಮಾನದಿಂದ ಕೇಳಿದರೆ ನಾನು ಕಾನ್ಫಿಡೆಂಟ್​ ಆಗಿ ಉತ್ತರ ಕೊಡ್ತೀನಿ. ನಾನೇ ಹೋಗಿ ಬಂದಿದ್ದೇನೆ. ಆ ಥರ ಏನೂ ಇರಲ್ಲ ಎನ್ನುತ್ತೇನೆ. ತುಂಬ ಜನ ಈ ಶೋ ಸ್ಕ್ರಿಪ್ಟೆಡ್​ ಅಂದುಕೊಳ್ಳುತ್ತಾರೆ’ ಎಂದಿದ್ದಾರೆ ದಿವ್ಯಾ ಉರುಡುಗ. ‘ಸ್ಕ್ರಿಪ್ಟ್​ ಮಾಡಿದರೂ ಕೂಡ ಶೋ ಇಷ್ಟು ಚೆನ್ನಾಗಿ ನಡೆಯಲು ಸಾಧ್ಯವೇ ಇಲ್ಲ’ ಎಂಬುದು ರಘು ಗೌಡ ಅಭಿಪ್ರಾಯ.

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಆಟ ಈಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಅರವಿಂದ್​ ಕೆಪಿ ಕ್ಯಾಪ್ಟನ್​ ಆಗಿದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಎಲ್ಲ 13 ಮಂದಿ ನಾಮಿನೇಟ್​ ಆಗಿದ್ದಾರೆ. ಹಾಗಾಗಿ ಯಾರು ಬೇಕಾದರೂ ಈ ವಾರ ಎಲಿಮಿನೇಟ್​ ಆಗಬಹುದು ಎಂಬ ಭೀತಿ ಶುರು ಆಗಿದೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ಗೀತಾ ಭಾರತಿ ಭಟ್​ ಹೊರಬಂದಿರುವುದರಿಂದ ಮನೆಯಲ್ಲಿ ಹೆಣ್ಮಕ್ಕಳ ಸಂಖ್ಯಾ ಬಲ ಕುಸಿಯುತ್ತಿದೆ. 4ನೇ ವಾರವಾದರೂ ಪುರುಷ ಸ್ಪರ್ಧಿ ಎಲಿಮಿನೇಟ್​ ಆಗಬಹುದೇ ಎಂಬ ನಿರೀಕ್ಷೆಯಲ್ಲಿ ವೀಕ್ಷಕರು ವೀಕೆಂಡ್​ಗಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಗೆ ದೆವ್ವದ ಕಾಟ? ರಾಜೀವ್​ ಬಿಚ್ಚಿಟ್ರು ಭಯಾನಕ ಅನುಭವ

ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us