ಶಿವಾಜಿ ಚಿತ್ರವಿರುವ ಟಿ-ಶರ್ಟ್ ಧರಿಸಿ ರಿತೇಶ್ ದೇಶ್‌ಮುಖ್ ಪಾರ್ಟಿ; ಕ್ಷಮೆ ಕೇಳಿದ ನಟ

ಖ್ಯಾತ ನಟ ರಿತೇಶ್ ದೇಶ್‌ಮುಖ್ ಅವರ ಮೇಲೆ ಒಂದು ಗಂಭೀರ ಆರೋಪ ಕೇಳಿಬಂದಿತ್ತು. ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿದ ಅವರು ಎಣ್ಣೆ ಪಾರ್ಟಿ ಮಾಡಿದ್ದರು ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಆ ಆರೋಪವನ್ನು ರಿತೇಶ್ ದೇಶ್‌ಮುಖ್ ಅವರು ತಳ್ಳಿಹಾಕಿದ್ದಾರೆ. ವೈರಲ್ ವಿಡಿಯೋಗೆ ಅವರು ಸ್ಪಷ್ಟನೆ ನೀಡಿದ್ದಾರೆ.

ಶಿವಾಜಿ ಚಿತ್ರವಿರುವ ಟಿ-ಶರ್ಟ್ ಧರಿಸಿ ರಿತೇಶ್ ದೇಶ್‌ಮುಖ್ ಪಾರ್ಟಿ; ಕ್ಷಮೆ ಕೇಳಿದ ನಟ
Riteish Deshmukh

Updated on: Jun 04, 2026 | 8:46 PM

ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಖ್ಯಾತ ನಟ-ನಿರ್ದೇಶಕ ರಿತೇಶ್ ದೇಶ್‌ಮುಖ್ (Riteish Deshmukh) ಅವರು ತಮ್ಮ ಇತ್ತೀಚಿನ ಸೂಪರ್ ಹಿಟ್ ಮರಾಠಿ ಸಿನಿಮಾ ‘ರಾಜಾ ಶಿವಾಜಿ’ (Raja Shivaji) ಚಿತ್ರದ ಸಕ್ಸಸ್ ಪಾರ್ಟಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿರುವ ವಿವಾದಕ್ಕೆ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಪಾರ್ಟಿಯ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಅವರ ಉಡುಪು ಮತ್ತು ನಡತೆಯ ಬಗ್ಗೆ ಕೇಳಿಬಂದಿದ್ದ ಗಂಭೀರ ಆರೋಪಗಳನ್ನು ಖಡಕ್ ಆಗಿ ನಿರಾಕರಿಸಿದ್ದಾರೆ.

‘ರಾಜಾ ಶಿವಾಜಿ’ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಯಶಸ್ಸಿನ ಬಳಿಕ ಚಿತ್ರತಂಡಕ್ಕೆ ಧನ್ಯವಾದ ತಿಳಿಸಲು ಈ ಖಾಸಗಿ ಪಾರ್ಟಿಯನ್ನು ಆಯೋಜಿಸಲಾಗಿತ್ತು ಎಂದು ರಿತೇಶ್ ತಿಳಿಸಿದ್ದಾರೆ. ತಾವು ಛತ್ರಪತಿ ಶಿವಾಜಿ ಮಹಾರಾಜರ ಪರಮ ಭಕ್ತರಾಗಿದ್ದು, ಸಾರ್ವಜನಿಕರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸುವುದು ತಮ್ಮ ಕರ್ತವ್ಯ ಎಂದು ಭಾವಿಸಿ ಅವರು ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

ಪಾರ್ಟಿಯ ವೇಳೆ ರಿತೇಶ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಸಂಭ್ರಮಿಸುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ವಿನಮ್ರವಾಗಿ ಉತ್ತರಿಸಿರುವ ರಿತೇಶ್, ‘ಶಿವಾಜಿ ಮಹಾರಾಜರ ಚಿತ್ರವಿರುವ ಟಿ-ಶರ್ಟ್ ಧರಿಸಿ ಪಾರ್ಟಿ ಮಾಡುವ ಮೂಲಕ ಅವರಿಗೆ ಅಪಮಾನ ಮಾಡುವ ಯಾವುದೇ ಉದ್ದೇಶ ನನಗಿರಲಿಲ್ಲ. ಸಿನಿಮಾದ ಪ್ರಚಾರದ ವೇಳೆ ನಾನು ಅದೇ ಟಿ-ಶರ್ಟ್ ಧರಿಸಿದ್ದೆ. ಅಂದು ಪ್ರಚಾರದ ಕೆಲಸ ಮುಗಿಸಿ ನೇರವಾಗಿ ಪಾರ್ಟಿಗೆ ಬರಬೇಕಾದ್ದರಿಂದ, ಉಡುಪು ಬದಲಾಯಿಸಲು ಸಾಧ್ಯವಾಗಲಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ಕ್ಷಮೆಯಾಚಿಸಿದ್ದಾರೆ.

ರಿತೇಶ್ ದೇಶ್‌ಮುಖ್ ವೈರಲ್ ವಿಡಿಯೋ:

ಇದೇ ಪಾರ್ಟಿಯಲ್ಲಿ ರಿತೇಶ್ ದೇಶ್‌ಮುಖ್ ಮದ್ಯ ಸೇವಿಸುತ್ತಿದ್ದರು ಎಂಬ ಆರೋಪಗಳೂ ಕೇಳಿಬಂದಿದ್ದವು. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಅವರು, ‘ನಾನು ನನ್ನ ಜೀವನದಲ್ಲಿ ಇದುವರೆಗೂ ಎಂದೂ ಮದ್ಯ ಸೇವಿಸಿಲ್ಲ, ಮುಂದಿನ ದಿನಗಳಲ್ಲೂ ಅದನ್ನು ಮುಟ್ಟುವುದಿಲ್ಲ. ಆದ್ದರಿಂದ ಇಂತಹ ಆರೋಪಗಳು ಸತ್ಯಕ್ಕೆ ತೀರಾ ದೂರವಾಗಿವೆ. ಈ ವಿಡಿಯೋ ಚಿತ್ರೀಕರಿಸಿದ ವ್ಯಕ್ತಿಗೆ ನಮ್ಮ ಪಾರ್ಟಿಗೆ ಆಹ್ವಾನವೇ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಆದಾಗ್ಯೂ, ನನ್ನ ಈ ಕ್ರಿಯೆಯಿಂದ ಯಾರದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ಶಿವಾಜಿ ಮಹಾರಾಜರ ಒಬ್ಬ ಅನುಯಾಯಿ ಆಗಿ ನಾನು ಮನಸಾರೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ರಿತೇಶ್ ಹೇಳಿದ್ದಾರೆ. ಈ ಮೂಲಕ ಅವರು ಎಲ್ಲ ವಿವಾದಗಳಿಗೆ ಫುಲ್ ಸ್ಟಾರ್ ಇಟ್ಟಿದ್ದಾರೆ. ಶಿವಾಜಿ ಮಹಾರಾಜರ ಬಗ್ಗೆ ತಮಗೆ ಅಪಾರ ಗೌರವ ಇದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರದಿಂದ ರಿತೇಶ್​​ಗೆ ದೊಡ್ಡ ಗೆಲುವು; ಸಿನಿಮಾ ಕಂಡ ಲಾಭ ಎಷ್ಟು?

‘ಛತ್ರಪತಿ ಶಿವಾಜಿ ಮಹಾರಾಜರು ನಮ್ಮೆಲ್ಲರ ನಂಬಿಕೆ, ಸ್ಫೂರ್ತಿ ಮತ್ತು ಸ್ವಾಭಿಮಾನದ ಸಂಕೇತ. ಅವರ ಮೇಲೆ ನನ್ನ ಹೃದಯದಲ್ಲಿ ಅಪಾರ ಗೌರವ, ಪ್ರೀತಿ ಮತ್ತು ನಿಷ್ಠೆ ಇದೆ. ಈ ಭಾವನೆ ಇಂದಿಗೂ ಮತ್ತು ಎಂದೆಂದಿಗೂ ಹೀಗೆಯೇ ಇರುತ್ತದೆ. ಜೈ ಶಿವರಾಯ್’ ಎಂದು ಬರೆಯುವ ಮೂಲಕ ರಿತೇಶ್ ದೇಶ್‌ಮುಖ್ ಅವರು ವಿವಾದವನ್ನು ಅಂತ್ಯಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us