
ಸೆಲೆಬ್ರಿಟಿಗಳ ಬಗ್ಗೆ ಹಲವು ಸುದ್ದಿಗಳು ಹರಿದಾಡುತ್ತವೆ. ಕೆಲವು ಸುದ್ದಿಗಳು ನಿಜ ಎಂದೇ ಭಾಸವಾಗುತ್ತವೆ. ಈಗ ಅಮಿತಾಭ್ ಬಚ್ಚನ್ ವಿಚಾರದಲ್ಲಿ ಹಾಗೆಯೇ ಆಗಿದೆ. ಅವರು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ 2024 (ಐಎಸ್ಪಿಎಲ್) ಫೈನಲ್ ಮ್ಯಾಚ್ ನೋಡಲು ಮುಂಬೈಗೆ ಬಂದಿದ್ದರು. ಈ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ ಅಮಿತಾಭ್ ಬಚ್ಚನ್ (Amitabh Bachchan) ಆರೋಗ್ಯದ ಬಗ್ಗೆ ಹುಟ್ಟಿಕೊಂಡಿದ್ದ ಸುದ್ದಿ ಸುಳ್ಳೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ಅಮಿತಾಭ್ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ಅಮಿತಾಭ್ ಬಚ್ಚನ್ ಅವರು ಶುಕ್ರವಾರ (ಮಾರ್ಚ್ 15) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾದರು ಎನ್ನುವ ಸುದ್ದಿ ಹರಿದಾಡಿತ್ತು. ಇಷ್ಟೇ ಅಲ್ಲ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದು ವರದಿ ಆಗಿತ್ತು. ಎಲ್ಲರೂ ಬಿಗ್ ಬಿಗೆ ಹೃದಯದ ಸಮಸ್ಯೆ ಉಂಟಾಗಿದೆ ಎಂದು ಭಾವಿಸಿದ್ದರು. ಆದರೆ, ನಂತರ ಅವರ ಕಾಲಿನ ರಕ್ತನಾಳದಲ್ಲಿ ಸಮಸ್ಯೆ ಆಗಿತ್ತು ಎಂದು ವರದಿ ಆಯಿತು. ಅಸಲಿಗೆ ಇದೆಲ್ಲವೂ ಫೇಕ್ ಸುದ್ದಿ! ಅಸಲಿಗೆ ಅಮಿತಾಭ್ಗೆ ಏನು ಆಗೇ ಇರಲಿಲ್ಲ.
ಅಮಿತಾಭ್ ಅವರು ಐಎಸ್ಪಿಎಲ್ನ ಫಿನಾಲೆ ಮ್ಯಾಚ್ನಲ್ಲಿ ಭಾಗಿ ಆಗಿದ್ದಾರೆ. ‘ಮಜಿ ಮುಂಬೈ’ ಹಾಗೂ ‘ಟೈಗರ್ಸ್ ಆಫ್ ಕೋಲ್ಕತ್ತಾ’ ಮಧ್ಯೆ ಫಿನಾಲೆ ನಡೆದಿದೆ. ಅವರು ಮ್ಯಾಚ್ನ ಎಂಜಾಯ್ ಮಾಡಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ಸೇರಿ ಅವರು ಮುಂಬೈ ತಂಡವನ್ನು ಬೆಂಬಲಿಸಿದ್ದಾರೆ. ಇವರ ಜೊತೆ ಸಚಿನ್ ತೆಂಡೂಲ್ಕರ್ ಕೂಡ ಇದ್ದರು.
ಅಮಿತಾಭ್ ಅವರನ್ನು ನೊಡಿ ಸ್ಟೇಡಿಯಂನಿಂದ ಫ್ಯಾನ್ಸ್ ಹರ್ಷೋದ್ಘಾರ ಕೂಗಿದ್ದಾರೆ. ಅಲ್ಲದೆ ಕೆಲವರು ಅವರ ಆರೋಗ್ಯದ ಬಗ್ಗೆ ವಿಚಾರಸಿದ್ದಾರೆ. ಮೊದಲು ಅವರು ಕೈಸನ್ನೆ ಮಾಡಿ ತಾವು ಆರೋಗ್ಯವಾಗಿ ಇರುವುದಾಗಿ ಹೇಳಿದ್ದಾರೆ. ಆ ಬಳಿಕ ‘ಫೇಕ್ ನ್ಯೂಸ್’ ಎಂದಿದ್ದಾರೆ. ಈ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಅಮಿತಾಭ್ ಬಗ್ಗೆ ಇಷ್ಟೊಂದು ದೊಡ್ಡ ಸುಳ್ಳು ಸುದ್ದಿ ಹಬ್ಬಿಸಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ.
ಅಮಿತಾಭ್ ಬಚ್ಚನ್ಗೆ ಈಗ 81 ವರ್ಷ ವಯಸ್ಸು. ಈ ಅವಧಿಯಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿದೆ ಎಂದಾಗ ಸಹಜವಾಗಿಯೇ ಆತಂಕ ಮೂಡುತ್ತದೆ. ಹೀಗಾಗಿ ಅವರ ಅಭಿಮಾನಿಗಳು ಸಾಕಷ್ಟು ಆತಂಕಗೊಂಡಿದ್ದರು. ಈಗ ಅವರು ಆರೋಗ್ಯವಾಗಿದ್ದಾರೆ ಎನ್ನುವ ವಿಚಾರ ತಿಳಿದು ಫ್ಯಾನ್ಸ್ ಖುಷಿಯಾಗಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅಮಿತಾಭ್ ಬಚ್ಚನ್; ನಿಜಕ್ಕೂ ಆಗಿದ್ದೇನು?
ಅಮಿತಾಭ್ ಬಚ್ಚನ್ ಅವರು ಇತ್ತೀಚೆಗಷ್ಟೇ ‘ಕಲ್ಕಿ 2898 ಎಡಿ’ ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ನಾಗ್ ಅಶ್ವಿನ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಮೇ 9ರಂದು ರಿಲೀಸ್ ಆಗಲಿದೆ. ಈ ಸಿನಿಮಾನ ವಿಷ್ಣು ಪುರಾಣ, ಭಗವತ ಪುರಾಣ ಹಾಗೂ ಕಲ್ಕಿ ಪುರಾಣ ಆಧರಿಸಿದೆ. ವೈಜಯಂತಿ ಮೂವೀಸ್ ಈ ಚಿತ್ರ ನಿರ್ಮಾಣ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ