ಸೌರವ್ ಗಂಗೂಲಿ ಬಯೋಪಿಕ್: ‘ದಾದಾ’ ಸಿನಿಮಾ ಶೂಟಿಂಗ್ ಆರಂಭಿಸಿದ ರಾಜ್‌ಕುಮಾರ್ ರಾವ್

ಕಡೆಗೂ ಸೌರವ್ ಗಂಗೂಲಿ ಬಯೋಪಿಕ್ ಚಿತ್ರೀಕರಣ ಶುರುವಾಗಿದೆ. ಶೀರ್ಷಿಕೆ ಏನು ಎಂಬುದು ಕೂಡ ಈಗ ಖಚಿತ ಆಗಿದೆ. ಈ ಬಗ್ಗೆ ನಟ ರಾಜ್​ಕುಮಾರ್ ರಾವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಅವರ ಮೇಲೆ ಅಭಿಮಾನಿಗಳಿಗೆ ಭರವಸೆ ಇದೆ.

ಸೌರವ್ ಗಂಗೂಲಿ ಬಯೋಪಿಕ್: ‘ದಾದಾ’ ಸಿನಿಮಾ ಶೂಟಿಂಗ್ ಆರಂಭಿಸಿದ ರಾಜ್‌ಕುಮಾರ್ ರಾವ್
Sourav Ganguly, Rajkummar Rao

Updated on: Apr 01, 2026 | 7:35 PM

ಭಾರತೀಯ ಕ್ರಿಕೆಟ್ ಕಂಡ ಯಶಸ್ವಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಜೀವನದ ಕಥೆ ಬೆಳ್ಳಿತೆರೆಯ ಮೇಲೆ ಬರಲು ಸಿದ್ಧವಾಗುತ್ತಿದೆ. ಸೌರವ್ ಗಂಗೂಲಿ ಬಯೋಪಿಕ್ (Sourav Ganguly Biopic) ಬಗ್ಗೆ ಮೊದಲಿನಿಂದಲೂ ಸುದ್ದಿಗಳು ಕೇಳಿಬರುತ್ತಲೇ ಇತ್ತು. ಈಗ ಆ ಸಿನಿಮಾಗೆ ಶೀರ್ಷಿಕೆ ಏನೆಂಬುದು ಬಹಿರಂಗ ಆಗಿದೆ. ಈ ಚಿತ್ರಕ್ಕೆ ‘ದಾದಾ’ (Dada) ಎಂದು ಶೀರ್ಷಿಕೆ ಇಡಲಾಗಿದೆ. ಇದು ಬಹುನಿರೀಕ್ಷಿತ ಬಯೋಪಿಕ್. ಬುಧವಾರ (ಏಪ್ರಿಲ್ 1) ಈ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ನಟ ರಾಜ್​ಕುಮಾರ್ ರಾವ್ (Rajkummar Rao) ಅವರು ಈ ಚಿತ್ರದಲ್ಲಿ ಸೌರವ್ ಗಂಗೂಲಿ ಪಾತ್ರ ಮಾಡುತ್ತಿದ್ದಾರೆ.

ಶೂಟಿಂಗ್ ಆರಂಭ ಆಗಿರುವ ಬಗ್ಗೆ ಮತ್ತು ಶೀರ್ಷಿಕೆ ಬಗ್ಗೆ ರಾಜ್​ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ನೀಡಿದ್ದಾರೆ. ‘ಇದೀಗ ಆರಂಭ ಆಗಿದೆ. ಒನ್ ಆ್ಯಂಡ್ ಓನ್ಲಿ ದಾದಾ’ ಎಂದು ಪೋಸ್ಟ್ ಮಾಡಿರುವ ಅವರು ಸಿನಿಮಾದ ಕ್ಲ್ಯಾಪ್ ಬೋರ್ಡ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

2025ರಲ್ಲಿ ಗಂಗೂಲಿ ಅವರೇ ಈ ಸಿನಿಮಾದ ಬಗ್ಗೆ ಸುಳಿವು ನೀಡಿದ ನಂತರ, ರಾಜ್‌ಕುಮಾರ್ ರಾವ್ ಅಧಿಕೃತವಾಗಿ ತಾವು ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ‘ದಾದಾ ಅವರೇ ಇದನ್ನು ಈಗಾಗಲೇ ಹೇಳಿದ್ದಾರೆ. ಹಾಗಾಗಿ ನಾನು ಅಧಿಕೃತವಾಗಿ ಖಚಿತಪಡಿಸುತ್ತಿದ್ದೇನೆ. ಗಂಗೂಲಿ ಪಾತ್ರವನ್ನು ನಿರ್ವಹಿಸುವುದು ಒಂದು ದೊಡ್ಡ ಜವಾಬ್ದಾರಿ. ನನಗೆ ಸ್ವಲ್ಪ ಆತಂಕವಿದ್ದರೂ, ಈ ಪಯಣವು ಬಹಳ ಮಜವಾಗಿರಲಿದೆ’ ಎಂದು ತಿಳಿಸಿದ್ದರು.

ಪಾತ್ರಕ್ಕಾಗಿ ಪರಕಾಯ ಪ್ರವೇಶ ಮಾಡುವಲ್ಲಿ ರಾಜ್‌ಕುಮಾರ್ ರಾವ್ ಸದಾ ಸಿದ್ಧ. ಫೆಬ್ರವರಿ ತಿಂಗಳಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್‌ಕುಮಾರ್ ರಾವ್ ಅವರ ಹೇರ್ ಸ್ಟೈಲ್ ಮತ್ತು ದೇಹದ ತೂಕ ಹೆಚ್ಚಿದ್ದು ಕಂಡು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು. ಆದರೆ, ಇವೆಲ್ಲವೂ ಸೌರವ್ ಗಂಗೂಲಿ ಪಾತ್ರದ ಸಿದ್ಧತೆಗಾಗಿ ಎಂದು ಈಗ ಬಹಿರಂಗವಾಗಿದೆ.

ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ ದಾದಾ; ಸೌರವ್ ಗಂಗೂಲಿಗೆ ಮುಖ್ಯ ಕೋಚ್ ಹುದ್ದೆ

ತಮ್ಮ ದೈಹಿಕ ಬದಲಾವಣೆಯ ಬಗ್ಗೆ ವಿವರಿಸಿದ ರಾಜ್‌ಕುಮಾರ್ ರಾವ್, ‘ನನ್ನ ಹಿಂದಿನ ಸಿನಿಮಾ ‘ನಿಕಮ್’ ಸಲುವಾಗಿನಾನು ಸುಮಾರು 9-10 ಕೆಜಿ ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಎರಡು ಪಿಜ್ಜಾ, ಸಾಕಷ್ಟು ಸಿಹಿತಿಂಡಿ, ಆಲೂ ಪರೋಟ ಮತ್ತು ಬಿರಿಯಾನಿ ಸೇವಿಸುತ್ತಿದ್ದೆ. ಈಗ ತಕ್ಷಣವೇ ಗಂಗೂಲಿ ಆಗಿ ಬದಲಾಗುತ್ತಿದ್ದೇನೆ. ಸಿನಿಮಾ ತೆರೆಕಂಡಾಗ ಈ ಕಠಿಣ ಶ್ರಮ ನಿಮಗೆ ತಿಳಿಯಲಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us