‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕನಿಗೆ ಬಾಲಿವುಡ್ ಆಫರ್; ಶಾಹಿದ್​ಗೆ ಜೊತೆಯಾದ ಸಚಿನ್ ರವಿ

ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಚಿತ್ರಕ್ಕೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎನ್ನುವ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಹಿದ್ ಕಪೂರ್ ಅವರ ಪಾತ್ರದ ಹೆಸರು ಅಶ್ವತ್ಥಾಮ.

‘ಅವನೇ ಶ್ರೀಮನ್ನಾರಾಯಣ’ ನಿರ್ದೇಶಕನಿಗೆ ಬಾಲಿವುಡ್ ಆಫರ್; ಶಾಹಿದ್​ಗೆ ಜೊತೆಯಾದ ಸಚಿನ್ ರವಿ
ಅಶ್ವತ್ಥಾಮ

Updated on: Mar 20, 2024 | 6:55 AM

ರಕ್ಷಿತ್ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ (Avane Srimannarayana) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಸಚಿನ್ ರವಿ. ಈಗ ಅವರಿಗೆ ಬಾಲಿವುಡ್​ನಲ್ಲಿ ಅವಕಾಶದ ಬಾಗಿಲು ತೆರೆದಿದೆ. ಸ್ಟಾರ್ ನಟ ಶಾಹಿದ್ ಕಪೂರ್​ಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ‘ಅಶ್ವತ್ಥಾಮ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಮಂಗಳವಾರ (ಮಾರ್ಚ್ 19) ಮುಂಬೈನಲ್ಲಿ ನಡೆದ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಕನ್ನಡದ ನಿರ್ದೇಶಕನಾಗಿರುವುದರಿಂದ ಕರ್ನಾಟಕದ ಮಂದಿಯೂ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಳ್ಳುವಂತಾಗಿದೆ.

ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಚಿತ್ರಕ್ಕೆ ‘ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್’ ಎನ್ನುವ ಶೀರ್ಷಿಕೆ ಫಿಕ್ಸ್ ಆಗಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶಾಹಿದ್ ಕಪೂರ್ ಅವರ ಪಾತ್ರದ ಹೆಸರು ಅಶ್ವತ್ಥಾಮ. ಜಗತ್ತಿನಲ್ಲಿರುವ ಏಳು ಚಿರಂಜೀವಿಗಳಲ್ಲಿ ಅಶ್ವತ್ಥಾಮ ಕೂಡ ಒಬ್ಬ ಎನ್ನುವುದು ಪುರಾಣಗಳಲ್ಲಿ ಇದೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಎಂದು ಅನೇಕರು ನಂಬುತ್ತಾರೆ.

ಸಿನಿಮಾ ಬಗ್ಗೆ ಮಾತನಾಡಿದ ಸಚಿನ್ ರವಿ, ‘ಅಮರತ್ವ ನನಗೆ ಕುತೂಹಲಕಾರಿ ಪರಿಕಲ್ಪನೆ. ಅದು ಬಹಳಷ್ಟು ಭಾವನೆಗಳು ಮತ್ತು ನಾಟಕೀಯ ಸನ್ನಿವೇಶಗಳನ್ನು ಪ್ರಚೋದಿಸುತ್ತದೆ. ಮಹಾಭಾರತದ ಅಶ್ವತ್ಥಾಮನ ಇಂದಿಗೂ ಇದ್ದಾನೆ ಅನ್ನೋದು ನಂಬಿಕೆ. ಸಿನಿಮಾದಲ್ಲಿ ಬರುವ ಅಶ್ವತ್ಥಾಮ ವರ್ತಮಾನದಲ್ಲಿ ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಮಾಡುತ್ತಾನೆ’ ಎಂದರು ಸಚಿನ್ ರವಿ.

ಬಾಲ್ಯದಿಂದಲೂ ಸಚಿನ್ ರವಿ ಮೇಲೆ ಅಶ್ವತ್ಥಾಮನ ಪಾತ್ರ ಸಾಕಷ್ಟು ಪ್ರಭಾವ ಬೀರಿತ್ತಂತೆ. ಈ ಪಾತ್ರದ ಬಗ್ಗೆ ಸಿನಿಮಾ ಮಾಡಬೇಕು ಎಂದು ಅವರು ಅಂದುಕೊಂಡಿದ್ದರು. ಈಗ ಆಸೆ ಈಡೇರುತ್ತಿದೆ. ಈ ಚಿತ್ರದ ಬಗೆಗಿನ ಹಲವು ವಿಷಯಗಳ ಕುರಿತು ಅವರು ಶಾಹಿದ್ ಕಪೂರ್ ಜೊತೆ ಚರ್ಚೆ ಮಾಡಿದ್ದಾರೆ.

ಇದನ್ನೂ ಓದಿ: ‘ಉರಿ’ ನಿರ್ದೇಶಕನ ಆಫರ್ ರಿಜೆಕ್ಟ್ ಮಾಡಿದ ಯಶ್? ಸ್ಟಾರ್ ಹೀರೋ ಸಿಗದೆ ನಿಂತೋಯ್ತು ಸಿನಿಮಾ

‘ಅಶ್ವತ್ಥಾಮ’ ಚಿತ್ರವನ್ನು ‘ಪೂಜಾ ಎಂಟರ್​ಟೇನ್ಮೆಂಟ್’ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಟೀಂನಲ್ಲಿ ಸಚಿನ್ ಬಿ ರವಿ ಗುರುತಿಸಿಕೊಂಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದರು. ಅವರಿಗೆ ಬಾಲಿವುಡ್​ ಆಫರ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ