ಆಧಿತ್ಯ ಧರ್ ಮೇಲೆ ಕೃತಿಚೌರ್ಯದ ಆರೋಪ ಮಾಡಿದ ನಿರ್ದೇಶಕನಿಗೆ ಲೀಗಲ್ ನೋಟಿಸ್?

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರದ ಮೇಲೆ ಕೃತಿಚೌರ್ಯದ ಆರೋಪ ಬಂದಿದೆ. ನಿರ್ದೇಶಕ ಸಂತೋಷ್ ಕುಮಾರ್ ಅವರು ಈ ವಿವಾದವನ್ನು ಶುರು ಮಾಡಿದ್ದಾರೆ. ಅವರಿಗೆ ನಿರ್ದೇಶಕ ಆದಿತ್ಯ ಧರ್ ತಂಡ ಲೀಗಲ್ ನೋಟಿಸ್ ಕಳಿಸಿದೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಆಧಿತ್ಯ ಧರ್ ಮೇಲೆ ಕೃತಿಚೌರ್ಯದ ಆರೋಪ ಮಾಡಿದ ನಿರ್ದೇಶಕನಿಗೆ ಲೀಗಲ್ ನೋಟಿಸ್?
Santosh Kumar Rs, Aditya Dhar

Updated on: Apr 03, 2026 | 4:54 PM

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. (Santosh Kumar RS) ನಡುವೆ ಈಗ ಕಾನೂನು ಸಮರ ಶುರುವಾಗಿದೆ. ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾ ತಂಡದ ಮೇಲೆ ಸಂತೋಷ್ ಕುಮಾರ್ ಅವರು ಆರೋಪ ಹೊರಿಸಿದ್ದಾರೆ. ತಮ್ಮ ಚಿತ್ರಕಥೆಯನ್ನು ನಕಲು (Plagiarism) ಮಾಡಿ ‘ಧುರಂಧರ್ 2’ ಮಾಡಲಾಗಿದೆ ಎಂದು ಸಂತೋಷ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಹಾಗಾಗಿ ಸಂತೋಷ್ ಕುಮಾರ್ ವಿರುದ್ಧ ಆದಿತ್ಯ ಧರ್ (Aditya Dhar) ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಸಂತೋಷ್ ಕುಮಾರ್ ಪ್ರಕಾರ, ಅವರು 2023ರಲ್ಲಿ ನೋಂದಾಯಿಸಿದ ‘ಡಿ ಸಾಹೇಬ್’ ಎಂಬ ಚಿತ್ರಕಥೆಯನ್ನು ಆದಿತ್ಯ ಧರ್ ತಂಡ ಕೃತಿಚೌರ್ಯ ಮಾಡಿದೆ. ‘ನನ್ನ ಪ್ರಾಜೆಕ್ಟ್ ಮತ್ತು ಸ್ಕ್ರಿಪ್ಟ್ ಅನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ನನ್ನ ಬಳಿ ಚಿತ್ರಕಥೆ ಬರಹಗಾರರ ಸಂಘದ ಎಲ್ಲ ದಾಖಲೆಗಳಿವೆ’ ಎಂದು ಸಂತೋಷ್ ಹೇಳಿದ್ದಾರೆ. ಅವರ ಹೇಳಿಕೆ ದೊಡ್ಡ ಸುದ್ದಿ ಆಗಿದೆ.

‘ಧುರಂಧರ್ ಚಿತ್ರದ ಮುಖ್ಯ ಪಾತ್ರ ಮತ್ತು ಕಥೆಯ ಎಳೆ ನನ್ನ ಸ್ಕ್ರಿಪ್ಟ್‌ನಿಂದ ಬಂದಿದೆ. ಒಬ್ಬ ಮಾಜಿ ಸೇನಾಧಿಕಾರಿಯ ಮಗ ತನ್ನ ಕುಟುಂಬದ ಮೇಲಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನಕ್ಕೆ ರಾ ಏಜೆಂಟ್ ಆಗಿ ಹೋಗುವ ಕಥೆ ತನ್ನದಾಗಿತ್ತು. ಆದಿತ್ಯ ಧರ್ ನನ್ನ ಕಥೆಯ ಮುಖ್ಯ ಸಾಲುಗಳನ್ನು ತೆಗೆದುಕೊಂಡು ಅದಕ್ಕೆ ರಾಜಕೀಯ ಪ್ರೊಪಗಾಂಡದ ಬಣ್ಣ ಹಚ್ಚಿದ್ದಾರೆ’ ಎಂಬುದು ಸಂತೋಷ್ ಆರೋಪ.

ಈ ಆರೋಪಗಳನ್ನು ಆದಿತ್ಯ ಧರ್ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಆದಿತ್ಯ ಅವರ ಕಾನೂನು ತಂಡವು ಈಗಾಗಲೇ ಸಂತೋಷ್ ಕುಮಾರ್ ಅವರಿಗೆ ನೋಟಿಸ್ ನೀಡಿದ್ದು, ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸುವಂತೆ ಸೂಚಿಸಿದೆ. ‘ಸಂತೋಷ್ ಅವರು ಪ್ರಚಾರಕ್ಕಾಗಿ ಇಂತಹ ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆದಿತ್ಯ ಧರ್ ಆಪ್ತ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.

ಇದನ್ನೂ ಓದಿ: ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್

ಆದಿತ್ಯ ಧರ್ ತಂಡದ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿರುವ ಸಂತೋಷ್, ‘ಅವರು ನನಗೆ ಕಳುಹಿಸಿರುವುದು ನೋಟಿಸ್ ಅಲ್ಲ. ಕೇವಲ ಒಂದು ಮೇಲ್ ಅಷ್ಟೇ. ನನ್ನನ್ನು ಬೆದರಿಸಲು ಮತ್ತು ನನ್ನ ಬಾಯಿ ಮುಚ್ಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ನಾನು ಈ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತಿದ್ದೇನೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ವಿರುದ್ಧ ಕೇಸ್ ದಾಖಲಿಸುತ್ತೇನೆ’ ಎಂದು ಸವಾಲು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us