ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ

ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಾಲಿವುಡ್‌ನ 'ಪೇಯ್ಡ್ ಪಿಆರ್' ಮತ್ತು ಯುವ ನಟಿಯರ ಅತಿಯಾದ ಪ್ರಚಾರದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪ್ರಚಾರದ ಆರ್ಭಟ ಹೆಚ್ಚಾಗಿದ್ದು, ನಿಜವಾದ ಮೆಚ್ಚುಗೆ ಮತ್ತು ಹಣಕ್ಕಾಗಿ ಪಡೆದ ಮೆಚ್ಚುಗೆಯ ನಡುವೆ ಗೊಂದಲ ಸೃಷ್ಟಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನೈಜ ಪ್ರತಿಭೆಗಿಂತ ಹಣವೇ ಪ್ರಚಾರಕ್ಕೆ ಕಾರಣವಾಗಿದ್ದು, ಈ ವ್ಯವಸ್ಥೆ ಚಿತ್ರರಂಗಕ್ಕೆ ಹಾನಿಕರ ಎಂದಿದ್ದಾರೆ.

ಬದಲಾದ ಕರಣ್ ಜೋಹರ್; ಬಾಲಿವುಡ್ ನೆಪೋ ಕಿಡ್ಸ್ ಕಳ್ಳಾಟ ಬಯಲು ಮಾಡಿದ ನಿರ್ಮಾಪಕ
ಕರಣ್

Updated on: Apr 27, 2026 | 10:10 AM

ಕರಣ್ ಜೋಹರ್ ಅವರು (Karan Johar) ಬಾಲಿವುಡ್​​ನ ಖ್ಯಾತ ನಿರ್ಮಾಪಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಹೊಸ ಮುಖಗಳಿಗೆ ಮಣೆ ಹಾಕುವುದು ಎಂದರೆ ಅವರಿಗೆ ಎಲ್ಲಿಲ್ಲದ ಉತ್ಸಾಹ. ಆದರೆ, ಇತ್ತೀಚೆಗೆ ಅವರು ನಿರ್ಮಾಣದಲ್ಲಿ ಅಷ್ಟು ಆ್ಯಕ್ಟೀವ್ ಆಗಿಲ್ಲ. ಈಗ ಬಾಲಿವುಡ್ ಯುವ ನಟಿಯರು ಸೇರಿದಂತೆ ಬಾಲಿವುಡ್ ಪಿಆರ್ ವ್ಯವಸ್ಥೆ ಬಗ್ಗೆ ಅವರು ನೀಡಿದ ಹೇಳಿಕೆ ಸೆನ್ಸೇಷನ್ ಸೃಷ್ಟಿ ಮಾಡಿದೆ. ಕರಣ್ ನೆಪೋ ಕಿಡ್​​ಗಳ ಬಗ್ಗೆ ತೋರಿಸುತ್ತಿದ್ದ ಒಲವು ಕಡಿಮೆ ಆದಂತೆ ಕಾಣಿಸುತ್ತಿದೆ.

ನಟನೆ ಬರದೆ ಇದ್ದರೂ ತೊಂದರೆ ಇಲ್ಲ, ಪಿಆರ್ ಕೆಲಸ ಮಾಡೋದನ್ನು ಮಾತ್ರ ಯುವ ನಟಿಯರು ಚೆನ್ನಾಗಿ ಮಾಡುತ್ತಾರೆ ಎಂಬುದು ಅನೇಕರ ಆರೋಪ. ಅದು ಮಿತಿಮೀರಿದೆ ಎಂಬ ಅಭಿಪ್ರಾಯವನ್ನು ಕರಣ್ ಜೋಹರ್ ಹೊರಹಾಕಿದ್ದಾರೆ. ತಿಳಿಸುವ ಎಲ್ಲಾ ಅಭಿನಂದನೆಗಳಿಗೂ ಬೆಲೆ ಕಟ್ಟಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ನಿಜ ಹೊಗಳಿಕೆ ಯಾವದು ಹಾಗೂ ಕೃತಕ ಹೊಗಳಿಕೆ ಯಾವುದು ಎಂಬುದು ಗೊತ್ತಾಗದಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

‘ಬಾಲಿವುಡ್ ಸದ್ಯ ನಡೆಯುತ್ತಿರುವ ಪ್ರಚಾರದ ಆರ್ಭಟ ನಿಲ್ಲಬೇಕು. ಅಬ್ಬರದ ಪ್ರಚಾರಕ್ಕಿಂತ ಸಾಧನೆಗಳು ತಾವಾಗಿಯೇ ಮಾತನಾಡಬೇಕು. ಇಂದಿನ ದಿನಗಳಲ್ಲಿ ಪ್ರಚಾರ ಎಂಬುದು ಸಂಪೂರ್ಣವಾಗಿ ಹಣದ ಮೇಲೆ ಅವಲಂಬಿತವಾಗಿದೆ. ನೀವು ಸುಂದರವಾಗಿ ಕಾಣುತ್ತಿದ್ದೀರಿ ಎಂದು ಯಾರಾದರೂ ಹೇಳಬೇಕೆಂದರೆ ಅಥವಾ ನೀವು ಭೂಮಿಯ ಮೇಲಿನ ಅತ್ಯುತ್ತಮ ನಟ ಎಂದು ಕರೆಸಿಕೊಳ್ಳಬೇಕೆಂದರೆ ಅದಕ್ಕೆ ಹಣ ನೀಡಬೇಕಾದ ಪರಿಸ್ಥಿತಿ ಇದೆ. ಪ್ರಚಾರವು ಈಗ ಕೇವಲ ‘ಪೇಯ್ಡ್‌’ (Paid PR) ಆಗಿರುವುದರಿಂದ ಅದರಲ್ಲಿ ನೈಜತೆ ಇಲ್ಲ’ ಎಂದು ಕರಣ್ ಮುಕ್ತವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.

‘ನಾನು ನೀಡಿದ ಈ ಹೇಳಿಕೆ ಜಾನ್ವಿ ಕಪೂರ್ ಅಥವಾ ಶನಾಯ ಕಪೂರ್ ಅವರನ್ನೇ ಉದ್ದೇಶಿಸಿ ಹೇಳಿದ್ದಲ್ಲ. ಇದು ಇಡೀ ಚಿತ್ರರಂಗದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಹೇಳುತ್ತಿರುವುದಾಗಿ’ ಕರಣ್ ವಿಶೇಷವಾಗಿ ಉಲ್ಲೇಖಿಸಿದರು.‘ಪ್ರಚಾರದ (PR) ಅಬ್ಬರ ಈಗ ಮಿತಿಮೀರಿದೆ . ಪ್ರಚಾರ ಮತ್ತು ಮಾರ್ಕೆಟಿಂಗ್ ಎಂಬುದು ಬಹಳ ಮುಖ್ಯವಾದ ಕೆಲಸಗಳು. ಅವುಗಳನ್ನು ಸರಿಯಾದ ರೀತಿಯಲ್ಲಿ ಮತ್ತು ಘನತೆಯಿಂದ ನಿರ್ವಹಿಸಬೇಕೇ ಹೊರತು ಅತಿರೇಕಕ್ಕೆ ಹೋಗಬಾರದು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಣಾ ದಗ್ಗುಬಾಟಿ, ಕರಣ್ ಜೋಹರ್ ಸಿನಿಮಾನಲ್ಲಿ ನಟಿಸಲ್ಲ ಅಕ್ಷಯ್ ಕುಮಾರ್

‘ಇಂದು ಪ್ರತಿಯೊಂದೂ ಹಣಕ್ಕೆ ಲಭ್ಯವಿದೆ. ಪ್ರೇಕ್ಷಕರಿಗೆ ನಿಜವಾಗಿಯೂ ಯಾವುದು ಇಷ್ಟವಾಗುತ್ತಿದೆ ಮತ್ತು ಯಾವುದು ಇಲ್ಲ ಎಂಬುದನ್ನು ಅಳೆಯುವುದು ಅಸಾಧ್ಯವಾಗಿದೆ. ಜನರು ಯಾವುದನ್ನಾದರೂ ಮೆಚ್ಚುತ್ತಿದ್ದರೆ, ಅದು ನಿಜವಾದ ಮೆಚ್ಚುಗೆಯೋ ಅಥವಾ ಮೆಚ್ಚಲು ಹಣ ನೀಡಲಾಗಿದೆಯೇ? ಎಂಬ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲ ಕೇವಲ ಜನರಿಗಷ್ಟೇ ಅಲ್ಲ, ನನಗೂ ಆಗುತ್ತಿದೆ. ನಾನು ಕೆಲವೊಮ್ಮೆ ಇದಕ್ಕೆ ಹಣ ಪಾವತಿಸುತ್ತೇನೆ’ ಎಂದು ಕರಣ್ ಒಪ್ಪಿಕೊಂಡಿದ್ದಾರೆ. ಅವರು ಇಷ್ಟು ಮುಕ್ತವಾಗಿ ಮಾತನಾಡಿದ್ದು ಇದೇ ಮೊದಲು. ಈ ಬೆಳವಣಿಗೆ ಅಚ್ಚರಿ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us