ಬಾಬಾ ಸಿದ್ಧಿಕಿ ಮತ್ತು ಬಾಲಿವುಡ್: ಸಲ್ಲು-ಶಾರುಖ್​ ಖಾನ್ ಒಂದಾಗಿದ್ದೇ ಇವರಿಂದ

|

Updated on: Oct 13, 2024 | 9:32 AM

ಎನ್​ಸಿಪಿ ಪಕ್ಷದ ಪ್ರಮುಖ ರಾಜಕಾರಣಿ ಬಾಬಾ ಸಿದ್ಧಿಕಿಯನ್ನು ಕೆಲ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಬಾಬಾ ಸಿದ್ಧಿಕಿ ಖ್ಯಾತ ರಾಜಕಾರಣಿ ಆಗಿರುವ ಜೊತೆಗೆ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಬಹಳ ಹತ್ತಿರದ ವ್ಯಕ್ತಿ ಆಗಿದ್ದರು. ಸಲ್ಮಾನ್ ಖಾನ್ ಶಾರುಖ್ ಖಾನ್ ಒಂದಾಗಲು ಕಾರಣವಾಗಿದ್ದರು ಈ ರಾಜಕಾರಣಿ.

ಬಾಬಾ ಸಿದ್ಧಿಕಿ ಮತ್ತು ಬಾಲಿವುಡ್: ಸಲ್ಲು-ಶಾರುಖ್​ ಖಾನ್ ಒಂದಾಗಿದ್ದೇ ಇವರಿಂದ
Follow us on

ಎನ್​ಸಿಪಿಯ ಹಿರಿಯ ನಾಯಕ ಬಾಬಾ ಸಿದ್ಧಿಕಿಯನ್ನು ನಿನ್ನೆ ಕೊಲ್ಲಲಾಗಿದೆ. ಬಾಂದ್ರಾದ ಅವರ ಮಗನ ಕಚೇರಿ ಬಳಿ ಬಾಬಾ ಸಿದ್ಧಿಕಿ ಮೇಲೆ ಕೆಲ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ‘ಬಾಂದ್ರಾ ಬಾಯ್’ ಎಂದು ಪ್ರೀತಿಯಿಂದ ಕರೆಯಲಾಗುತ್ತಿದ್ದ ಬಾಬಾ ಸಿದ್ಧಿಕಿಗೆ ಬಾಲಿವುಡ್​ ಜೊತೆಗೆ ಅತ್ಯಂತ ಆಪ್ತ ಬಂಧವಿತ್ತು. ಬಾಲಿವುಡ್​ನವರಿಗೆ ಏನೇ ಸಮಸ್ಯೆ ಬಂದರು ಮೊದಲು ಭೇಟಿ ನೀಡುತ್ತಿದ್ದ ವ್ಯಕ್ತಿ ಬಾಬಾ ಸಿದ್ಧಿಕಿ ಆಗಿರುತ್ತಿದ್ದರು. ಖ್ಯಾತ ಹಿರಿಯ ನಟ ಸನಿಲ್ ದತ್ ಅವರಿಂದ ಹಿಡಿದು ಕತ್ರಿನಾ ಕೈಫ್ ವರೆಗೂ ಬಾಬಾ ಸಿದ್ಧಿಕಿಗೆ ಬಾಲಿವುಡ್​ನಲ್ಲಿ ಆಪ್ತ ಗೆಳೆತನ ಮತ್ತು ಗೌರವ ಇತ್ತು. ವಿಶೇಷವಾಗಿ, ಬಾಲಿವುಡ್​ನ ಇಬ್ಬರು ಸೂಪರ್​ ಸ್ಟಾರ್​ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಮತ್ತೆ ಒಂದಾಗಲು ಕಾರಣವಾಗಿದ್ದೇ ಬಾಬಾ ಸಿದ್ಧಿಕಿ.

ಬಾಬಾ ಸಿದ್ಧಿಕಿ, ರಾಜಕಾರಣಿಯಾಗಿ ಹೆಜ್ಜೆ ಇಡುವ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದು ಖ್ಯಾತ ನಟ ಸುನಿಲ್ ದತ್. ಸುನಿಲ್ ದತ್ ಅವರು ಕಾಂಗ್ರೆಸ್​ ನಾಯಕರಾಗಿದ್ದಾಗ, ಬಾಬಾ ಸಿದ್ಧಿಕಿ ಅವರೂ ಸಹ ಕಾಂಗ್ರೆಸ್​ನಲ್ಲಿಯೇ ಇದ್ದರು. ಸುನಿಲ್ ದತ್ ಅವರ ಬಲಗೈನಂತೆ ಬಾಬಾ ಸಿದ್ಧಿಕಿ ಇದ್ದರು. ಸುನಿಲ್ ದತ್ ಪುತ್ರ ಸಂಜಯ್ ದತ್ ಜೊತೆಗೂ ಸಹ ಬಾಬಾ ಸಿದ್ಧಿಕಿಗೆ ಅತ್ಯಂತ ಆಪ್ತ ಬಂಧ ಇತ್ತು. ಈಗಲೂ ಇದೆ. ಸಂಜಯ್ ದತ್​ಗೆ ಎಕೆ 47 ಪ್ರಕರಣದಲ್ಲಿ ಸಮಸ್ಯೆಯಾದಾಗ ಬಾಬಾ ಸಿದ್ಧಿಕಿ ಸಾಕಷ್ಟು ಸಹಾಯ ಮಾಡಿದ್ದರು.

ಇದನ್ನೂ ಓದಿ:ಅರ್ಧಕ್ಕೆ ನಿಂತೋಯ್ತು ಸಲ್ಮಾನ್ ಖಾನ್-ರಶ್ಮಿಕಾ ನಟನೆಯ ‘ಸಿಖಂದರ್’ ಶೂಟಿಂಗ್?

ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರುಗಳೊಟ್ಟಿಗೆ ಬಾಬಾ ಸಿದ್ಧಿಕಿಗೆ ಅತ್ಯಂತ ಆಪ್ತ ಗೆಳೆತನ ಇದೆ. 2008 ರಲ್ಲಿ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಜಗಳ ಆಡಿಕೊಂಡು ದೂರಾಗಿದ್ದರು. ಅವರನ್ನು ಒಂದು ಮಾಡಿದ್ದು ಬಾಬಾ ಸಿದ್ಧಿಕಿ. ತಮ್ಮ ಇಫ್ತಾರ್ ಕೂಟದಲ್ಲಿ ಇಬ್ಬರೂ ಸ್ಟಾರ್​ಗಳನ್ನು ಆಹ್ವಾನಿಸಿ ಇಬ್ಬರಿಗೂ ಸಂಧಾನ ಮಾಡಿಸಿದರು. ಅಂದಹಾಗೆ ಬಾಬ ಸಿದ್ದಿಕಿ ಭಾರಿ ಅದ್ಧೂರಿಯಾದ ಇಫ್ತಿಯಾರ್ ಪಾರ್ಟಿಗಳನ್ನು ಆಯೋಜನೆ ಮಾಡುತ್ತಾರೆ. ಬಾಲಿವುಡ್​ನ ಖ್ಯಾತ ನಾಮ ಸೆಲೆಬ್ರಿಟಿಗಳು ಪಾರ್ಟಿಗೆ ಬರುತ್ತಾರೆ.

ಕತ್ರಿನಾ ಕೈಫ್ ಹಾಗೂ ಇನ್ನೂ ಕೆಲವು ನಟಿಯರೊಟ್ಟಿಗೂ ಸಹ ಬಾಬಾ ಸಿದ್ಧಿಕಿ ಆಪ್ತ ಗೆಳೆತನ ಹೊಂದಿದ್ದಾರೆ. ಹಲವು ಯುವ ನಟ-ನಟಿಯರು ಸಹ ಬಾಬಾ ಸಿದ್ಧಿಕಿ ಅವರಿಗೆ ಆಪ್ತರು. ಬಾಲಿವುಡ್​ನಲ್ಲಿ ನಡೆಯುವ ಪ್ರೀಮಿಯರ್ ಶೋಗಳಿಗೆ ಬಾಬಾ ಸಿದ್ಧಿಕಿ ಅವರಿಗೆ ಆಹ್ವಾನ ಇದ್ದೇ ಇರುತ್ತಿತ್ತು. ಇದೀಗ ಬಾಬ ಸಿದ್ಧಿಕಿ ಹತ್ಯೆ ಆಗಿದೆ. ಇಂದು ಬೆಳಿಗ್ಗೆ ಸಲ್ಮಾನ್ ಖಾನ್, ಬಾಬಾ ಸಿದ್ಧಿಕಿಯವರನ್ನು ಕಾಣಲು ತೆರಳಿದ್ದಾರೆ. ಶಾರುಖ್ ಖಾನ್ ಸಹ ಬಾಬಾ ಸಿದ್ಧಿಕಿಯನ್ನು ನೋಡಲು ತೆರಳುವ ಸಾಧ್ಯತೆ ಇದೆ. ಸಂಜಯ್ ದತ್ ಸೇರಿದಂತೆ ಇನ್ನೂ ಕೆಲವು ಬಾಲಿವುಡ್ ನಟ-ನಟಿಯರು ಸಿದ್ಧಿಕಿ ಅವರ ಅಂತಿಮ ದರ್ಶನ ಪಡೆಯುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:03 am, Sun, 13 October 24