ದಾಖಲೆ ಬರೆದ ಧುರಂಧರ್ 2: ಭಾರತದಲ್ಲಿ 1000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ

ನಿರೀಕ್ಷೆಯಂತೆಯೇ ‘ಧುರಂಧರ್ 2’ ಸಿನಿಮಾದ ಕಲೆಕ್ಷನ್ ಭಾರತದಲ್ಲಿ 1000 ಕೋಟಿ ರೂಪಾಯಿ ಗಡಿ ದಾಟಿದೆ. ಆ ಮೂಲಕ ಹಲವು ಸಿನಿಮಾಗಳ ಹಳೆಯ ದಾಖಲೆಗಳನ್ನು ಈ ಚಿತ್ರ ಅಳಿಸಿ ಹಾಕಿದೆ. ರಣವೀರ್ ಸಿಂಗ್ ಅವರಿಗೆ ‘ಧುರಂಧರ್ 2’ ಸಿನಿಮಾದಿಂದ ಅತಿ ದೊಡ್ಡ ಸಕ್ಸಸ್ ಸಿಕ್ಕಿದೆ.

ದಾಖಲೆ ಬರೆದ ಧುರಂಧರ್ 2: ಭಾರತದಲ್ಲಿ 1000 ಕೋಟಿ ರೂ. ಗಳಿಸಿದ ಮೊದಲ ಹಿಂದಿ ಸಿನಿಮಾ
Ranveer Singh

Updated on: Apr 06, 2026 | 5:45 PM

ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ಕಾಂಬಿನೇಷನ್​​ನಲ್ಲಿ ಬಂದ ‘ಧುರಂಧರ್ 2’ ಸಿನಿಮಾ ಅಕ್ಷರಶಃ ಹೊಸ ಇತಿಹಾಸ ಬರೆದಿದೆ. ಭಾರತೀಯ ಬಾಕ್ಸ್ ಆಫೀಸ್ ಇತಿಹಾಸದಲ್ಲೇ 1000 ಕೋಟಿ ರೂಪಾಯಿ ನಿವ್ವಳ ಗಳಿಕೆ (Box Office Collection) ಮಾಡಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಸಿನಿಮಾ ಪಾತ್ರವಾಗಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ, ಮೂರನೇ ವಾರದಲ್ಲೂ ತನ್ನ ನಾಗಾಲೋಟವನ್ನು ಮುಂದುವರಿಸಿದೆ. ಪ್ರೇಕ್ಷಕರನ್ನು ಥಿಯೇಟರ್‌ಗಳತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲೇ 1000 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದಕ್ಕೆ ‘ಧುರಂಧರ್ 2’ (Dhurandhar 2) ಚಿತ್ರತಂಡಕ್ಕೆ ಖುಷಿ ಆಗಿದೆ.

ವರದಿಗಳ ಪ್ರಕಾರ, ‘ಧುರಂಧರ್ 2’ ಸಿನಿಮಾ ಬಿಡುಗಡೆಯಾಗಿ 18ನೇ ದಿನ (ಏಪ್ರಿಲ್ 5) ಬರೋಬ್ಬರಿ 28.75 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ವಾರದಲ್ಲೂ ಈ ಮಟ್ಟದ ಗಳಿಕೆ ಮಾಡಿರುವುದು ಚಿತ್ರರಂಗವನ್ನು ಬೆರಗುಗೊಳಿಸಿದೆ. ಮೊದಲ ವಾರ 674 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ವಾರ 263.65 ಕೋಟಿ ರೂಪಾಯಿ ಸೇರ್ಪಡೆ ಆಯಿತು.

ಈವರೆಗೂ ‘ಧುರಂಧರ್ 2’ ಸಿನಿಮಾಗೆ ಭಾರತದಲ್ಲಿ ಆಗಿರುವ ಒಟ್ಟು ಗಳಿಕೆ (Gross) 1,209 ಕೋಟಿ ರೂಪಾಯಿ. ಭಾರತದಲ್ಲಿನ ನಿವ್ವಳ ಗಳಿಕೆ (Net) 1,013 ಕೋಟಿ ಎಂಬ ಮಾಹಿತಿ ಸಿಕ್ಕಿದೆ. ‘ಧುರಂಧರ್ 2’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಮೊದಲ ವಾರದಲ್ಲೇ 1000 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

‘ಧುರಂಧರ್ 2’ ಚಿತ್ರವು ಈಗಾಗಲೇ ಭಾರತದ ಬ್ಲಾಕ್‌ಬಸ್ಟರ್ ಸಿನಿಮಾಗಳಾದ ‘ಆರ್​ಆರ್​ಆರ್​’ (782.20 ಕೋಟಿ ರೂ.), ‘ಕಲ್ಕಿ 2898 AD’ (646 ಕೋಟಿ ರೂ.), ‘ಕೆಜಿಎಫ್: ಚಾಪ್ಟರ್ 2’ (859.70 ಕೋಟಿ ರೂ.), ಜವಾನ್ ಮತ್ತು ಪಠಾಣ್ ಚಿತ್ರಗಳ ಲೈಫ್‌ಟೈಮ್ ಕಲೆಕ್ಷನ್ ಹಿಂದಿಕ್ಕಿದೆ. 1,030 ಕೋಟಿ ರೂಪಾಯಿ ಗಳಿಸಿದ್ದ ‘ಬಾಹುಬಲಿ 2’ ದಾಖಲೆಯನ್ನು ಮುರಿಯಲು ಸಜ್ಜಾಗಿರುವ ಈ ಚಿತ್ರ, ನಂತರ ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ (1,234 ಕೋಟಿ ರೂ.) ದಾಖಲೆಯನ್ನು ಮೀರಿಸುತ್ತದೆಯೇ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ ಅವರು ಭಾರತೀಯ ಗೂಢಚಾರನಾಗಿ ನಟಿಸಿದ್ದಾರೆ. ಪಾಕಿಸ್ತಾನದ ಭೂಗತ ಲೋಕಕ್ಕೆ ನುಗ್ಗಿ ಭಾರತವನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ ಜಾಲವನ್ನು ಮಟ್ಟಹಾಕುವ ರೋಚಕ ಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ರಣವೀರ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ಸಾರಾ ಅರ್ಜುನ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us