ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು

ಹಿಂದಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ‘ಧುರಂಧರ್ 2’ ಸಿನಿಮಾದ ಗೆಲುವನ್ನು ಸಂಭ್ರಮಿಸುತ್ತಿಲ್ಲ. ಅವರೆಲ್ಲ ಮೌನಕ್ಕೆ ಜಾರಿರುವುದಕ್ಕೆ ರಾಮ್ ಗೋಪಾಲ್ ವರ್ಮಾ ಅವರು ಗರಂ ಆಗಿದ್ದಾರೆ. ಯಾರ ಹೆಸರನ್ನೂ ಅವರು ಪ್ರಸ್ತಾಪಿಸದೇ ಬಾಲಿವುಡ್ ಮಂದಿಗೆ ಮಾತಿನ ಚಾಟಿ ಬೀಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಧುರಂಧರ್ ನೋಡಿ ಕಲಿಯಿರಿ: ಮೌನ ತಾಳಿದ ಬಾಲಿವುಡ್ ಮಂದಿಗೆ ಆರ್​ಜಿವಿ ಖಡಕ್ ಮಾತು
Ram Gopal Varma, Ranveer Singh

Updated on: Mar 30, 2026 | 7:26 PM

ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ ದಿನದಿಂದಲೂ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ಈ ಸಿನಿಮಾ, ಈಗಾಗಲೇ ಜಾಗತಿಕವಾಗಿ 1,300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ ಹಳೇ ದಾಖಲೆಗಳನ್ನೆಲ್ಲ ಮುರಿದಿದೆ. ಆದರೆ, ಈ ಯಶಸ್ಸಿನ ನಡುವೆಯೂ ಬಾಲಿವುಡ್ ಮಂದಿ ತೋರುತ್ತಿರುವ ಮೌನ ಈಗ ಚರ್ಚೆಗೆ ಕಾರಣವಾಗಿದೆ. ಸದಾ ವಿವಾದಿತ ಹೇಳಿಕೆಗಳಿಂದ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಅವರು ಬಾಲಿವುಡ್ ಮಂದಿಯ ಈ ಮೌನದ ವಿರುದ್ಧ ಕಿಡಿಕಾರಿದ್ದಾರೆ.

ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ವರ್ಮಾ, ‘ಆದಿತ್ಯ ಧರ್ ಈಗಾಗಲೇ ಚಿತ್ರರಂಗದ ಅಡಿಯಲ್ಲಿ ಪರಮಾಣು ಬಾಂಬ್ ಸಿಡಿಸಿದ್ದಾರೆ. ಆದರೆ ಇಡೀ ಇಂಡಸ್ಟ್ರಿ ಈ ಬಗ್ಗೆ ವಹಿಸಿರುವ ಭಯಾನಕ ಮೌನ ನನಗೆ ಆಘಾತ ತಂದಿದೆ’ ಎಂದು ಬರೆದುಕೊಂಡಿದ್ದಾರೆ. ‘ಈ ಸಿನಿಮಾವನ್ನು ನೋಡಿ ಕಲಿಯಿರಿ’ ಎಂದು ಅವರು ಕಿವಿಮಾತು ಹೇಳಿದ್ದಾರೆ.

‘ಧುರಂಧರ್ 2 ಸಿನಿಮಾದ ಸ್ಫೋಟಕ್ಕೆ ಚಿತ್ರರಂಗದವರೆಲ್ಲರೂ ಬಾಹ್ಯಾಕಾಶಕ್ಕೆ ಹಾರಿ ಹೋಗಿದ್ದಾರಾ? ಅದಕ್ಕಾಗಿಯೇ ಅವರ ಚಪ್ಪಾಳೆ ನಮಗೆ ಕೇಳಿಸುತ್ತಿಲ್ಲವೇ? ಅಥವಾ ಇದೊಂದು ಕೇವಲ ಪ್ರೊಪಗಾಂಡ ಎಂದು ಭ್ರಮೆಯಲ್ಲಿದ್ದಾರಾ? ಅಥವಾ ಈ ಚಿತ್ರದ ಅದ್ಭುತ ಮೇಕಿಂಗ್ ನೋಡಿ ತಾವಿನ್ನು ಮುಂದೆ ಇಂತಹ ಸಿನಿಮಾ ಮಾಡಲು ಸಾಧ್ಯವಿಲ್ಲ ಎಂದು ಪಾರ್ಶ್ವವಾಯು ಪೀಡಿತರಾಗಿದ್ದಾರಾ’ ಎಂದು ಆರ್‌.ಜಿ.ವಿ. ವ್ಯಂಗ್ಯವಾಡಿದ್ದಾರೆ.

ಈ ಚಿತ್ರದ ಯಶಸ್ಸನ್ನು ಕಡೆಗಣಿಸುವುದು ಮೂರ್ಖತನ ಎಂದು ರಾಮ್ ಗೋಪಾಲ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ನಿಮ್ಮ ಕಣ್ಣೆದುರೇ ಬೆಂಕಿ ಉಗುಳುತ್ತಿರುವ ಡೈನೋಸಾರ್‌ನಂತಹ ಈ ಸಿನಿಮಾವನ್ನು ಕಡೆಗಣಿಸಲು ಹೇಗೆ ಸಾಧ್ಯ? ಈ ಸಿನಿಮಾದ ಬಾಕ್ಸ್ ಆಫೀಸ್ ಸದ್ದು ನಿಮ್ಮ ಕಾಲ ಕೆಳಗಿನ ನೆಲವನ್ನೇ ನಡುಗಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಜಾತಿ, ಧರ್ಮ ಮುಖ್ಯವಲ್ಲ’; ರೆಹಮಾನ್​ಗೆ ತಿರುಗೇಟು ಕೊಟ್ಟ ರಾಮ್ ಗೋಪಾಲ್ ವರ್ಮ

‘ನನ್ನ ಎಲ್ಲಾ ಸಿನಿಮಾ ಮಿತ್ರರಿಗೆ ಒಂದು ಸಲಹೆ. ಇದು ಸಿನಿಮಾ ಮೇಕಿಂಗ್‌ನ ಹೊಸ ಕೋರ್ಸ್ ಇದ್ದಂತೆ. ದಯವಿಟ್ಟು ಧುರಂಧರ್ 2 ಸಿನಿಮಾವನ್ನು ಗಂಭೀರವಾಗಿ ಅಧ್ಯಯನ ಮಾಡಿ. ಇಲ್ಲವಾದರೆ 2026ರ ಮಾರ್ಚ್ 19ರ ನಂತರದ ಸಿನಿಮಾದ ಸ್ಮಶಾನದಲ್ಲಿ ನೀವು ಹೂತುಹೋಗುತ್ತೀರಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಎಸ್.ಎಸ್. ರಾಜಮೌಳಿ, ಕರಣ್ ಜೋಹರ್, ಆಲಿಯಾ ಭಟ್ ಮುಂತಾದವರು ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us