ರಣವೀರ್ ಸಿಂಗ್, ಆದಿತ್ಯ ಧರ್ ಮೇಲೆ ಕೆಟ್ಟ ದೃಷ್ಟಿ: ಪರಿಹಾರ ಸೂಚಿಸಿದ ಸಂದೀಪ್ ರೆಡ್ಡಿ ವಂಗ
‘ಧುರಂಧರ್ 2’ ಸಿನಿಮಾದ ಯಶಸ್ಸಿನಿಂದ ನಿರ್ದೇಶಕ ಆದಿತ್ಯ ಧರ್ ಮತ್ತು ನಟ ರಣವೀರ್ ಸಿಂಗ್ ಅವರಿಗೆ ಕೆಟ್ಟ ದೃಷ್ಟಿ ಆಗಿದೆ ಎಂದು ಸಂದೀಪ್ ರೆಡ್ಡಿ ವಂಗ ಹೇಳಿದ್ದಾರೆ. ಅದನ್ನು ತೆಗೆಯಲು ಏನು ಮಾಡಬೇಕು ಎಂದು ಕೂಡ ಅವರೇ ಸೂಚಿಸಿದ್ದಾರೆ. ಇತ್ತೀಚೆಗೆ ‘ಧುರಂಧರ್ 2’ ಸಿನಿಮಾ ನೋಡಿದ ಬಳಿಕ ಅವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ನೇರ ಮಾತುಗಳಿಗೆ ಹೆಸರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga), ಈಗ ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇತ್ತೀಚೆಗೆ ಹೈದರಾಬಾದ್ನ ಅಲ್ಲು ಸಿನಿಮಾದಲ್ಲಿ ಪ್ರಭಾಸ್ ಜೊತೆ ಸೇರಿ ಅವರು ಈ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಧುರಂಧರ್ 2’ ಬಗ್ಗೆ ಅವರು ಭರಪೂರ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ (Aditya Dhar) ಅವರಿಗೆ ಕೆಟ್ಟ ದೃಷ್ಟಿ ಆಗಿದೆ ಎಂದು ಕೂಡ ಸಂದೀಪ್ ರೆಡ್ಡಿ ವಂಗ ಹೇಳಿದ್ದಾರೆ.
ಈ ಚಿತ್ರವನ್ನು ಪ್ರೊಪಗಾಂಡಾ ಎಂದು ಕರೆಯುತ್ತಿರುವವರ ವಿರುದ್ಧ ಸಂದೀಪ್ ರೆಡ್ಡಿ ವಂಗ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. ‘ಕೆಲವು ಬರಹಗಾರರು ಮತ್ತು ನಟರು ಪ್ರೊಪಗಾಂಡಾ ಮೂಲಕವೇ ತಮ್ಮ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದಾರೆ. ಆಗ ಚಿತ್ರರಂಗ ಸುಮ್ಮನಿತ್ತು. ಆದರೆ ಈಗ ಅದೇ ಗುಂಪು ಧುರಂಧರ್ ಚಿತ್ರವನ್ನು ವ್ಯಂಗ್ಯ ಮಾಡುತ್ತಿದೆ. ಸತ್ಯವನ್ನು ಯಾವಾಗ ಪ್ರೊಪಗಾಂಡಾ ಎಂದು ಕರೆಯಲು ಆರಂಭಿಸಿದರೋ ತಿಳಿಯುತ್ತಿಲ್ಲ. ನಿಮ್ಮ ಮೊದಲ ಪ್ರತಿಕ್ರಿಯೆಯೇ ವ್ಯಂಗ್ಯ ಮಾಡುವುದಾಗಿದ್ದರೆ, ನಿಮ್ಮನ್ನು ನೀವು ಲಿಬರಲ್ ಎಂದು ಕರೆದುಕೊಳ್ಳುವ ಹಕ್ಕಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಂದೀಪ್ ರೆಡ್ಡಿ ವಂಗ ಅವರು, ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರಿಗೆ ವಿಚಿತ್ರ ಶೈಲಿಯಲ್ಲಿ ಶುಭ ಹಾರೈಸಿದ್ದಾರೆ. ‘ಈ ಕೆಟ್ಟ ದೃಷ್ಟಿ ಸುಲಭವಾಗಿ ಹೋಗುವುದಿಲ್ಲ. ಬರೀ ಒಂದು ಹಿಡಿ ಕೆಂಪು ಮೆಣಸಿನಕಾಯಿ ಸಾಲದು, ಇಡೀ ಹೊಲವನ್ನೇ ಸುಡಬೇಕಾಗುತ್ತದೆ. ಅಷ್ಟರಮಟ್ಟಿಗೆ ಸಿನಿಮಾ ಅದ್ಭುತವಾಗಿದೆ’ ಎಂದು ಹೇಳುವ ಮೂಲಕ ಚಿತ್ರದ ಯಶಸ್ಸನ್ನು ಕೊಂಡಾಡಿದ್ದಾರೆ.
Writers & actors built careers on propaganda, and the industry stayed quiet like cats. Now the same clan mock Dhurandhar. You don’t get to call yourself liberal if your first instinct is to Mock. Don’t know when truth started getting labeled as propaganda…… strange times.…
— Sandeep Reddy Vanga (@imvangasandeep) April 9, 2026
ಸಂದೀಪ್ ರೆಡ್ಡಿ ವಂಗ ಅವರ ಈ ಬೆಂಬಲಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆದಿತ್ಯ ಧರ್, ‘ನನ್ನ ಪ್ರೀತಿಯ ಸಂದೀಪ್, ನೀವು ನಿಮ್ಮ ನಿಲುವಿಗೆ ಬದ್ಧವಾಗಿ ನಿಲ್ಲುವ ರೀತಿ ಮತ್ತು ಸಮಯ ಬಂದಾಗ ತಿರುಗೇಟು ನೀಡುವ ಶೈಲಿ ನನಗೆ ಇಷ್ಟ. ನಿಮ್ಮ ಪ್ರಾಮಾಣಿಕತೆ ಮತ್ತು ಸಿನಿಮಾದ ಮೇಲಿರುವ ನಂಬಿಕೆಯನ್ನು ನಾನು ಗೌರವಿಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಶಿವಣ್ಣ ಬೆನ್ನು ತಟ್ಟಿದ್ದಕ್ಕೆ ಖುಷಿಯಾದ ‘ಧುರಂಧರ್ 2’ ನಿರ್ದೇಶಕ ಆದಿತ್ಯ ಧರ್
ಬುಧವಾರ (ಏಪ್ರಿಲ್ 8) ರಾತ್ರಿ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗ ಅವರು ಸಾಮಾನ್ಯ ಪ್ರೇಕ್ಷಕರಂತೆ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಸಿನಿಮಾ ಮುಗಿದ ನಂತರವೂ ಅವರು ಪೋಸ್ಟ್-ಕ್ರೆಡಿಟ್ ದೃಶ್ಯಗಳನ್ನು ನೋಡುತ್ತಾ ನಿಂತಿದ್ದು ಅಭಿಮಾನಿಗಳ ಗಮನ ಸೆಳೆದಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




