Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?

|

Updated on: Jun 22, 2023 | 8:33 PM

Adipurush Movie: ‘ಆದಿಪುರುಷ್​’ ಸಿನಿಮಾದ ವಿರುದ್ಧ ಜನರ ಅಸಮಾಧಾನ ಹೆಚ್ಚುತ್ತಿದೆ. ಈಗ ಚಿತ್ರದ ನಿರ್ದೇಶಕ ಓಂ ರಾವತ್​ ಅವರಿಗೆ ಪೊಲೀಸ್​ ಭದ್ರತೆ ನೀಡಿರುವ ಬಗ್ಗೆ ಸುದ್ದಿ ಆಗಿದೆ.

Om Raut: ಕೊಲೆ ಬೆದರಿಕೆ ಹಿನ್ನೆಲೆಯಲ್ಲಿ ‘ಆದಿಪುರುಷ್​’ ನಿರ್ದೇಶಕ ಓಂ ರಾವತ್​ಗೆ ಮುಂಬೈ ಪೊಲೀಸರಿಂದ​ ಭದ್ರತೆ?
ಓಂ ರಾವತ್​
Follow us on

‘ಆದಿಪುರುಷ್​’ (Adipurush) ಚಿತ್ರತಂಡದವರು ನಿರೀಕ್ಷಿಸಿದ್ದೇ ಬೇರೆ, ಚಿತ್ರ ಬಿಡುಗಡೆ ಬಳಿಕ ಆಗಿದ್ದೇ ಬೇರೆ. ಈ ಸಿನಿಮಾಗೆ ಜನಮೆಚ್ಚುಗೆ ಸಿಗುತ್ತದೆ ಎಂಬುದು ಚಿತ್ರತಂಡದ ಆತ್ಮವಿಶ್ವಾಸವಾಗಿತ್ತು. ಆದರೆ ಅವರಿಗೆ ಜನರಿಂದ ಸಿಕ್ಕಿದ್ದು ಕೇವಲ ಟ್ರೋಲ್​. ರಾಮಾಯಣವನ್ನು ಆಧರಿಸಿ ಈ ಸಿನಿಮಾಗೆ ಓಂ ರಾವತ್​ (Om Raut) ಅವರು ನಿರ್ದೇಶನ ಮಾಡಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಮಾಯಣದ ಕತೆಯನ್ನು ತಿರುಚಲಾಗಿದೆ ಎಂಬ ಕಾರಣದಿಂದ ಕಟು ಟೀಕೆ ವ್ಯಕ್ತವಾಗಿದೆ. ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವರ್ಗದ ಜನರಿಂದ ಚಿತ್ರತಂಡದವರಿಗೆ ಕೊಲೆ ಬೆದರಿಕೆ (Death Threat) ಕೂಡ ಬಂದಿದೆ. ಆ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ನಿರ್ದೇಶಕ ಓಂ ರಾವತ್​ ಅವರಿಗೆ ಭದ್ರತೆ ಒದಗಿಸಿದ್ದಾರೆ ಎಂದು ‘ಬಾಲಿವುಡ್​ ಹಂಗಾಮಾ’ ವರದಿ ಮಾಡಿದೆ.

ಮನೋಜ್​ ಮುಂತಶೀರ್​ ಅವರು ‘ಆದಿಪುರುಷ್​’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರು ಬರೆದ ಸಂಭಾಷಣೆ ತೀರಾ ಕಳಪೆ ಆಗಿವೆ ಎಂಬುದು ಪ್ರೇಕ್ಷಕರ ಆರೋಪ. ಅಲ್ಲದೇ ಸಿನಿಮಾದಲ್ಲಿನ ಅಸಂಬದ್ಧಗಳನ್ನು ಮನೋಜ್​ ಮುಂತಶೀರ್​ ಸಮರ್ಥಿಸಿಕೊಂಡಿದ್ದಾರೆ ಎಂಬುದು ಹಲವರ ಕೋಪಕ್ಕೆ ಕಾರಣ ಆಗಿದೆ. ಅವರಿಗೆ ಕೆಲವರಿಂದ ಕೊಲೆ ಬೆದರಿಕೆ ಕೂಡ ಬಂತು. ಹಾಗಾಗಿ ಮುಂಬೈ ಪೊಲೀಸರು ಮನೋಜ್​ ಮುಂತಶೀರ್​ಗೆ ಭದ್ರತೆ ಒದಗಿಸಿದರು. ಈಗ ನಿರ್ದೇಶಕ ಓಂ ರಾವತ್​ ಅವರಿಗೂ ಭದ್ರತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Project K: ‘ಆದಿಪುರುಷ್​’ ಟ್ರೋಲ್​ ಮರೆತು ‘ಪ್ರಾಜೆಕ್ಟ್​ ಕೆ’ ಅಪ್​ಡೇಟ್​ ತಿಳಿಯಲು ಕಾದಿರುವ ಪ್ರಭಾಸ್​ ಅಭಿಮಾನಿಗಳು

‘ಮುಂಬೈನಲ್ಲಿ ಇರುವ ಓಂ ರಾವುತ್​ ಅವರ ಕಚೇರಿಯಲ್ಲಿ ಐವರು ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಓಂ ರಾವತ್​ ಅವರು ಭದ್ರತೆಗಾಗಿ ಬೇಡಿಕೆ ಇಟ್ಟಿದ್ದಾರೋ ಅಥವಾ ಕೊಲೆ ಬೆದರಿಕೆ ಬಂದ ಹಿನ್ನೆಲೆಯಲ್ಲೇ ಸ್ವತಃ ಪೊಲೀಸರೇ ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ನೀಡಲು ಮುಂದಾದರೋ ಎಂಬುದು ತಿಳಿದುಬಂದಿಲ್ಲ’ ಎಂದು ಮೂಲಗಳು ತಿಳಿಸಿರುವುದಾಗಿ ‘ಬಾಲಿವುಡ್​ ಹಂಗಾಮಾ’ ವರದಿ ಪ್ರಕಟಿಸಿದೆ. ‘ಆದಿಪುರುಷ್​’ ಚಿತ್ರಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆಗಳು ಕೇಳಿಬರುತ್ತಿವೆ. ಅದರ ಪರಿಣಾಮವಾಗಿ ಸಿನಿಮಾದ ಕಲೆಕ್ಷನ್​ ಗಣನೀಯವಾಗಿ ತಗ್ಗುತ್ತಿದೆ.

ಇದನ್ನೂ ಓದಿ: Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​

ರಾಮಾಯಣ, ಮಹಾಭಾರತದಂತಹ ಕೃತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವಾಗ ಚಿತ್ರತಂಡದವರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ‘ಆದಿಪುರುಷ್​’ ತಂಡದವರು ರಾಮಾಯಣದ ಕಥೆಯನ್ನು ಆಧುನೀಕರಣ ಮಾಡಲು ಪ್ರಯತ್ನಿಸಿರುವುದು ಎಲ್ಲರ ಕೋಪಕ್ಕೆ ಕಾರಣ ಆಗಿದೆ. ಈ ಸಿನಿಮಾದಲ್ಲಿ ರಾವಣನ ಪುಷ್ಪಕ ವಿಮಾನದ ಬದಲಿಗೆ ದೈತ್ಯಾಕಾರದ ಬಾವಲಿಯನ್ನು ತೋರಿಸಲಾಗಿದೆ. ಆಂಜನೇಯನ ಸಂಭಾಷಣೆಗಳು ತೀರಾ ಆಡುಮಾತಿನಲ್ಲಿವೆ. ಸರಮಾ ಪಾತ್ರವನ್ನು ಗ್ಲಾಮರಸ್​ ಆಗಿ ತೋರಿಸಲಾಗಿದೆ. ಇಂಥ ದೃಶ್ಯಗಳಿಗೆ ಜನರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.