ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು

ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿಲ್ಲ. ಅವರೆಲ್ಲ ಮೌನಕ್ಕೆ ಜಾರಿರುವುದಕ್ಕೆ ರಾಮ್ ಗೋಪಾಲ್ ವರ್ಮಾ ಅವರು ಗರಂ ಆಗಿದ್ದಾರೆ. ಯಾರ ಹೆಸರನ್ನೂ ಅವರು ಪ್ರಸ್ತಾಪಿಸದೇ ಬಾಲಿವುಡ್ ಮಂದಿಗೆ ಮಾತಿನ ಚಾಟಿ ಬೀಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು
Ram Gopal Varma, Ranveer Singh

Updated on: Mar 30, 2026 | 7:26 PM

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಈಗಾಗಲೇ ಜಾಗತಿಕವಾಗಿ 1,300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹಳೇ ದಾಖಲೆಗಳನ್ನೆಲ್ಲ ಮುರಿದಿದೆ. ಆದರೆ, ಈ ಯಶಸ್ಸಿನ ನಡುವೆಯೂ ಬಾಲಿವುಡ್ ಮಂದಿ ತೋರುತ್ತಿರುವ ಮೌನ ಈಗ ಚರ್ಚೆಗೆ ಕಾರಣವಾಗಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಬಾಲಿವುಡ್ ಮಂದಿಯ ಈ ಮೌನದ ವಿರುದ್ಧ ಕಿಡಿಕಾರಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವರ್ಮಾ, ‘ಆದಿತ್ಯ ಧರ್ ಈಗಾಗಲೇ ಚಿತ್ರರಂಗದ ಅಡಿಯಲ್ಲಿ ಪರಮಾಣು ಬಾಂಬ್ ಸಿಡಿಸಿದ್ದಾರೆ. ಆದರೆ ಇಡೀ ಇಂಡಸ್ಟ್ರಿ ಈ ಬಗ್ಗೆ ವಹಿಸಿರುವ ಭಯಾನಕ ಮೌನ ನನಗೆ ಆಘಾತ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ‘ಈ ಸಿನಿಮಾವನ್ನು ನೋಡಿ ಕಲಿಯಿರಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.

‘ಧುರಂಧರ್ 2 ಸಿನಿಮಾದ ಸ್ಫೋಟಕ್ಕೆ ಚಿತ್ರರಂಗದವರೆಲ್ಲರೂ ಬಾಹ್ಯಾಕಾಶಕ್ಕೆ ಹಾರಿ ಹೋಗಿದ್ದಾರಾ? ಅದಕ್ಕಾಗಿಯೇ ಅವರ ಚಪ್ಪಾಳೆ ನಮಗೆ ಕೇಳಿಸುತ್ತಿಲ್ಲವೇ? ಅಥವಾ ಇದೊಂದು ಕೇವಲ ಪ್ರೊಪಗಾಂಡ ಎಂದು ಭ್ರಮೆಯಲ್ಲಿದ್ದಾರಾ? ಅಥವಾ ಈ ಚಿತ್ರದ ಅದ್ಭುತ ಮೇಕಿಂಗ್ ನೋಡಿ ತಾವಿನ್ನು ಮುಂದೆ ಇಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಪಾರ್ಶ್ವವಾಯು ಪೀಡಿತರಾಗಿದ್ದಾರಾ’ ಎಂದು ಆರ್‌.ಜಿ.ವಿ. ವ್ಯಂಗ್ಯವಾಡಿದ್ದಾರೆ.

ಈ ಚಿತ್ರದ ಯಶಸ್ಸನ್ನು ಕಡೆಗಣಿಸುವುದು ಮೂರ್ಖತನ ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ನಿಮ್ಮ ಕಣ್ಣೆದುರೇ ಬೆಂಕಿ ಉಗುಳುತ್ತಿರುವ ಡೈನೋಸಾರ್‌ನಂತಹ ಈ ಸಿನಿಮಾವನ್ನು ಕಡೆಗಣಿಸಲು ಹೇಗೆ ಸಾಧ್ಯ? ಈ ಸಿನಿಮಾದ ಬಾಕ್ಸ್ ಆಫೀಸ್ ಸದ್ದು ನಿಮ್ಮ ಕಾಲ ಕೆಳಗಿನ ನೆಲವನ್ನೇ ನಡುಗಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್​ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ

‘ನನ್ನ ಎಲ್ಲಾ ಸಿನಿಮಾ ಮಿತ್ರರಿಗೆ ಒಂದು ಸಲಹೆ. ಇದು ಸಿನಿಮಾ ಮೇಕಿಂಗ್‌ನ ಹೊಸ ಕೋರ್ಸ್ ಇದ್ದಂತೆ. ದಯವಿಟ್ಟು ಧುರಂಧರ್ 2 ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿ. ಇಲ್ಲವಾದರೆ 2026ರ ಮಾರ್ಚ್ 19ರ ನಂತರದ ಸಿನಿಮಾದ ಸ್ಮಶಾನದಲ್ಲಿ ನೀವು ಹೂತುಹೋಗುತ್ತೀರಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಎಸ್.ಎಸ್. ರಾಜಮೌಳಿ, ಕರಣ್ ಜೋಹರ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us