ಭೀಮನ ಅಮಾವಾಸ್ಯೆ; ರಾಜ್ಕುಮಾರ್ ಕಿಡ್ನ್ಯಾಪ್ಗೆ ಕಾರಣವಾಗಿತ್ತು ಆ ಒಂದು ಘಟನೆ
ಎಸ್.ಎಂ. ಕೃಷ್ಣ ಸರ್ಕಾರದ ಪೂರ್ವ ಮಾಹಿತಿ ನೀಡುವ ಒಪ್ಪಂದದ ಹೊರತಾಗಿಯೂ, ಡಾ. ರಾಜ್ಕುಮಾರ್ ಅವರು ಭೀಮನ ಅಮಾವಾಸ್ಯೆಯಂದು ಸರ್ಕಾರಕ್ಕೆ ತಿಳಿಸದೆ ಗಾಜನೂರಿಗೆ ತೆರಳಿದ್ದರು. ಭದ್ರತೆ ಇಲ್ಲದ ಈ ಸಮಯವನ್ನೇ ಕಾಯುತ್ತಿದ್ದ ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಅಪಹರಿಸಿದನು. ಸುದೀರ್ಘ 108 ದಿನಗಳ ರಹಸ್ಯ ಕಾರ್ಯಾಚರಣೆ ಬಳಿಕ ಅವರು ಸುರಕ್ಷಿತವಾಗಿ ಮರಳಿದರು.

ರಾಜ್ಯದ ಹಿರಿಯ ರಾಜಕಾರಣಿ, ಎಸ್.ಎಂ. ಕೃಷ್ಣ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮರು ವರ್ಷವೇ ಎದುರಾದ ಬೃಹತ್ ಸವಾಲೆಂದರೆ ಅದು ವರನಟ ಡಾ. ರಾಜ್ಕುಮಾರ್ ಅವರ ಅಪಹರಣ. ಭೀಮನ ಅಮಾವಾಸ್ಯೆ ದಿನದಂದು ನಡೆದ ಆ ಘಟನೆ ಅತ್ಯಂತ ಕರಾಳ ನೆನಪಾಗಿ ಉಳಿದುಕೊಂಡಿದೆ.
ಪೂಜೆಯ ಶುಭ ದಿನದಂದೇ ನಡೆದ ಕರಾಳ ಘಟನೆ
ಅಂದು ಪತಿಯ ಆಯುಷ್ಯ ಮತ್ತು ಕ್ಷೇಮಕ್ಕಾಗಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸುವ ಪವಿತ್ರ ಭೀಮನ ಅಮಾವಾಸ್ಯೆಯ ದಿನ (ಜುಲೈ 30, 2000). ಇಡೀ ನಾಡು ಹಬ್ಬದ ಸಂಭ್ರಮದಲ್ಲಿದ್ದಾಗ, ವೀರಪ್ಪನ್ ಮತ್ತು ಆತನ ಗುಂಪು ಗಾಜನೂರಿನಲ್ಲಿದ್ದ ಡಾ. ರಾಜ್ಕುಮಾರ್ ಅವರ ಮನೆಗೆ ನುಗ್ಗಿ ಅವರನ್ನು ಅಪಹರಿಸಿತು. ಪಾರ್ವತಮ್ಮನವರು ಗಂಡನ ಆಯುಷ್ಯಕ್ಕಾಗಿ ಪೂಜೆ ಸಲ್ಲಿಸುವ ಪವಿತ್ರ ದಿನದಂದೇ ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಕಾಡಿಗೆ ಎಳೆದೊಯ್ದದ್ದು ಇಡೀ ನಾಡಿಗೆ ಆಘಾತ ತಂದಿತ್ತು.
ಸರ್ಕಾರಕ್ಕೆ ಸುಳಿವಿತ್ತು
ಈ ಅಪಹರಣದ ಹಿಂದೆ ಒಂದು ರೋಚಕ ಹಿನ್ನೆಲೆಯಿತ್ತು. ರಾಜ್ಕುಮಾರ್ ಅವರಿಗೆ ವೀರಪ್ಪನ್ನಿಂದ ಅಪಾಯವಿದೆ ಎಂಬ ಸುಳಿವು ರಾಜ್ಯ ಸರ್ಕಾರಕ್ಕೆ ಮೊದಲೇ ಇತ್ತು. ಈ ಕಾರಣದಿಂದಲೇ ಕೃಷ್ಣ ಅವರ ಸರ್ಕಾರವು ರಾಜ್ಕುಮಾರ್ ಅವರೊಂದಿಗೆ ಒಂದು ಪ್ರಮುಖ ಒಪ್ಪಂದ ಮಾಡಿಕೊಂಡಿತ್ತು.
ತಮಿಳುನಾಡು ಗಡಿಯಲ್ಲಿರುವ ಹುಟ್ಟೂರು ಗಾಜನೂರಿಗೆ ತೆರಳುವುದಿದ್ದರೆ, ಆ ಬಗ್ಗೆ ಮುಂಚಿತವಾಗಿಯೇ ರಾಜ್ಯ ಸರ್ಕಾರ ಹಾಗೂ ಪೊಲೀಸರಿಗೆ ಮಾಹಿತಿ ನೀಡಬೇಕು ಎಂಬುದು ಆ ಒಪ್ಪಂದವಾಗಿತ್ತು. ಸರ್ಕಾರಕ್ಕೆ ತಿಳಿಸಿದರೆ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತಿತ್ತು. ರಾಜ್ಕುಮಾರ್ ಅವರು ಕೂಡ ಇದಕ್ಕೆ ಒಪ್ಪಿದ್ದರು.
ಇದನ್ನೂ ಓದಿ: ಡಾ. ರಾಜ್ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಪ್ರತಿ ಬಾರಿಯೂ ಗಾಜನೂರಿಗೆ ತೆರಳುವಾಗ ಅಣ್ಣಾವ್ರು ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದರು. ಆದರೆ, ಅಂದು ಭೀಮನ ಅಮಾವಾಸ್ಯೆಯ ಸಂದರ್ಭದಲ್ಲಿ ಗೃಹಪ್ರವೇಶದ ಕೆಲಸಗಳಿದ್ದ ಕಾರಣ, ಅವರು ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡದೆ ನೇರವಾಗಿ ಗಾಜನೂರಿಗೆ ತೆರಳಿದ್ದರು. ಭದ್ರತೆಯೇ ಇಲ್ಲದ ಆ ಕ್ಷಣಕ್ಕಾಗಿ ಕಾಯುತ್ತಿದ್ದ ವೀರಪ್ಪನ್, ನೇರವಾಗಿ ಮನೆಗೆ ನುಗ್ಗಿ ಅಣ್ಣಾವ್ರನ್ನು ಎಳೆದೊಯ್ದನು. ಸುದೀರ್ಘ 108 ದಿನಗಳ ಬಳಿಕ ಡಾ. ರಾಜ್ಕುಮಾರ್ ಅವರನ್ನು ಸುರಕ್ಷಿತವಾಗಿ ಮರಳಿ ಕರೆತರಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:00 am, Wed, 12 August 26




