
ವಿಕ್ಟರಿ ವೆಂಕಟೇಶ್ ನಟನೆಯ ಸೂಪರ್ ಹಿಟ್ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಮಲ್ಲೀಶ್ವರಿ’ ಬಿಡುಗಡೆಯಾಗಿ ಎರಡು ದಶಕಗಳೇ ಕಳೆದಿವೆ. ಈ ಚಿತ್ರದ ಮೂಲಕ ಕತ್ರಿನಾ ಕೈಫ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ರಾಜಕುಮಾರಿಯ ಪಾತ್ರದಲ್ಲಿ ಕತ್ರಿನಾ ಪ್ರೇಕ್ಷಕರ ಮನ ಗೆದ್ದಿದ್ದರೂ, ಆಕೆಯಿಂದ ನಟನೆ ತೆಗೆಸುವುದು ಅಷ್ಟು ಸುಲಭವಾಗಿರಲಿಲ್ಲ ಎಂದು ಚಿತ್ರದ ನಿರ್ದೇಶಕ ಕೆ. ವಿಜಯಭಾಸ್ಕರ್ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
‘ಕತ್ರಿನಾ ಕೈಫ್ ಅವರನ್ನು ನಿರ್ದೇಶಿಸುವುದು ಆರಂಭದಲ್ಲಿ ನನಗೆ ತುಂಬಾ ಕಷ್ಟವಾಗಿತ್ತು. ಅವರಿಗೆ ಯಾವುದೇ ರೀತಿಯ ಬಾಡಿ ಲಾಂಗ್ವೇಜ್ ಇರಲಿಲ್ಲ. ಅವರು ಬೆಳೆದ ವಾತಾವರಣವೇ ಬೇರೆ, ನಮ್ಮ ತೆಲುಗು ಸಂಸ್ಕೃತಿಯೇ ಬೇರೆ. ಹೀಗಾಗಿ ನಮ್ಮ ಭಾಗದ ಹುಡುಗಿ ಹೇಗೆ ಕೂರಬೇಕು, ಹೇಗೆ ನಟಿಸಬೇಕು ಎಂಬ ಕಲ್ಪನೆ ಅವರಿಗೆ ಇರಲಿಲ್ಲ. ಕೆಲವೊಮ್ಮೆ ಅವರು ಕೂರುವ ಶೈಲಿಯನ್ನು ನಾನೇ ತಿದ್ದಬೇಕಾಗುತ್ತಿತ್ತು. ರಾಜಕುಮಾರಿಗೆ ಇರಬೇಕಾದ ಗಾಂಭೀರ್ಯ, ಗೌರವ ಮತ್ತು ಪ್ರೀತಿಯನ್ನು ಅವರಲ್ಲಿ ತರುವುದು ಸವಾಲಾಗಿತ್ತು. ಆದರೆ, ಕತ್ರಿನಾ ತುಂಬಾ ಶ್ರಮಜೀವಿ. ಕಷ್ಟವಾದರೂ ಕಷ್ಟಪಟ್ಟು ಕೆಲಸ ಕಲಿತರು’ ಎಂದು ವಿಜಯಭಾಸ್ಕರ್ ನೆನಪಿಸಿಕೊಂಡಿದ್ದಾರೆ.
ಜಾಹೀರಾತೊಂದರಲ್ಲಿ ಕತ್ರಿನಾ ಅವರನ್ನು ನೋಡಿ ವಿಜಯಭಾಸ್ಕರ್ ಅವರೇ ಈ ಪಾತ್ರಕ್ಕೆ ಆಯ್ಕೆ ಮಾಡಿದ್ದರಂತೆ. ಮುಂಬೈಗೆ ಹೋಗಿ ಕಥೆ ಹೇಳಿದಾಗ ಕತ್ರಿನಾ ಒಪ್ಪಿದ್ದರು. ಆದರೆ, ತದನಂತರ ನಿರ್ಮಾಣ ಸಂಸ್ಥೆಯ ಜೊತೆ ಸಣ್ಣ ಭಿನ್ನಾಭಿಪ್ರಾಯ ಉಂಟಾಗಿ, ಅಡ್ವಾನ್ಸ್ ಹಣ ನೀಡಿದರೂ ಕತ್ರಿನಾ ಅದನ್ನು ನಿರಾಕರಿಸಿ ಸಿನಿಮಾದಿಂದ ಹಿಂದೆ ಸರಿದಿದ್ದರು.
ಇದನ್ನೂ ಓದಿ: ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್
ಕತ್ರಿನಾ ನಿರಾಕರಿಸಿದ ಬಳಿಕ ನಿರ್ಮಾಪಕ ಸುರೇಶ್ ಬಾಬು ಅವರು ಆ ಕಾಲದ ಬಹುತೇಕ ಎಲ್ಲಾ ಸುಂದರಿಯರನ್ನು ಆಡಿಷನ್ಗೆ ಕರೆಸಿದ್ದರು. ಆಗ ಎಲ್ಲರ ಮೊದಲ ಆಯ್ಕೆ ನಟಿ ಸೋನಾಲಿ ಬೇಂದ್ರೆ ಆಗಿದ್ದರು. ಆದರೆ, ವಿಜಯಭಾಸ್ಕರ್ ಅದಕ್ಕೆ ಒಪ್ಪಲಿಲ್ಲ. ‘ಸೋನಾಲಿ ಅದ್ಭುತ ನಟಿ, ಶಿಸ್ತಿನ ಸಿಪಾಯಿ. ಆದರೆ ನಾನು ಈಗಾಗಲೇ ನಾಗಾರ್ಜುನ ಜೊತೆ ‘ಮನ್ಮಥುಡು’ ಚಿತ್ರದಲ್ಲಿ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಿದ್ದೆ. ಮಲ್ಲೀಶ್ವರಿ ಪಾತ್ರಕ್ಕೆ ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಮುಖ ಬೇಕಿತ್ತು. ಆಗಲೇ ಜನರಿಗೆ ಆಕೆ ನಿಜವಾದ ರಾಜಕುಮಾರಿ ಎನಿಸಲು ಸಾಧ್ಯವಿತ್ತು. ಹೀಗಾಗಿ ಸಾಕಷ್ಟು ಹುಡುಕಾಟದ ನಂತರ ಮತ್ತೆ ಕತ್ರಿನಾ ಅವರನ್ನೇ ಮನವೊಲಿಸಿ ಸಿನಿಮಾಗೆ ಕರೆತರಲಾಯಿತು’ ಎಂದು ವಿಜಯಭಾಸ್ಕರ್ ತಿಳಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:45 am, Thu, 18 June 26