Kangana Ranaut: ‘ಡ್ರಗ್ಸ್​ ತೆಗೆದುಕೊಳ್ಳುವ, ಸ್ತ್ರೀಲೋಲ ನಟನಿಗೆ ರಾಮನ ಪಾತ್ರವೇ? ಇದೆಂಥ ಕಲಿಯುಗ’: ಕಂಗನಾ ಕಿಡಿಕಾರಿದ್ದು ಯಾರ ಬಗ್ಗೆ?

|

Updated on: Jun 11, 2023 | 9:38 AM

Ranbir Kapoor: ‘ಆತ ಇತ್ತೀಚೆಗೆ ಶಿವನ ಪಾತ್ರ ಮಾಡಲು ಹೆಣಗಾಡಿದ್ದ. ಆ ಚಿತ್ರವನ್ನು ಯಾರೂ ನೋಡಿಲ್ಲ. ಅಂತಹ ನಟನಿಗೆ ಈಗ ರಾಮನ ಪಾತ್ರ ಮಾಡುವ ಬಯಕೆ ಉಂಟಾಗಿದೆ’ ಎಂದು ಕಂಗನಾ ರಣಾವತ್​ ಹೇಳಿದ್ದಾರೆ.

Kangana Ranaut: ‘ಡ್ರಗ್ಸ್​ ತೆಗೆದುಕೊಳ್ಳುವ, ಸ್ತ್ರೀಲೋಲ ನಟನಿಗೆ ರಾಮನ ಪಾತ್ರವೇ? ಇದೆಂಥ ಕಲಿಯುಗ’: ಕಂಗನಾ ಕಿಡಿಕಾರಿದ್ದು ಯಾರ ಬಗ್ಗೆ?
ಕಂಗನಾ ರಣಾವತ್​
Follow us on

ಖ್ಯಾತ ನಟಿ ಕಂಗನಾ ರಣಾವತ್​ (Kangana Ranaut) ಅವರು ಅನೇಕ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಅದರಿಂದ ಹಲವು ಬಾರಿ ಅವರು ವಿವಾದ ಮಾಡಿಕೊಂಡಿದ್ದೂ ಉಂಟು. ಈಗ ಅವರು ರಾಮನ ಪಾತ್ರ ಮಾಡಬೇಕು ಎಂದುಕೊಂಡಿರುವ ಬಾಲಿವುಡ್​ ನಟರೊಬ್ಬರ ಬಗ್ಗೆ ಖಾರವಾಗಿ ಟೀಕೆ ಮಾಡಿದ್ದಾರೆ. ಸದ್ಯಕ್ಕೆ ‘ಆದಿಪುರುಷ್​’ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನ (Lord Rama) ಪಾತ್ರ ಮಾಡಿದ್ದು, ಆ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆದರೆ ಕಂಗನಾ ಮಾತನಾಡಿರುವುದು ಪ್ರಭಾಸ್​ ಬಗ್ಗೆ ಅಲ್ಲ. ಬಾಲಿವುಡ್​ನಲ್ಲಿ ರಾಮಾಯಣದ ಕುರಿತು ಮತ್ತೊಂದು ಸಿನಿಮಾ ಸಿದ್ಧವಾಗುತ್ತಿದ್ದು, ಆ ಚಿತ್ರದಲ್ಲಿ ರಣಬೀರ್​ ಕಪೂರ್​ಗೆ ರಾಮನ ಪಾತ್ರ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಕುರಿತಾಗಿ ಕಂಗನಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಎಲ್ಲಿಯೂ ಅವರು ರಣಬೀರ್​ ಕಪೂರ್​ (Ranbir Kapoor) ಹೆಸರನ್ನು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಕೂಡ ಅದು ಅವರ ಕುರಿತಾಗಿಯೇ ಹೇಳಿದ್ದು ಎಂಬುದು ಎಲ್ಲರಿಗೂ ತಿಳಿಯುತ್ತಿದೆ.

ನಿರ್ದೇಶಕ ನಿತೇಶ್​ ತಿವಾರಿ ಅವರು ರಾಮಾಯಣದ ಕಥೆ ಇಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಸೀತೆ ಪಾತ್ರದಲ್ಲಿ ಆಲಿಯಾ ಭಟ್​, ರಾಮನ ಪಾತ್ರದಲ್ಲಿ ರಣಬೀರ್​ ಕಪೂರ್​ ಹಾಗೂ ರಾವಣನ ಪಾತ್ರದಲ್ಲಿ ಯಶ್​ ನಟಿಸುತ್ತಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಎಲ್ಲವೂ ಅಂತೆ-ಕಂತೆಯ ಹಂತದಲ್ಲೇ ಇದೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅಷ್ಟರಲ್ಲಾಗಲೇ ಕಂಗನಾ ರಣಾವತ್​ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kangana Ranaut: ಚಿಕ್ಕ ಬಟ್ಟೆ ಧರಿಸಿ ದೇವಸ್ಥಾನಕ್ಕೆ ಬಂದ ಹುಡುಗಿಗೆ ಕಂಗನಾ ರಣಾವತ್​ ಕ್ಲಾಸ್​; ವೈರಲ್​ ಆಯ್ತು ಫೋಟೋ

‘ಬಾಲಿವುಡ್​ನಲ್ಲಿ ರಾಮಾಯಣದ ಕುರಿತು ಮತ್ತೊಂದು ಸಿನಿಮಾ ಆಗುತ್ತಿದೆ ಎಂಬ ಸುದ್ದಿ ಕೇಳಿದೆ. ಬಡಕಲು ಬಿಳಿ ಇಲಿ ರೀತಿ ಇರುವ ಒಬ್ಬ ವ್ಯಕ್ತಿಯು ನಟ ಅಂತ ಕರೆಸಿಕೊಳ್ಳುತ್ತಾನೆ. ಚಿತ್ರರಂಗದಲ್ಲಿ ಇರುವ ಎಲ್ಲರ ಬಗ್ಗೆಯೂ ಆತ ಅಪಪ್ರಚಾರ ಮಾಡಿಸುತ್ತಾನೆ. ಹೆಂಗಸರ ಸಹವಾಸ ಮತ್ತು ಡ್ರಗ್ಸ್​ ಸೇವನೆಗೆ ಆತ ಫೇಮಸ್​. ಇತ್ತೀಚೆಗೆ ಶಿವನ ಪಾತ್ರ ಮಾಡಲು ಹೆಣಗಾಡಿದ್ದ. ಆ ಚಿತ್ರವನ್ನು ಯಾರೂ ನೋಡಿಲ್ಲ. ಅದರ ಮುಂದಿನ ಭಾಗ ಮಾಡಲು ಕೂಡ ಯಾರೂ ಸಿದ್ಧರಿಲ್ಲ. ಅಂತಹ ನಟನಿಗೆ ಈಗ ರಾಮನ ಪಾತ್ರ ಮಾಡುವ ಬಯಕೆ ಉಂಟಾಗಿದೆ’ ಎಂದು ಕಂಗನಾ ರಣಾವತ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kangana Ranaut: ವಿಜಯೇಂದ್ರ ಪ್ರಸಾದ್ ಜತೆ ದೇವಸ್ಥಾನ ಸುತ್ತಿದ್ದ ಕಂಗನಾ ರಣಾವತ್​; ಫೋಟೋ ವೈರಲ್​

‘ದಕ್ಷಿಣದ ಯುವ ಸೂಪರ್​ ಸ್ಟಾರ್​ ಒಬ್ಬರು ಫ್ಯಾಮಿಲಿ ಮ್ಯಾನ್​ ರೀತಿ ಗುರುತಿಸಿಕೊಂಡಿದ್ದಾರೆ. ಎಲ್ಲ ರೀತಿಯಿಂದಲೂ ಅವರು ರಾಮನ ರೀತಿ ಕಾಣುತ್ತಾರೆ. ಅಂಥವರಿಗೆ ಹೋಗಿ ರಾವಣನ ಪಾತ್ರ ನೀಡುತ್ತಾರಂತೆ. ಇದು ಎಂಥ ಕಲಿಯುಗ? ಬಡಕಲು ದೇಹ ಇರುವ, ಡ್ರಗ್​ ಅಡಿಕ್ಟ್ ಆಗಿರುವಂತವನು ರಾಮನ ಪಾತ್ರ ಮಾಡಬಾರದು. ಜೈ ಶ್ರೀರಾಮ್​’ ಎಂದು ಕಂಗನಾ ರಣಾವತ್​ ಅವರು ಇನ್​ಸ್ಟಾಗ್ರಾಮ್​​ ಸ್ಟೋರಿಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರ ಸ್ಕ್ರೀನ್​ ಶಾಟ್​ ಹರಿದಾಡುತ್ತಿದೆ. ಈ ಬಗ್ಗೆ ರಣಬೀರ್ ಕಪೂರ್​ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.