ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ

‘ರಾಮಾಯಣ’ ಸಿನಿಮಾ ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ರಣಬೀರ್ ಕಪೂರ್ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಅನಿಮಲ್’ ಯಶಸ್ಸಿನ ಬಳಿಕ ‘ರಾಮಾಯಣ’ ಚಿತ್ರದಲ್ಲಿ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಬಹಳ ನಿರೀಕ್ಷೆ ಇದೆ. ಈಗಾಗಲೇ ಪ್ರಚಾರ ಕಾರ್ಯ ಜೋರಾಗಿ ಶುರುವಾಗಿದೆ.

ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್​ಗಿಂತ ಉತ್ತಮ ನಟ ಯಾರೂ ಇಲ್ಲ: ನಮಿತ್ ಮಲ್ಹೋತ್ರಾ
Ranbir Kapoor
Image Credit source: Prime Focus Studios

Updated on: Apr 17, 2026 | 3:40 PM

ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಆ ಸಿನಿಮಾದ ಬಿಡುಗಡೆಗೂ ಮೊದಲೇ ಅವರು ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದಾರೆ. ಪ್ರತಿಷ್ಠಿತ ‘ಟೈಮ್’ (TIME) ಮ್ಯಾಗಜಿನ್ ಬಿಡುಗಡೆ ಮಾಡಿರುವ 2026ನೇ ಸಾಲಿನ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ರಣಬೀರ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ರಣಬೀರ್ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ‘ರಾಮಾಯಣ’ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ (Namit Malhotra) ಅವರು ರಣಬೀರ್ ಕುರಿತು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ರಣಬೀರ್ ಕಪೂರ್ ಮತ್ತು ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗಿನ ಫೋಟೋ ಹಂಚಿಕೊಂಡಿರುವ ನಮಿತ್, ‘ಶ್ರೀರಾಮನ ಪಾತ್ರವನ್ನು ನಿರ್ವಹಿಸಲು ನಿಮಗಿಂತ ಉತ್ತಮ ನಟ ಬೇರೊಬ್ಬರಿಲ್ಲ. ನೀವು ನಿಸ್ಸಂದೇಹವಾಗಿ ನಮ್ಮ ತಲೆಮಾರಿನ ಅತ್ಯುತ್ತಮ ನಟ’ ಎಂದು ಬಣ್ಣಿಸಿದ್ದಾರೆ. ಬೃಹತ್ ಬಜೆಟ್​​ನಲ್ಲಿ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ನಿತೇಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ‘ರಾಮಾಯಣ’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರ ಮಾಡುತ್ತಿದ್ದು, ರಾವಣನಾಗಿ ‘ರಾಕಿಂಗ್ ಸ್ಟಾರ್’ ಯಶ್ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಪಲ್ಲವಿ ಅವರು ಸೀತೆಯ ಪಾತ್ರ ಮಾಡುತ್ತಿದ್ದಾರೆ. ರವಿ ದುಬೆ ಅವರು ಲಕ್ಷ್ಮಣನಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಈಗಾಗಲೇ ಟೀಸರ್ ಮೂಲಕ ‘ರಾಮಾಯಣ’ ಸಿನಿಮಾ ಕೌತುಕ ಮೂಡಿಸಿದೆ. ಎರಡು ಪಾರ್ಟ್​ಗಳಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ‘ರಾಮಾಯಣ ಭಾಗ 1’ ಈ ವರ್ಷ ದೀಪಾವಳಿ ಹಬ್ಬದ ಪ್ರಯುಕ್ತ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ. ಈಗಾಗಲೇ ವಿದೇಶದಲ್ಲಿ ಈ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ.

ಇದನ್ನೂ ಓದಿ: ‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ರಣಬೀರ್ ಕಪೂರ್ ಅವರು ರಾಮನ ಪಾತ್ರ ಮಾಡುತ್ತಾರೆ ಎಂದಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿಂದಿನ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಅವರು ಗೋಮಾಂಸ ತಿನ್ನುವುದನ್ನು ಒಪ್ಪಿಕೊಂಡಿದ್ದರು. ಹಾಗಾಗಿ ವಿರೋಧ ಎದುರಾಗಿತ್ತು. ಅಂತಿಮವಾಗಿ ಅವರೇ ಶ್ರೀರಾಮನ ಪಾತ್ರಕ್ಕೆ ಆಯ್ಕೆ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us