
ಆದಿತ್ಯ ಧರ್ ನಿರ್ದೇಶನದ ಹಾಗೂ ರಣವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಹಾಗೂ ‘ಧುರಂಧರ್ 2’ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಬರೆದಿವೆ. ಎರಡು ಭಾಗಗಳ ಭರ್ಜರಿ ಯಶಸ್ಸಿನ ನಂತರ, ‘ಧುರಂಧರ್ 3’ (Dhurandhar 3) ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಈ ಬೆನ್ನಲ್ಲೇ ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರ ಮಾಡಿ ಗಮನ ಸೆಳೆದಿದ್ದ ಹಿರಿಯ ನಟ ರಾಕೇಶ್ ಬೇಡಿ (Rakesh Bedi) ಅವರು ಮೂರನೇ ಭಾಗದ ಸಾಧ್ಯತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ‘ಜೂಮ್’ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಾಕೇಶ್ ಬೇಡಿ, ‘ಮೂರನೇ ಭಾಗ ಬರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ, ಕಥೆಯ ಅಂತ್ಯದಲ್ಲಿ ಗೂಢಚಾರಿ ತನ್ನ ದೇಶಕ್ಕೆ ಮರಳುತ್ತಾನೆ. ಕಥೆ ಅಲ್ಲಿಗೆ ಪೂರ್ಣಗೊಂಡಿದೆ’ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ದಾರೆ.
ಆದರೆ, ರಾಕೇಶ್ ಬೇಡಿ ಅವರು ಒಂದು ಆಶಾದಾಯಕ ಮಾತು ಕೂಡ ಆಡಿದ್ದಾರೆ. ‘ಧುರಂಧರ್ ಎಂಬುದು ಒಂದು ದೊಡ್ಡ ಫ್ರಾಂಚೈಸಿ. ಹಾಗಾಗಿ ಮುಂದಿನ ದಿನಗಳಲ್ಲಿ ಬೇರೆ ನಟರನ್ನು ಬಳಸಿಕೊಂಡು ಹೊಸ ಕಥೆಯೊಂದಿಗೆ ಈ ಫ್ರಾಂಚೈಸಿಯನ್ನು ಮುಂದುವರಿಸುವ ಸಾಧ್ಯತೆ ಯಾವಾಗಲೂ ಇರುತ್ತದೆ’ ಎಂದಿದ್ದಾರೆ. ಈ ಬಗ್ಗೆ ನಿರ್ದೇಶಕ ಆದಿತ್ಯ ಧರ್ ಏನು ಹೇಳುತ್ತಾರೆ ಎಂಬುದನ್ನು ಕಾದುನೋಡಬೇಕು.
ಚಿತ್ರದಲ್ಲಿ ಜಮೀಲ್ ಜಮಾಲಿ ಪಾತ್ರವು ಪಾಕಿಸ್ತಾನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಗೂಢಚಾರಿ ಎಂಬ ಟ್ವಿಸ್ಟ್ ಪ್ರೇಕ್ಷಕರಿಗೆ ದೊಡ್ಡ ಸರ್ಪ್ರೈಸ್ ನೀಡಿತ್ತು. ಈ ಬಗ್ಗೆ ಮಾತನಾಡಿದ ರಾಕೇಶ್ ಬೇಡಿ ಅವರು, ‘ನಾವು ಆ ದೃಶ್ಯವನ್ನು ಚಿತ್ರೀಕರಿಸುವಾಗ ಅದು ಸಾಮಾನ್ಯ ಎನಿಸಿತ್ತು. ಆದರೆ ಪ್ರೇಕ್ಷಕರ ದೃಷ್ಟಿಕೋನವೇ ಬೇರೆಯಾಗಿತ್ತು. ಮೊದಲ ಭಾಗ ಹಿಟ್ ಆದ ಕಾರಣ, ಎರಡನೇ ಭಾಗದ ಮೇಲೆ ಅತೀವ ನಿರೀಕ್ಷೆ ಇತ್ತು. ಈಗ ಜನರು ಮೂರನೇ ಭಾಗಕ್ಕಾಗಿ ಕಾಯುತ್ತಿರುವುದು ಸಹಜ’ ಎಂದಿದಾರೆ.
ಇದನ್ನೂ ಓದಿ: ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್
‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳನ್ನು ಸೇರಿಸಿ ಜಾಗತಿಕವಾಗಿ 3,000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಆಗಿದೆ. 2025ರ ಡಿಸೆಂಬರ್ನಲ್ಲಿ ತೆರೆಕಂಡ ‘ಧುರಂಧರ್’ ಚಿತ್ರ 1,300 ಕೋಟಿ ರೂಪಾಯಿ ಗಳಿಸಿತು. ಈ ವರ್ಷ ಮಾರ್ಚ್ ತಿಂಗಳಲ್ಲಿ ಬಿಡುಗಡೆ ಆದ ‘ಧುರಂಧರ್ 2’ ಸಿನಿಮಾ ಜಾಗತಿಕವಾಗಿ ಇದು 1,700 ಕೋಟಿ ರೂಪಾಯಿಗೂ ಅಧಿಕ ಹಣ ಬಾಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.